ಅಧಿಕ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳ ನೋಂದಣಿಗೆ ಜಿಲ್ಲಾಧಿಕಾರಿ ಕರೆ
ಕನ್ನಡಪ್ರಭ ವಾರ್ತೆ ಹಾವೇರಿ
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಸರ್ವರಿಗೂ ಉದ್ಯೋಗ ಕಾರ್ಯಕ್ರಮದ ಅಂಗವಾಗಿ ಮಾ.೩ರಂದು ಬೆಳಗ್ಗೆ ೯ರಿಂದ ೪ ಗಂಟೆವರೆಗೆ ನಗರದ ಶಿವಲಿಂಗೇಶ್ವರ ಮಹಿಳಾ ವಿದ್ಯಾಲಯ ಆವರಣದಲ್ಲಿ ಜಿಲ್ಲಾ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರು ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಕರೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಹಾಯವಾಣಿ ಕೇಂದ್ರ ಉದ್ಘಾಟನೆ, ಲೋಗೊ ಅನಾವರಣ, ಅಂತರ್ಜಾಲದ ವಿಳಾಸದ ಅನಾವರಣ ಮಾಡಲಾಗಿದೆ. ಉದ್ಯೋಗಳ ಮೇಳದ ಕುರಿತು ವ್ಯಾಪಕ ಪ್ರಚಾರಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ರಾಜ್ಯ ಮಟ್ಟದ ಬೃಹತ ಉದ್ಯೋಗ ಮೇಳ ಅಂಗವಾಗಿ ಜಿಲ್ಲೆಯಲ್ಲಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಎಲ್ಲಾ ಪದವಿ ಕಾಲೇಜುಗಳಲ್ಲಿ ಜಿಲ್ಲಾದ್ಯಾಂತ ಮೊಬೈಲೆಜೇಷನ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಹಾಗೂ ೨೫ ಉದ್ಯೋಗದಾತರನ್ನು ಸಂಪರ್ಕಿಸಲಾಗಿದೆ. ಅದರಲ್ಲಿ ೧೫೫ ಹುದ್ದೆಗಳು ಅವಶ್ಯಕವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದರು.ಈಗಾಗಲೇ ೧೮೦೪ ಉದ್ಯೋಗಾಕಾಂಕ್ಷಿಗಳು Skillconnect.com ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಸುಮಾರು ೨,೫೦೦ಕ್ಕಿಂತ ಹೆಚ್ಚು ಆಭ್ಯರ್ಥಿಗಳು ಭಾಗವಹಿಸಬಹುದು ನಿರೀಕ್ಷೆ ಇದೆ. ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ಪ್ರತ್ಯೇಕವಾದ ಅಂತರ್ಜಾಲದ ವಿಳಾಸ ಸೃಷ್ಟಿಸಲಾಗಿದೆ. (www.haverijobfair2024.com) ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ವಾಣಿಜ್ಯೋದ್ಯಮ ಮಂಡಳಿ, ರೋಟರಿ ಕ್ಲಬ್, ಹೊಯ್ಸಳ ಐಟಿಐ ಕಾಲೇಜ್, ನಗರ ಹಾಗೂ ಗ್ರಾಮ ಮಟ್ಟದ ಮಹಿಳಾ ಒಕ್ಕೂಟಗಳ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ ಎಂದರು.
ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗದಾತರಿಗೆ ಸಂಪರ್ಕಕ್ಕಾಗಿ ಸಹಾಯವಾಣಿ ಸಂಖ್ಯೆಯೊಂದಿಗೆ ಕಚೇರಿ ಸ್ಥಾಪಿಸಲಾಗಿದೆ. (ಸಹಾಯವಾಣಿ ಸಂಖ್ಯೆ/ಕರೆಗಾಗಿ/ವಾಟ್ಸ್ಆ್ಯಪ್ ಸಂಖ್ಯೆ: ೯೦೧೯೭೫೦೪೮೫). ಸ್ಕಿಲ್ ಕನೆಕ್ಟ್ ಪೋರ್ಟಲ್ ಮೂಲಕ ಉದ್ಯೋಗಾಕಾಂಕ್ಷಿಗಳ ಹಾಗೂ ಉದ್ಯೋಗದಾತರ ನೊಂದಣಿ ಕಾರ್ಯ ಮುಂದುವರೆಸಲಾಗಿದೆ. ಹಲವು ತರಬೇತಿ ಸಂಸ್ಥೆಯವರನ್ನು ಆಹ್ವಾನಿಸಿ ಈ ಸಂಸ್ಥೆಗಳ ಮೂಲಕ ಈಗಾಗಲೇ ಪ್ರಮಾಣೀಕೃತ ಸುಮಾರು ೧೦೦೦ಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ. ಉದ್ಯೋಗ ಮೇಳ ಕಾರ್ಯಕ್ರಮದ ನಂತರ ಕನಿಷ್ಠ ಒಂದು ತಿಂಗಳವರೆಗೂ ಪಾಲೋವಫ್ ಕಾರ್ಯ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮಹಿಳಾ ಒಕ್ಕೂಟಗಳು ಹಾಗೂ ಮನೆ ಮನೆ ಕಸ ಸಂಗ್ರಹಣೆ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಲು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಹಾಗೂ ಉದ್ಯೋಗಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಾತರ ನೋಂದಣಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.