ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಲಯನ್ಸ್ ಸಂಸ್ಥೆಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅಧ್ಯಕ್ಷರನ್ನು ಗವರ್ನರ್ ಸನ್ಮಾನಿಸಿದರು. ನಂತರ ಮಾತನಾಡಿ, ನಾವು ಯಾವುದೇ ಸೇವೆ ಮಾಡಿದರೂ, ಅದು ಕೇವಲ ಒಂದಿಬ್ಬರಿಗೆ ಮಾತ್ರ ಅನುಕೂಲವಾಗದೆ, ಇಡೀ ಸಮಾಜಕ್ಕೆ ಅದರ ಪ್ರಯೋಜನ ಸಿಗುವಂತಾಗಬೇಕು. ನಾವು ಸಮಾಜಕ್ಕೆ ಕೊಟ್ಟ ನೆರವು ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಕುಟುಂಬಕ್ಕೆ ಹಿಂದಿರುಗುತ್ತದೆ. ಆದುದ್ದರಿಂದ ಉಳ್ಳವರು ಸಮಾಜದಲ್ಲಿ ನೆರವು ಬಯಸುವವರಿಗೆ ಹೆಚ್ಚಿನ ಸಹಾಯ ಮಾಡಬೇಕಿದೆ. ಹುಟ್ಟು ಸಾವಿನ ನಡುವೆ ಜನರ ಮನದಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಿದಲ್ಲಿ, ಮುಂದಿನ ಪೀಳಿಗೆ ನಮ್ಮನ್ನು ನೆನೆಯುವಂತಾಗುತ್ತದೆ. ನಮ್ಮ ಮತ್ತು ಸಂಘ ಸಂಸ್ಥೆಗಳ ಕೆಲಸವನ್ನು ಎಲ್ಲರೂ ಗೌರವಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಎ.ಎಸ್.ಮಹೇಶ್ ವಹಿಸಿದ್ದರು. ಜಿಲ್ಲಾ ಖಜಾಂಚಿ ಕೆ.ಡಿ. ವೀರಪ್ಪ, ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್, ವಲಯಾಧ್ಯಕ್ಷ ರೋಹಿತ್, ಜಿಲ್ಲಾ ಲಿಯೋ ಅಧ್ಯಕ್ಷೆ ರಂಜಿತಾ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಸಿ.ಕೆ. ಶಿವಕುಮಾರ್, ಖಜಾಂಚಿ ವೀರಪ್ಪ ಹಾಗೂ ಲಿಯೋ ಅಧ್ಯಕ್ಷೆ ಪ್ರತೀಕ್ಷ ಇದ್ದರು.