ಶಿಕ್ಷಕರಿಗೆ ಪಠ್ಯೇತರ ಹೊರೆ ತಪ್ಪಿಸಲು ಜಿಲ್ಲಾಡಳಿತ ಸೂಕ್ತ ಕ್ರಮ

KannadaprabhaNewsNetwork | Published : Jun 25, 2025 11:47 PM

ಶಿಕ್ಷಕರಿಗೆ ಪಠ್ಯ ಬೋಧನೆ ಜತೆಗೆ ಶಾಲಾ ಅವಧಿಯಲ್ಲಿ ಇತರ ಆಡಳಿತಾತ್ಮಕ ಹಾಗೂ ಪೌಷ್ಟಿಕ ಆಹಾರ ವಿತರಣೆ ಕಾರ್ಯ ತೀವ್ರ ತೊಂದರೆ ಆಗುತ್ತಿದೆ ಎಂಬ ದೂರುಗಳಿವೆ. ಇದರಿಂದ ಪಾಠ ಕಲಿಸುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಬಿಸಿಯೂಟ ನೀಡುವ ಏಜೆನ್ಸಿ ಮೂಲಕವೇ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಅಥವಾ ಅದಕ್ಕಾಗಿ ಬೇರೆ ಏಜೆನ್ಸಿ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ.

ಧಾರವಾಡ: ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆಗಳ ಹೊರೆ ಸಾಕಷ್ಟಿದ್ದು, ಮೊಟ್ಟೆ, ಬಾಳೆಹಣ್ಣು ವಿತರಣೆಯಲ್ಲಿ ಶಿಕ್ಷಕರಿಗೆ ಆಗುತ್ತಿರುವ ತೊಂದರೆ, ಅನಾನುಕೂಲತೆಗಳನ್ನು ಪರಿಹರಿಸಲು ಸಾಕಷ್ಟು ಬಾರಿ ಶಿಕ್ಷಕ ವಲಯ ಆಡಳಿತದ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಮೊದಲ ಬಾರಿಗೆ ಶಿಕ್ಷಕರ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ದುಂಡು ಮೇಜಿನ ಸಭೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಪ್ರಧಾನಗುರುಗಳು, ಮುಖ್ಯೋಪಾಧ್ಯಾಯರು, ಸಿ.ಆರ್.ಪಿ, ಬಿ.ಆರ್.ಪಿ. ಬಿಸಿಯೂಟದ ಅಧಿಕಾರಿಗಳ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲೆಗೆ ಹಿಂದಿನ ಶೈಕ್ಷಣಿಕ ಶ್ರೀಮಂತಿಕೆ ಮರುಕಳಿಸುವಂತೆ ಮಾಡಿ, ಮತ್ತೇ ಧಾರವಾಡ ಜಿಲ್ಲೆಯನ್ನು ವಿದ್ಯಾಕಾಶಿಯನ್ನಾಗಿಸಲು ಎಲ್ಲ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಮೊಟ್ಟೆ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ: ಶಿಕ್ಷಕರಿಗೆ ಪಠ್ಯ ಬೋಧನೆ ಜತೆಗೆ ಶಾಲಾ ಅವಧಿಯಲ್ಲಿ ಇತರ ಆಡಳಿತಾತ್ಮಕ ಹಾಗೂ ಪೌಷ್ಟಿಕ ಆಹಾರ ವಿತರಣೆ ಕಾರ್ಯ ತೀವ್ರ ತೊಂದರೆ ಆಗುತ್ತಿದೆ ಎಂಬ ದೂರುಗಳಿವೆ. ಇದರಿಂದ ಪಾಠ ಕಲಿಸುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಬಿಸಿಯೂಟ ನೀಡುವ ಏಜೆನ್ಸಿ ಮೂಲಕವೇ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಅಥವಾ ಅದಕ್ಕಾಗಿ ಬೇರೆ ಏಜೆನ್ಸಿ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.

ಹಾಜರಾತಿಗೆ ಒಂದೇ ಆ್ಯಪ್‌: ಅನೇಕ ಶಾಲೆಗಳಲ್ಲಿ ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯವಿಲ್ಲ. ಹೀಗಾಗಿ ಮೊಬೈಲ್ ಮೂಲಕ ಮಕ್ಕಳ ಹಾಜರಾತಿ, ಮೊಟ್ಟೆ ವಿತರಿಣೆ, ಹಾಲು ವಿತರಿಸಿದ ಬಗ್ಗೆ ಮಕ್ಕಳ ಹಾಜರಾತಿಯನ್ನು ಪ್ರತ್ಯೇಕ ಆ್ಯಪ್‌ಗಳಲ್ಲಿ ಆನ್‌ಲೈನ್ ಮೂಲಕ ದಾಖಲಿಸಿಸುವ ಅಗತ್ಯವಿದೆ. ಶಾಲಾ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಒಂದೇ ಆ್ಯಪ್‌ದಲ್ಲಿ ವಿವಿಧ ಹಾಜರಾತಿ ದಾಖಲಿಸಲು ಅನುವು ಮಾಡಲಾಗುತ್ತದೆ ಎಂದ ಅವರು, ಶಿಕ್ಷಕರ ಸಮಸ್ಯೆಗಳನ್ನು ಕಡಿಮೆ ಮಾಡಿ, ಅವರು ಪ್ರತಿದಿನ ಶಾಲೆಯಲ್ಲಿ ಇದ್ದು, ಮಕ್ಕಳಿಗೆ ನಿಯಮಿತ ವರ್ಗಗಳನ್ನು ತೆಗೆದುಕೊಂಡು ಪೂರ್ಣಪ್ರಮಾಣದಲ್ಲಿ ಶೈಕ್ಷಕಣಿಕ ಕಾರ್ಯಗಳಲ್ಲಿ ನಿರತರಾಗಬೇಕು. ಅದಕ್ಕಾಗಿ ಅವರಿಗೆ ಎಲ್ಲ ಸಹಕಾರ ನೀಡಲು ಜಿಲ್ಲಾಡಳಿತವು ಪ್ರತಿ ಸಿಆರ್‌ಪಿ ಕ್ಲಸ್ಟರ್‌ಗೆ ಒಬ್ಬ ತಾಂತ್ರಿಕ ಸಹಾಯಕ ಸಿಬ್ಬಂದಿಯನ್ನು ಸಿಎಸ್‌ಆರ್ ಅನುದಾನದಲ್ಲಿ ಪೂರೈಸಲು ಪ್ರಯತ್ನಿಸಲಾಗುತ್ತದೆ ಎಂದರು.

ಎಲ್ಲಿ ಅತಿಥಿ ಶಿಕ್ಷಕರ ಅವಶ್ಯಕತೆ ಇದೆಯೋ ಅಲ್ಲಿ ಅವರನ್ನು ಕಳುಹಿಸಿ. ತಮಗೆ ಬೇಕಾದ ಹಾಗೆ ಇಷ್ಟ ಬಂದಂತೆ ಶಿಕ್ಷಕರನ್ನು ಬೇರೆ ಬೇರೆ ಕಡೆ ವರ್ಗಾವಣೆ, ನಿಯೋಜನೆ ಮಾಡಿದರೆ ನೇರವಾಗಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ, ಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಯಾವುದೇ ಶಿಕ್ಷಕರನ್ನು, ಅತಿಥಿ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ, ನಿಯೋಜನೆ ಮಾಡಬೇಕಾದರೆ ಜಿಪಂ ಸಿಇಓ ಅನುಮತಿ ಪಡೆದು ಮಾಡಬೇಕು ಎಂದು ಡಿಡಿಪಿಐಗೆ ಸೂಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿದರು. ಸಭೆಯಲ್ಲಿ ಪ್ರೊಫೆಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಡಿಡಿಪಿಐ ಎಸ್.ಎಸ್. ಕೆಳದಿಮಠ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಗಂಗಾಧರ ದೊಡಮನಿ, ಶುಭಾ. ಪಿ, ಗೋಪಾಲ ಲಮಾಣಿ, ತಾಜುದ್ದೀನ ಶೇಖ, ರಾಮಕೃಷ್ಣ ಸದಲಗಿ, ಉಮೇಶ ಭೂಮಕ್ಕನವರ, ಡಾ. ರೇಣುಕಾ ಅಮಲಜೇರಿ, ರೂಪಾ ಪುರಂಕರ ಇದ್ದರು. ಮಿಷನ್ ವಿದ್ಯಾಕಾಶಿಯ ಸಂಯೋಜಕ ಡಾ. ಸುರೇಶ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಫಿರೋಜ್ ಗುಡೇನಕಟ್ಟಿ ವಂದಿಸಿದರು.