ಮಡಿಕೇರಿ: ತಾಲೂಕಿನ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿ ಮತ್ತು ಉಡೋತ್ಮೊಟ್ಟೆ ಬಳಿಯ ಗಾಜಿನ ಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಮೊದಲಿಗೆ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಗಾಜಿನ ಸೇತುವೆ ನಿರ್ಮಾಣ ಮಾಡಿರುವ ಜಾಗ, ಗಾಜಿನ ಸೇತುವೆ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗಿದೆಯೇ, ನಿರ್ಮಾಣ ಸಂದರ್ಭದಲ್ಲಿ ಎಂಜಿನಿಯರ್ಗಳ ದೃಢೀಕರಣ ಪತ್ರ, ಹಾಗೆಯೇ ಪ್ರವಾಸಿಗರ ಅನುಕೂಲಕ್ಕಾಗಿ ವಾಹನ ನಿಲುಗಡೆಗೆ ಸ್ಥಳಾವಕಾಶ, ಪ್ರವಾಸಿಗರ ವೀಕ್ಷಣೆಗೆ ಎಷ್ಟು ಕಾಲಾವಕಾಶ ಮತ್ತು ಪ್ರವಾಸಿಗರಿಗೆ ನಿಗದಿ ಮಾಡಿರುವ ಶುಲ್ಕ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು. ಬಳಿಕ ಉಡೋತ್ಮೊಟ್ಟೆ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು. ವಾಹನ ನಿಲುಗಡೆಗೆ ಜಾಗ ಇಲ್ಲದಿರುವುದರಿಂದ ಸಾಮಾನ್ಯವಾಗಿ ಓಡಾಡುವ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಬಳಿಕ ಕಡಗದಾಳು ಬಳಿ ರೆಸಾರ್ಟ್ ಒಂದಕ್ಕೆ ಅನುಮತಿ ನೀಡುವ ಸಂಬಂಧ ಹೋಂ ಸ್ಟೇಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಹೋಂಸ್ಟೇ ಮತ್ತು ರೇಸಾರ್ಟ್ನಲ್ಲಿ ಸುರಕ್ಷತೆ ಸಂಬಂಧ ಸಿಸಿಟಿವಿ, ನೋಂದಣಿ ಪುಸ್ತಕ, ದೂರು ನಿರ್ವಹಣಾ ಪುಸ್ತಕ, ವಿದೇಶಿ ಪ್ರವಾಸಿಗರು ಆಗಮಿಸಿದಲ್ಲಿ ಅವರ ಪಾಸ್ಪೋರ್ಟ್, ವಿಮಾನ ಟಿಕೆಟ್, ಗುರುತಿನ ಚೀಟಿ, ಹಾಗೆಯೇ ವಿದೇಶಿ ಪ್ರವಾಸಿಗರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡುವುದು ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಸಮಾಲೋಚಕರಾದ ಜತಿನ್, ಗಾಜಿನ ಸೇತುವೆಯ ಮಾಲೀಕರು, ಹೋಂಸ್ಟೇ/ ರೇಸಾರ್ಟ್ ಮಾಲಿಕರು, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಇದ್ದರು.