ನಾಳೆಯಿಂದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ: ಜಿಲ್ಲಾಧಿಕಾರಿ

KannadaprabhaNewsNetwork | Published : Jan 25, 2024 2:03 AM

ಸಾರಾಂಶ

ಹಿಂದೆ ಅಕ್ಕಿ ಶ್ರೀಮಂತರು ಬಳಸುವ ಧಾನ್ಯವಾಗಿತ್ತು. ಬಡವರಿಗೆ ಎಟುಕುತ್ತಿರಲಿಲ್ಲ, ಆದರೆ ಬಡವರು ಸೇವಿಸುತ್ತಿದ್ದ ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಹಿಂದಿನವರು ಗಟ್ಟಿಮುಟ್ಟಾಗಿ ಅತಿ ಹೆಚ್ಚುಕಾಲ ರೋಗ ರಹಿತವಾಗಿ ಬದುಕಿರುತ್ತಿದ್ದರು

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಮತ್ತು ಫಲ ಪುಷ್ಟ ಪ್ರದರ್ಶನ-೨೦೨೪ ಕಾರ್ಯಕ್ರಮ ಗಣ ರಾಜ್ಯೋತ್ಸವದಂದು ಜ.೨೬ರಂದು ಬೆಳಗ್ಗೆ ೧೧.೩೦ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ.ಎಸ್. ಸುರೇಶ್ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೃಣ ಧಾನ್ಯಗಳಾದ ರಾಗಿ, ಸಾಮೆ, ಬರಗು, ನವಣೆ, ಹಾರಕ, ಕೊರಲೆ ಮತ್ತು ಉದಲು ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿದೆ, ಇವುಗಳನ್ನು ಪೋಷಕಾಂಶಗಳ ಖಜಾನೆ ಎಂದು ಗುರುತಿಸಲಾಗಿದೆ ಎಂದರು.

ಪೋಷಕಾಂಶಗಳು ಸಮೃದ್ಧ

ಹಿಂದೆ ಅಕ್ಕಿ ಶ್ರೀಮಂತರು ಬಳಸುವ ಧಾನ್ಯವಾಗಿತ್ತು. ಬಡವರಿಗೆ ಎಟುಕುತ್ತಿರಲಿಲ್ಲ, ಆದರೆ ಬಡವರು ಸೇವಿಸುತ್ತಿದ್ದ ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಹಿಂದಿನವರು ಗಟ್ಟಿಮುಟ್ಟಾಗಿ ಅತಿ ಹೆಚ್ಚುಕಾಲ ರೋಗ ರಹಿತವಾಗಿ ಬದುಕಿರುತ್ತಿದ್ದರು ಎಂದು ನೆನಪಿಸಿದರು.

ಈಗ ಕಾಲ ಬದಲಾಗಿದೆ ಬಡವರು ಬಳಸುತ್ತಿದ್ದ ಸಿರಿಧಾನ್ಯಗಳನ್ನು ಈಗ ಶ್ರೀಮಂತರು ಹೆಚ್ಚು ಬಳಸುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನಾವು ಕಾಣುತ್ತಿದ್ದೇವೆ, ಸಿರಿಧಾನ್ಯಗಳಲ್ಲಿ ಹೆಚ್ಚು ಪೋಷಕಾಂಶ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಬಿಸಿಯೂಟ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಇದನ್ನೆ ಬಳಿಸಲು ಸೂಚಿಸಿದೆ ಎಂದರು.

26ರಿಂದ ಸಿರಿಧಾನ್ಯ ಪ್ರದರ್ಶನ

ಈ ಬಾರಿಯ ಸಿರಿಧಾನ್ಯ ಹಾಗೂ ಸಾವಯವ ಮತ್ತು ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯಗಳ ರಾಶಿ ಪೂಜೆ, ಹಳ್ಳಿಯ ಸೊಗಡು, ಸಿರಿಧಾನ್ಯಗಳಿಂದ ನಿರ್ಮಿಸಿದ ಗಣೇಶ, ಸಿರಿಮಗ, ಸಿರಿಮಗಳು ಮತ್ತು ಸಿರಿ ಕುಟುಂಬ ಜಲಾನಯನ ಮಾದರಿ ಮತ್ತು ಕೃಷಿ ಭಾಗ್ಯ ಯೋಜನೆಯ ಮಾದರಿ ಪ್ರದರ್ಶನ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವು ಜ.೨೬ ರಿಂದ ೨೮ರವರೆಗೆ ೩ ದಿನಗಳ ಕಾಲ ಬೆಳಿಗ್ಗೆ ೧೧.೩೦ ರಿಂದ ರಾತ್ರಿ ೮ ಗಂಟೆವರೆಗೆ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಕಸದಿಂದ ರಸ-ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳಿಂದ ವಿವಿಧ ಹೂಕುಂಡಗಳ ರಚನೆ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ ಪ್ರದರ್ಶನ, ರೈತರು ಬೆಳೆದ ವಿವಿಧ ಬಗೆಯ ಹಣ್ಣು ಹೂಗಳು ಮತ್ತು ತರಕಾರಿ ಪ್ರದರ್ಶನಗಳು ಮನೆಯ ಒಳಗಡೆ ಮತ್ತು ಹೊರಗಡೆ ಬೆಳೆಯುವಂತ ವಿವಿಧ ಜಾತಿಯ ಅಲಂಕಾರಿಕ ಗಿಡಗಳು ಟೆರಿಕೋಟ ಕುಂಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಹೇಳಿದರು.

ಮೇಳದಲ್ಲಿ ಕಾರ್ಯಾಗಾರ

ಹಣ್ಣು, ತರಕಾರಿಗಳಿಂದ ನಿರ್ಮಿತವಾದ ಫಲವೃಕ್ಷ, ಎತ್ತಿನಗಾಡಿಯಲ್ಲಿ ಹೂ ಮತ್ತು ತರಕಾರಿಗಳ ಜೋಡಣೆ, ತರಕಾರಿಗಳಿಂದ ರಂಗೋಲಿಗಳ ವಿವಿಧ ವಿನ್ಯಾಸಗಳಲ್ಲಿ ಜೋಡಣೆ, ವಿವಿಧ ಸಿರಿಧಾನ್ಯಗಳ ಖಾದ್ಯಗಳ ಆಹಾರ ಮಳಿಗೆಗಳು, ಆತ್ಮ ಯೋಜನೆಯಡಿ ಜಿಲ್ಲಾ ವಸ್ತು ಪ್ರದರ್ಶನ, ಸಿರಿಧಾನ್ಯಗಳ ಸಂಸ್ಕರಣೆ ಮುಂತಾದುವುಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಏರ್ಪಡಿಸಿದೆ ಎಂದರು.

ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ

ಇಷ್ಟೇ ಅಲ್ಲದೆ ರೇಷ್ಮೆ, ಮೀನುಗಾರಿಕೆ, ಅರಣ್ಯ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರೆ ಇಲಾಖೆಗಳ ಸುಮಾರು ೩೦ ಮಳಿಗೆಗಳನ್ನು ಸ್ಥಾಪಿಸಲಾಗುವುದು, ಎನ್.ಆರ್.ಇ.ಜಿ ಯೋಜನೆ ಹಾಗೂ ಎನ್.ಆರ್.ಎಲ್.ಎಂ ಯೋಜನೆಯ ಮಾದರಿ ನಿರ್ಮಾಣ ಇದೇ ಸಂದರ್ಭದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಜಿಲ್ಲಾ ಮಟ್ಟದಲ್ಲಿ ೧೦, ತಾಲೂಕು ಮಟ್ಟದಲ್ಲಿ ೫ ಮಂದಿಯನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವುದು ಎಂದು ವಿವರಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಜಿ.ಪಂ ಸಿಇಒ ಪದ್ಮಬಸವಂತಪ್ಪ, ಎಡಿಸಿ ಶಂಕರ್ ವಾಣಿಕ್ಯಳ್, ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಇದ್ದರು.

Share this article