ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯದ ಬಜೆಟ್ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸುವ ಬಜೆಟ್ ಆಗಿದ್ದು, ಸಂವಿಧಾನ, ಬಹುತ್ವದ ಬಗ್ಗೆ ಮಾತನಾಡುವವರು ಕೇವಲ ಒಂದು ಸಮುದಾಯ ಓಲೈಕೆ ಮಾಡುತ್ತಿರುವುದು ತೀರಾ ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದರು.
ಅವರು ಶನಿವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ರಾಜ್ಯ ಸರ್ಕಾರದ ಬಜೆಟ್ ವಿರೋಧಿಸಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಜನತೆಯ ನಿರೀಕ್ಷೆ ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೇ ಆಕರ್ಷಕ ಕಾರ್ಯಕ್ರಮ ಘೋಷಿಸಿ ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ. ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ.
ಕೃಷಿ ವಲಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೈತರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ. ದಿನೇ ದಿನೇ ಗ್ರಾಮೀಣ ಪ್ರದೇಶಗಳಿಂದ ಗುಳೇ ಹೋಗುವ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯುವ ಯಾವುದೇ ಕಾರ್ಯಕ್ರಮ ಪ್ರಕಟಿಸಿಲ್ಲ. ಸರ್ಕಾರಿ ಶಾಲೆಗಳ ಕಟ್ಟಡಗಳ ವಿಸ್ತರಣೆ, ನವೀಕರಣಕ್ಕೆ ಬಜೆಟ್ನಲ್ಲಿ ಯಾವುದೇ ಹಣ ನೀಡದೇ ಕೇವಲ 5 ಸಾವಿರ ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವುದಾಗಿ ಘೋಷಿಸಿದ್ದಾರೆ.9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ಖಂಡನಾರ್ಹ, ಸಾಂಸ್ಕೃತಿಕ ವಲಯ ಹಾಗೂ ಪ್ರವಾಸೋದ್ಯಮ ಬಹುವಾಗಿ ವಿಸ್ತರಿಸುವ ನಿರ್ದಿಷ್ಟವಾದ ಯೋಜನೆ ಬಜೆಟ್ನಲ್ಲಿ ಪ್ರಕಟಿಸದೇ ಈ ಕ್ಷೇತ್ರಗಳ ಬೆಳವಣಿಗೆ ಪ್ರೋತ್ಸಾಹ ನೀಡುವ ಪೊಳ್ಳು ಭರವಸೆ ನೀಡಲಾಗಿದೆ. ಪರಿಶಿಷ್ಟ, ಹಿಂದುಳಿದ ಹಾಗು ಅತಿ ಹಿಂದುಳಿದ ಸಮುದಾಯದವರ ಜಪ ಮಾಡಿ ರಾಜಕೀಯವಾಗಿ ಬೆಳೆದು ಬಂದ ಸಿದ್ದರಾಮಯ್ಯನವರು ಈ ಸಮುದಾಯಗಳ ಏಳಿಗೆಗೆ ಯಾವ ಯೋಜನೆಗಳನ್ನು ಪ್ರಕಟಿಸಿಲ್ಲ. ವಿವಿಧ ಹಿಂದುಳಿದ ವರ್ಗಗಳ ನಿಗಮಗಳಿಗೆ ಈ ಹಿಂದಿನ ಬಜೆಟ್ನಲ್ಲಿ ಘೋಷಣೆಯಾದ ಪೂರ್ಣ ಪ್ರಮಾಣದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ, ಕುಲಕಸುಬು ಆಧಾರಿತ ಸಮುದಾಯಗಳ ಬದುಕು ರಕ್ಷಿಸಲು ಯಾವುದೇ ಕಾರ್ಯಕ್ರಮ ಕೊಡದೇ ಕೇವಲ ಅಧಿಕಾರಕ್ಕೆ ಬರಲು ಮಾತ್ರ ದಲಿತ, ಹಿಂದುಳಿದವರ ಜಪ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಆರೋಪಿಸಿದರು.
ಜಗನ್ನಾಥಸಾ ಭಾಂಡಗೆ, ರಾಘವೇಂದ್ರ ಯಳವತ್ತಿ, ಉಷಾ ದಾಸರ, ಚಂದ್ರು ತಡಸದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಹಾಗು ಇನ್ನೂ ಹಲವಾರು ಮುಖಂಡರು ಮಾತನಾಡಿದರು.ಈ ಸಂದರ್ಭದಲ್ಲಿ ವಿಜಯಕುಮಾರ ಗಡ್ಡಿ, ಭದ್ರೇಶ ಕುಸ್ಲಾಪೂರ, ಅಶೋಕ ಸಂಕಣ್ಣವರ, ಬೂದಪ್ಪ ಹಳ್ಳಿ, ಅನೀಲ ಅಬ್ಬಿಗೇರಿ, ಭೀಮಸಿಂಗ ರಾಠೋಡ, ವಿನಾಯಕ ಮಾನ್ವಿ, ನಾಗರಾಜ ಕುಲಕರ್ಣಿ, ಬಿ.ಎಸ್. ಚಿಂಚಲಿ, ಸುಧೀರ ಕಾಟಿಗರ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ಶಿವು ಹಿರೇಮನಿಪಾಟೀಲ, ನಾಗರಾಜ ತಳವಾರ, ನವೀನ ಕೊಟೆಕಲ್, ಮಹಾದೇವಪ್ಪ ಹಡಪದ, ಮುತ್ತಪ್ಪ ಮೂಲಿಮನಿ, ಅಪ್ಪಣ್ಣ ಟೆಂಗಿನಕಾಯಿ, ಲಕ್ಷ್ಮಣ ದೊಡ್ಮನಿ, ಮುತ್ತಣ್ಣ ಮುಶಿಗೇರಿ, ಶಂಕರ ಕಾಕಿ, ರವಿ ವಗ್ಗನವರ, ಬಸವರಾಜ ಚವ್ಹಾಣ, ಅವಿನಾಶ ಹೊನಗುಡಿ, ಅಪ್ಪು ನಸಸ್ತೆಮಠ, ಅಪ್ಪಣ್ಣ ಟೆಂಗಿನಕಾಯಿ, ಪಂಚಾಕ್ಷರಿ ಹರ್ಲಾಪೂರಮಠ, ಛಗನ ರಾಜಪುರೋಹಿತ, ಸಿದ್ರಾಮೇಶ ಹಿರೇಮಠ, ಮಹಾಂತೇಶ ಕಾತರಗಿ, ವಿಜಯಲಕ್ಷ್ಮೀ ದಿಂಡೂರ, ಲಕ್ಷ್ಮೀ ಕಾಕಿ, ಕಮಲಾಕ್ಷಿ ಗೊಂದಿ, ಮಂಜುನಾಥ ಶಾಂತಗೇರಿ, ರಮೇಶ ವಕ್ಕಾರ, ಬಸವರಾಜ ನರೆಗಲ್, ವಿನಾಯಕ ಹೊರಕೇರಿ, ಧರ್ಮರಾಜ ಕೊಂಚಿಗೇರಿ, ಕಾಳು ತೊಟದ, ಮಹೇಶ ದಾಸರ, ಕಿರಣ ಕಾಲಾಲ, ಆನಂದ ಗೌಳಿ, ಕಿರಣ ದಾಟನಾಳ, ಪ್ರಕಾಶ ಕೊತಂಬರಿ, ನಿಂಗಪ್ಪ ಬೂಶಿಯವರ, ಮಹಾಂತೇಶ ಕಾತರಗಿ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರು, ಮುಖಂಡರುಗಳು ಉಪಸ್ಥಿತರಿದ್ದರು.