-ಜಿಲ್ಲೆಯ ಕರಡು ಮತದಾರರ ಪಟ್ಟಿ ಪ್ರಕಟ । 30,854 ಮಂದಿ ಮೃತ । 70,525 ಮಂದಿ ಶಾಶ್ವತ ವಲಸೆ । 21,537 ಡಬಲ್ ಎಂಟ್ರಿ
ಚಿತ್ರದುರ್ಗ ಜಿಲ್ಲೆಯ ಕರಡು ಮತದಾರ ಪಟ್ಟಿ ಪ್ರಕಟವಾಗಿದ್ದು 1,42,745 ಮಂದಿ ಮತದಾರರನ್ನು ಪಟ್ಟಿಯಿಂದ ಹೊರಗೆ ಹೋಗಿದ್ದಾರೆ. ಇದರಲ್ಲಿ 30,854 ಮಂದಿ ಮೃತ ಪಟ್ಟಿದ್ದರೆ, 70,525 ಮತದಾರರು ಶಾಶ್ವತ ವಲಸೆ ಹಾಗೂ 21,537 ಮಂದಿ ಡಬಲ್ ಎಂಟ್ರಿ ಆಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ. ವೆಂಕಟೇಶ್, ಜಿಲ್ಲೆಯಲ್ಲಿದ್ದ ಒಟ್ಟು 14,40,534 ಮತದಾರರ ಪೈಕಿ ಶೇ. 90.09 ರಷ್ಟು ಅಂದರೆ 12,97,789 ಮತದಾರರ ಮಾಹಿತಿ ಪರಿಶೀಲಿಸಿ ಕರಡು ಪಟ್ಟಿಗೆ ತರಲಾಗಿದೆ. ಕರಡು ಮತದಾರರ ಪಟ್ಟಿಯಿಂದ 1,42,745 ಮತದಾರರು ಹೊರಗುಳಿದಿದ್ದಾರೆ ಎಂದರು.ಸೆಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರಿಂದ ಅರ್ಜಿ ಹಾಗೂ ಆಕ್ಷೇಪಣೆ ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳು, ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಬಿಎಲ್ಒ ಕೇಂದ್ರಗಳಲ್ಲಿ ಒಟ್ಟು 106 ಜನ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಈ ಹಿಂದೆ ಮನೆ ಮನೆ ಮ್ಯಾಪಿಂಗ್ ನಡೆಸಿದಾಗ ಸಿಗದಿರುವ, ಆದರೆ ಎನ್ಯುಮರೇಷನ್ ಫಾರ್ಮ್ ಸಲ್ಲಿಸಿದಾಗ ಪತ್ತೆಯಾಗಿರುವ 18,875 ನೋ ಮ್ಯಾಪಿಂಗ್ ಪ್ರಕರಣಗಳಿವೆ. ಇವರು ಹಿಂದೆ ಮ್ಯಾಪಿಂಗ್ ವೇಳೆ ಏಕೆ ಸಿಗಲಿಲ್ಲ? ಪ್ರಸ್ತುತ ಎಲ್ಲಿ ವಾಸವಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ನಾನೇ ಖುದ್ದಾಗಿ ನೋಟಿಸ್ ಜಾರಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರಿದ್ದರೆ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವಾರು ಇಆರ್ಓ/ಎಇಆರ್ಓಗಳನ್ನು ನೇಮಕ ಮಾಡಲಾಗಿದ್ದು, ಯಾವುದೇ ದೂರುಗಳಿದ್ದರೂ ತಾಲೂಕು ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬಿ ಫಾತಿಮಾ, ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ ನಾಯಕ ಇದ್ದರು.
----------------
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಕೆ.ವೆಂಕಟೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕರಡು ಮತದಾರರ ಪಟ್ಟಿ ಸಿದ್ಧವಾಗಿರುವುದರ ಕುರಿತು ಮಾಹಿತಿ ನೀಡಿದರು.