ಲೋಕಾಗೆ ಜಿಲ್ಲಾಡಳಿತದಿಂದ ಸಾವಿರಾರು ಪುಟಗಳ ಮಾಹಿತಿ ಸಲ್ಲಿಕೆ

KannadaprabhaNewsNetwork |  
Published : Aug 03, 2026, 01:15 AM IST
೨ಕೆಎಲ್‌ಆರ್-೧ಕೋಲಾರ ತಹಸೀಲ್ದಾರ್ ಡಾ.ಎಂ.ನಯನ ಹಾಗೂ ಮಾಲೂರು ತಹಸೀಲ್ದಾರ್ ರೂಪಾ. | Kannada Prabha

ಸಾರಾಂಶ

ತಹಸೀಲ್ದಾರ್‌ಗಳಾದ ಡಾ.ಎಂ.ನಯನ ಹಾಗೂ ಮಾಲೂರು ತಹಸೀಲ್ದಾರ್ ಎಂ.ವಿ.ರೂಪಾ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದೆ ಕರ್ತವ್ಯಲೋಪ ಎಸಗಿದ್ದಾರೆಂಬ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.

ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣ । ತಹಸೀಲ್ದಾರ್‌ಗಳಿಂದ ತನಿಖೆಗೆ ಸಹಕಾರ: ಸರ್ಕಾರಕ್ಕೆ ವರದಿ

ಕನ್ನಡಪ್ರಭ ವಾರ್ತೆ ಕೋಲಾರ

ತಾಲೂಕು ಕಚೇರಿಗಳಲ್ಲಿ ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮ ಕಡತಗಳ ಸೃಷ್ಟಿ ಪ್ರಕರಣಕ್ಕೆ ಕೋಲಾರ ಹಾಗೂ ಮಾಲೂರು ತಹಸೀಲ್ದಾರ್‌ಗಳು ಸಹಕಾರ ನೀಡಿದ್ದು, ಎಸಿ ಹಂತದಲ್ಲಿ ಶೋಕಾಸ್ ನೋಟಿಸ್ ಮುಕ್ತಾಯಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಲೋಕಾಯುಕ್ತ ಪೊಲೀಸರು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ, ತನಿಖಾಧಿಕಾರಿಗಳ ನಿರ್ದೇಶನದಂತೆ ತನಿಖೆಗೆ ಅಗತ್ಯವಿದ್ದ ಸಾವಿರಾರು ಪುಟಗಳ ಅಧಿಕೃತ ದಾಖಲೆಗಳನ್ನು ಕ್ರೋಢೀಕರಿಸಿ ಸಲ್ಲಿಸುವಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಸಹಕಾರ ನೀಡಿದ್ದಾರೆಂಬ ವಿಷಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮರ್ಪಕ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಎಂ.ಆರ್.ರವಿ ಅವರು, ತಹಸೀಲ್ದಾರ್‌ಗಳಾದ ಡಾ.ಎಂ.ನಯನ ಹಾಗೂ ಮಾಲೂರು ತಹಸೀಲ್ದಾರ್ ಎಂ.ವಿ.ರೂಪಾ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದೆ ಕರ್ತವ್ಯಲೋಪ ಎಸಗಿದ್ದಾರೆಂಬ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.

ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ತಹಸೀಲ್ದಾರ್ ಡಾ.ಎಂ.ನಯನ ಅವರು ಕಾಲಮಿತಿಯಲ್ಲಿ ಅಗತ್ಯ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದ್ದು, ಲೋಕಾ ತನಿಖೆಗೆ ಅಗತ್ಯ ಸಹಕಾರ ಕೊಟ್ಟು ೩ ಸಾವಿರಕ್ಕೂ ಹೆಚ್ಚು ಪುಟಗಳ ದಾಖಲೆ ಸಲ್ಲಿದ್ದಾರೆ ಎನ್ನಲಾಗಿದೆ.

ಲೋಕಾಯುಕ್ತ ಪೊಲೀಸರ ನಿರ್ದೇಶನದಂತೆ ಕೋಲಾರ ತಾಲೂಕಿಗೆ ಸಂಬಂಧಿಸಿದ ೨೨೪ ಕಡತಗಳ ಗ್ರಾಮವಾರು ಮತ್ತು ಸರ್ವೆ ನಂಬರ್‌ವಾರು ಪ್ರತ್ಯೇಕಿಸಿ, ದೃಢೀಕರಿಸಿದ ಹಸ್ತಪ್ರತಿ, ಗಣಕೀಕೃತ ಪಹಣಿ ಮತ್ತು ಮೂಟೇಷನ್ ಒಳಗೊಂಡ ಬೃಹತ್ ವರದಿಯನ್ನು ೨೦೨೬ರ ಏಪ್ರಿಲ್ ೨೩ ರಂದೇ ತನಿಖಾಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಇದರೊಂದಿಗೆ ತಾಲೂಕು ಕಚೇರಿಯಲ್ಲಿದ್ದ ಚಲನವಲನ, ಸಿಬ್ಬಂದಿಯ ಜವಾಬ್ದಾರಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಇಲಾಖೆಗಳ ವಿವರಗಳಿದ್ದ ವರದಿಯನ್ನು ೨೦೨೬ರ ಮೇ.೩೦ ರಂದು ಸಹಾಯಕ ಆಯುಕ್ತರಿಗೆ ಸಲ್ಲಿಸಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ.

ಇನ್ನು ಮಾಲೂರಿನ ತಹಸೀಲ್ದಾರ್ ರೂಪಾ ಅವರು ಸಹಾಯಕ ಆಯುಕ್ತರಿಗೆ ಅಗತ್ಯ ವಿವರಗಳನ್ನು ಜುಲೈ ೨೪, ೨೦೨೬ ರಂದು ಲಿಖಿತವಾಗಿ ಸಲ್ಲಿಸಿದ್ದಾರೆ. ಕೋಲಾರ ಹಾಗೂ ಮಾಲೂರು ತಾಲೂಕು ಆಡಳಿತವು ನಿತ್ಯದ ಕಂದಾಯ ಕಾರ್ಯಗಳ ಜೊತೆಗೆ ಲೋಕಾಯುಕ್ತ ಪ್ರಕರಣಕ್ಕೂ ಆದ್ಯತೆಯ ಮೇರೆಗೆ ಸ್ಪಂದಿಸಿದ್ದಾರೆಂಬ ಮಾಹಿತಿಯನ್ನು ವರದಿ ಮೂಲಕ ಸರ್ಕಾರಕ್ಕೆ ತಿಳಿಸಲಾಗಿದೆ.

ಬಾಕ್ಸ್

ಪ್ರಕರಣ ಮುಕ್ತಾಯಗೊಳಿಸಿ ಜಿಲ್ಲಾಡಳಿತ!

ಮಧ್ಯಂತರ ವರದಿ ತಲುಪುವಲ್ಲಿ ಆದ ಕೆಲ ತಾಂತ್ರಿಕ ಕಾಲಾವಕಾಶದ ಆಧಾರದ ಮೇಲೆ ನೀಡಲಾಗಿದ್ದ ಕಾರಣ ಕೇಳಿ ನೋಟೀಸ್‌ಗೆ ತಹಸೀಲ್ದಾರ್‌ಗಳು ನೀಡಿದ ಸಮಜಾಯಿಷಿ ಹಾಗೂ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಸಹಾಯಕ ಆಯುಕ್ತರು, ತಹಸೀಲ್ದಾರ್‌ಗಳ ಹಂತದಲ್ಲಿ ಯಾವುದೇ ಲೋಪವಾಗಿಲ್ಲ ಎನ್ನುವುದನ್ನು ಮನಗಂಡು ಅವರಿಗೆ ಜಾರಿ ಮಾಡಿದ್ದ ಕರ್ತವ್ಯ ಲೋಪದ ಶೋಕಾಸ್ ನೋಟೀಸ್‌ನ್ನು ಮುಕ್ತಾಯಗೊಳಿಸಿದ್ದು, ಜಿಲ್ಲಾಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.ಬಾಕ್ಸ್

ಏನಿದು ಸುರೇಶ್ ಬಾಬು ಪ್ರಕರಣ?

ಕೋಲಾರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆ ಇಲಾಖೆಯ ಅಕ್ಷಕರಾಗಿದ್ದ ಜಿ.ಸುರೇಶ್ ಬಾಬು ಹಾಗೂ ಇತರೆ ಅಕಾರಿಗಳು, ಕಚೇರಿಯ ಮೂಲ ಕಡತಗಳನ್ನು ಅನಕೃತವಾಗಿ ಖಾಸಗಿ ಸ್ಥಳಗಳಿಗಿಗೆ ಕೊಂಡೊಯ್ದು ಭೂ ಮಂಜೂರಾತಿ ಮತ್ತು ಪೋಡಿ ಕಡತಗಳನ್ನು ಸೃಷ್ಟಿಸುತ್ತಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.

ಅದರಂತೆ ಸುರೇಶ್ ಬಾಬು ಮನೆ ಹಾಗೂ ಇತರೆ ಖಾಸಗಿ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದಂತಹ ಸಂದರ್ಭದಲ್ಲಿ ೪೦೮ ಕಡತಗಳು ಸಿಕ್ಕಿದ್ದವು. ಆ ಪೈಕಿ ಸರಕಾರಿ ಹಾಗೂ ಹಿಡುವಳಿ ಜಮೀನಿಗೆ ಸಂಬಂಧಿಸಿದ ಮೂಲ ಕತಡಗಳು, ನಕಲಿ ಕಡತಗಳು, ಚಲನವಲನ ಪ್ರತಿಗಳು ಹಾಗೂ ಜೆರಾಕ್ಸ್ ಪ್ರತಿಗಳು ಪತ್ತೆಯಾಗಿದ್ದವು. ಅದರಂತೆ ಮೂಲ ಕಡತ ಹೊರಗೆ ಹೋಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಶಿಫಾರಸ್ಸು ಮಾಡಿತ್ತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಗ್ಗಿದ ಪುಷ್ಯ ಮಳೆ ಅಬ್ಬರ: ನಿಲ್ಲದ ಭದ್ರೆಯ ರೌದ್ರಾವತಾರ
ರಾಜಕೀಯ ಕ್ಷೇತ್ರದಲ್ಲೂ 2ಎ‌ ಮೀಸಲಾತಿ ನೀಡಿ