ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ
ಪಟ್ಟಣದ ಮುರಿನಕಟ್ಟೆ ಹಿಂದೂಗಳು ಪೂಜಿಸುವ ಸ್ಥಳ. ಇದಕ್ಕೆ ಇತಿಹಾಸ ಇದ್ದು, ಇಂತಹ ಪ್ರದೇಶದಲ್ಲಿ ನಿರ್ಮಿಸಿದ ಕಟ್ಟೆಯನ್ನು ಮುಸ್ಲಿಮರು ಸಾವಿರಾರು ಜನರು ಆಗಮಿಸಿ ಧ್ವಂಸಗೊಳಿಸಿರುವುದು ತೀವ್ರ ಖಂಡನೀಯವಾಗಿದ್ದು, ಕಟ್ಟೆಯನ್ನು 48 ಗಂಟೆಯೊಳಗೆ ಮರುಸ್ಥಾಪನೆ ಮಾಡದೇ ಇದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರಾಮಕೃಷ್ಣ ನಾಯ್ಕ ಹೇಳಿದರು.
ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಮುಟ್ಟಳ್ಳಿಯ ಲಕ್ಷ್ಮೀನರಸಿಂಹ ದೇವಸ್ಥಾನದ ಸಭಾಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಮುರಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ತೆರವು ಆಗುವುದರಿಂದ ಇದಕ್ಕೆ ಕಟ್ಟೆ ಕಟ್ಟುವಂತೆ ಹಲವು ಬಾರಿ ನಾವು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವನ್ನು ಆಗ್ರಹಿಸುತ್ತಲೇ ಬಂದಿದ್ದೆವು. ಆದರೆ ಮೇ 24 ರಂದು ಭಾನುವಾರ ಬೆಳಗ್ಗೆ ಮುರಿನಕಟ್ಟೆ ಪ್ರದೇಶದಲ್ಲಿ ಕಟ್ಟೆ ನಿರ್ಮಿಸಲು ತಾಲೂಕು ಆಡಳಿತ ನಕ್ಷೆ ಮಾಡಿಕೊಟ್ಟಂತೆ ಪೊಲೀಸ್ ಭದ್ರತೆಯಲ್ಲಿ ಹಿಂದೂ ಕಾರ್ಯಕರ್ತರು ಅಡಿಗಲ್ಲು ಪೂಜೆ ನೆರವೇರಿಸಿ ಕಟ್ಟೆ ನಿರ್ಮಾಣ ಮಾಡಿದ್ದೆವು. ಇದಕ್ಕೆ ಕೆಲ ಮುಸ್ಲಿಮರು ಆಕ್ಷೇಪಿಸಿದಾಗ ಸ್ಥಳದಲ್ಲಿದ್ದ ಪೊಲೀಸರು, ಕಂದಾಯ ಅಧಿಕಾರಿಗಳು ಅವರನ್ನು ಸಮಾಧಾನಿಸಿ ಕಳುಹಿಸಿದ್ದರು. ಆದರೆ ರಾತ್ರಿ ಏಕಾಏಕಿ ಸಾವಿರಾರು ಮುಸ್ಲಿಮರು ಆಗಮಿಸಿ ನಾವು ಶ್ರದ್ಧಾಭಕ್ತಿ ಭಾವದಿಂದ ಪೂಜಿಸಿ ನಿರ್ಮಿಸಿದ್ದ ಮುರಿನಕಟ್ಟೆಯನ್ನು ಚಪ್ಪಲಿ ಕಾಲಿನಿಂದ ಒದ್ದಿದ್ದಲ್ಲದೇ ಅದನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರ ಎದುರೇ ಈ ಕೃತ್ಯ ನಡೆಸಿದ್ದು, ಇದನ್ನು ಹಿಂದೂಪರ ಸಂಘಟನೆಗಳ ಒಕ್ಕೂಟ ಬಲವಾಗಿ ಖಂಡಿಸುತ್ತದೆ ಎಂದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆ ಧ್ವಂಸದ ಬಗ್ಗೆ ನ್ಯಾಯ ಕೇಳಿದ ಹಿಂದೂಗಳ ಮೇಲಿನ ಕೇಸನ್ನು ತಕ್ಷಣ ವಾಪಾಸ್ ಪಡೆಯಬೇಕು. ಮುಸ್ಲಿಮರು ಕಟ್ಟೆ ಧ್ವಂಸ ಮಾಡಿದ್ದರಿಂದ ಹಿಂದೂಗಳಿಗೆ ನೋವಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದರು.
ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ ನಾಯ್ಕ, ಪ್ರಮುಖರಾದ ಭಾಸ್ಕರ ದೈಮನೆ, ನಾಗರಾಜ ನಾಯ್ಕ, ಸುಬ್ರಾಯ ನಾಯ್ಕ ಮುಂತಾದವರಿದ್ದರು.