ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಏಕರೂಪ್ ಕೌರ್ ಜಿಲ್ಲೆಯ ವಿವಿಧ ಕಛೇರಿಗಳಿಗೆ ಹಾಗೂ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿ, ಇಲಾಖೆಯ ನಗರೋತ್ತಾನ ಅಮೃತ ಯೋಜನೆ ಎಸ್.ಎಫ್.ಸಿ/ಎಸ್.ಸಿ.ಪಿ, ೧೫ನೇ ಹಣ ಕಾಸು ಯೋಜನೆಗಳು ಸ್ವಚ್ಛ ಭಾರತ್ ಮಿಷನ್ ಅಮೃತ್-೨ ಮತ್ತು ಇಂದಿರಾಕ್ಯಾಂಟಿನ್ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ನಿರೀಕ್ಷಿತ ಪ್ರಗತಿಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ಅಮೃತ ಯೋಜನೆಯಡಿಯಲ್ಲಿ ಮುಳಬಾಗಿಲು, ಶ್ರೀನಿವಾಸಪುರ, ವೇಮಗಲ್ ನಗರಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಯಾವುದೇ ನದಿಗಳ ಮೂಲ ಇಲ್ಲ. ಆದ್ದರಿಂದ ಎತ್ತಿನಹೊಳೆ ಯೋಜನೆ ಜಾರಿಗೆ ಬಂದ ನಂತರ ಈ ನಗರಗಳಲ್ಲಿ ಅಮೃತ ಯೋಜನೆ ಅನುಷ್ಠಾನಕ್ಕೆ ತರಲಾಗುವುದು, ಮಾಲೂರು ಮತ್ತು ಬಂಗಾರಪೇಟೆ ನಗರಗಳಿಗೆ ಯರಗೊಳ್ ಡ್ಯಾಂ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಸಣ್ಣಪುಟ್ಟ ಕಾಮಗಾರಿಗಳ ಟೆಂಡರ್ ಬಾಕಿ ಉಳಿದಿವೆ ಎಂದು ಸಭೆಗೆ ತಿಳಿಸಿದರು.ಕೋಲಾರ ಜಿಲ್ಲೆಯ ಮೂರು ನಗರಗಳಲ್ಲಿ ಮಾತ್ರ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದೆ. ಉಳಿದ ಕಡೆ ಕಾರ್ಯರೂಪಕ್ಕೆ ತರಬೇಕು ಮತ್ತು ಉತ್ತಮ ಗುಣಮಟ್ಟದ ಆಹಾರ ಸಾರ್ವಜನಿಕರಿಗೆ ಒದಗಿಸಬೇಕು. ಪ್ರತಿದಿನ ಒಂದು ಊಟಕ್ಕೆ ಸರ್ಕಾರದಿಂದ ೬೭ ರೂಪಾಯಿ ಬರುತ್ತದೆ, ಗ್ರಾಹಕರಿಂದ ೨೫ ರೂಪಾಯಿ ಪಡೆಯುತ್ತಾರೆ ಒಟ್ಟು ೯೨ ರೂಪಾಯಿ ಗುತ್ತಿಗೆದಾರರು ಪಡೆಯುತ್ತಿದ್ದಾರೆ ಅದಕ್ಕೆ ತಕ್ಕಂತೆ ಊಟ ನೀಡಲು ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು. ಮತಪಟ್ಟಿ ಪರಿಷ್ಕರಣೆ
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷರಣೆಯ ವೀಕ್ಷಕರಾಗಿ ೩ನೇ ಭೇಟಿ ನೀಡಿದ ಕಾರ್ಯದರ್ಶಿಗಳು ಈ ವರೆಗೆ ಮತದಾರರ ಪಟ್ಟಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಎಪಿಕ್ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು ೬೩ ದೂರುಗಳು ಬಂದಿವೆ. ಅದರಲ್ಲಿ ಎಲ್ಲಾ ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೮೨೧೫ ಮತದಾರರಿದ್ದು ಅದರಲ್ಲಿ ೩೪೦೦ಮತದಾರರು ಯುವ ಮತದಾರರು ಆಗಿರುವುದು ವಿಶೇಷ ಎಂದು ಅಪರ ಜಿಲ್ಲಾಧಿಕಾರಿ ಮಂಗಳ ಸಭೆಗೆ ಮಾಹಿತಿ ನೀಡಿದರು.ಸಭೆಗೆ ಮುನ್ನ ಉಸ್ತುವಾರಿ ಕಾರ್ಯದರ್ಶಿ ಜಿಲ್ಲಾಧಿಕಾರಿಗಳೊಂದಿಗೆ ವೇಮಗಲ್ನಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾಕ್ಯಾಂಟೀನ್ ಕಟ್ಟಡ ಕಾಮಗಾರಿ, ಶೆಟ್ಟಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಲಾರ ನಗರದ ದರ್ಗಾ ಮೊಹಲ್ಲಾದ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಉಪವಿಭಾಗಧಿಕಾರಿ ಡಾ.ಮೈತ್ರಿ, ಪೌರಾಡಳಿತ ಇಲಾಖೆಯ ಯೋಜನಾ ನಿರ್ದೇಶಕಿ ಅಂಬಿಕಾ ಇದ್ದರು.