ಗಾಜಿನ ಸೇತುವೆ ಸ್ಥಳ ವೀಕ್ಷಿಸಿದ ಜಿಲ್ಲಾಧಿಕಾರಿ

KannadaprabhaNewsNetwork |  
Published : Jun 19, 2026, 02:45 AM IST
ಚಿತ್ರ :  18ಎಂಡಿಕೆ1 : ಗಾಜಿನ ಸೇತುವೆ ಸ್ಥಳ ವೀಕ್ಷಿಸಿದ ಜಿಲ್ಲಾಧಿಕಾರಿ. | Kannada Prabha

ಸಾರಾಂಶ

ತಾಲೂಕಿನ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿ ಮತ್ತು ಉಡೋತ್‌ಮೊಟ್ಟೆ ಬಳಿಯ ಗಾಜಿನ ಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಮಡಿಕೇರಿ: ತಾಲೂಕಿನ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿ ಮತ್ತು ಉಡೋತ್‌ಮೊಟ್ಟೆ ಬಳಿಯ ಗಾಜಿನ ಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಮೊದಲಿಗೆ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಗಾಜಿನ ಸೇತುವೆ ನಿರ್ಮಾಣ ಮಾಡಿರುವ ಜಾಗ, ಗಾಜಿನ ಸೇತುವೆ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗಿದೆಯೇ, ನಿರ್ಮಾಣ ಸಂದರ್ಭದಲ್ಲಿ ಎಂಜಿನಿಯರ್‌ಗಳ ದೃಢೀಕರಣ ಪತ್ರ, ಹಾಗೆಯೇ ಪ್ರವಾಸಿಗರ ಅನುಕೂಲಕ್ಕಾಗಿ ವಾಹನ ನಿಲುಗಡೆಗೆ ಸ್ಥಳಾವಕಾಶ, ಪ್ರವಾಸಿಗರ ವೀಕ್ಷಣೆಗೆ ಎಷ್ಟು ಕಾಲಾವಕಾಶ ಮತ್ತು ಪ್ರವಾಸಿಗರಿಗೆ ನಿಗದಿ ಮಾಡಿರುವ ಶುಲ್ಕ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು. ಬಳಿಕ ಉಡೋತ್‌ಮೊಟ್ಟೆ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು. ವಾಹನ ನಿಲುಗಡೆಗೆ ಜಾಗ ಇಲ್ಲದಿರುವುದರಿಂದ ಸಾಮಾನ್ಯವಾಗಿ ಓಡಾಡುವ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಮಳೆಗಾಲದಲ್ಲಿ ಮುನ್ನೆಚ್ಚರ ವಹಿಸುವ ಸಂಬಂಧ ಈ ಎರಡು ಗಾಜಿನ ಸೇತುವೆ ವೀಕ್ಷಣೆಗೆ ಈ ಹಿಂದೆ ನಿರ್ಬಂಧ ಹೇರಲಾಗಿತ್ತು, ಈ ಬಗ್ಗೆ ಮರುಪರಿಶೀಲಿಸಿ, ಪ್ರವಾಸಿಗರು ಮತ್ತು ಎಲ್ಲರ ಹಿತಾಸಕ್ತಿ ಕಾಪಾಡುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಅಬ್ಬಿಪಾಲ್ಸ್ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಜಂಕ್ಷನ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಾಂದಲ್ ಪಟ್ಟಿಗೆ ತೆರಳುವ ಜೀಪುಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಪ್ರವಾಸಿಗರಿಂದ ಬಾಡಿಗೆ ದರ ಎಷ್ಟು ಪಡೆಯಲಾಗುತ್ತಿದೆ. ವಾಹನ ಮತ್ತು ಚಾಲಕರಿಗೆ ಪರವಾನಗಿ ಇದೆಯೇ ಎಂದು ಮತ್ತಿತರ ಬಗ್ಗೆ ಚಾಲಕರಿಂದ ಮಾಹಿತಿ ಪಡೆದರು.

ಬಳಿಕ ಕಡಗದಾಳು ಬಳಿ ರೆಸಾರ್ಟ್ ಒಂದಕ್ಕೆ ಅನುಮತಿ ನೀಡುವ ಸಂಬಂಧ ಹೋಂ ಸ್ಟೇಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಹೋಂಸ್ಟೇ ಮತ್ತು ರೇಸಾರ್ಟ್ನಲ್ಲಿ ಸುರಕ್ಷತೆ ಸಂಬಂಧ ಸಿಸಿಟಿವಿ, ನೋಂದಣಿ ಪುಸ್ತಕ, ದೂರು ನಿರ್ವಹಣಾ ಪುಸ್ತಕ, ವಿದೇಶಿ ಪ್ರವಾಸಿಗರು ಆಗಮಿಸಿದಲ್ಲಿ ಅವರ ಪಾಸ್‌ಪೋರ್ಟ್, ವಿಮಾನ ಟಿಕೆಟ್, ಗುರುತಿನ ಚೀಟಿ, ಹಾಗೆಯೇ ವಿದೇಶಿ ಪ್ರವಾಸಿಗರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡುವುದು ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಸಮಾಲೋಚಕರಾದ ಜತಿನ್, ಗಾಜಿನ ಸೇತುವೆಯ ಮಾಲೀಕರು, ಹೋಂಸ್ಟೇ/ ರೇಸಾರ್ಟ್ ಮಾಲಿಕರು, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಆರ್‌ಜಿ ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್
ವನ್ಯಪ್ರಾಣಿ ಮಾನವ ಸಂಘರ್ಷ ತಡೆಗೆ ಶಾಶ್ವತ ಕ್ರಮ