ಕಲಾ ಸಂಘದ ಕಾರ್ಯದರ್ಶಿ ಮಂಜುನಾಥ ಬಕ್ಕಿ
ಸರ್ಕಾರ ಆಯೋಜನೆ ಮಾಡುತ್ತಿದ್ದ ಯುವಜನ ಮೇಳವನ್ನು ಪುನಃ ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಜಾನಪದ ಉಳಿವಿಗಾಗಿ ಮರಳಿ ಜಾನಪದಕ್ಕೆ ಎಂಬ ಸಂದೇಶದೊಂದಿಗೆ ಮೂಡಿಗೆರೆಯಲ್ಲಿ ಮಾ.೧೬ ರಂದು ಅಡ್ಯಂತಾಯ ರಂಗ ಮಂದಿರಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ-೨೦೨೫ ನ್ನು ಮಿತ್ರ ಜಾನಪದ ಕಲಾ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದೆ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಲಾ ಸಂಘದ ಕಾರ್ಯದರ್ಶಿ ಮಂಜುನಾಥ ಬಕ್ಕಿ ಸರ್ಕಾರ ಹಿಂದಿನಿಂದಲೂ ಜಾನಪದ ಕಲಾವಿದರಿಗೆ ಪ್ರೋತ್ಸಾಹಧನ, ಮಾಸಿಕ ವೇತನ, ಕಲಾ ಪ್ರಕಾರ ಇನ್ನಿತರ ಹಲವಾರು ರೀತಿಯಲ್ಲಿ ಪ್ರೋತ್ಸಾಹಿಸಿದೆ ಜಾನಪದ ಕಲಾವಿದರನ್ನು ಕಡೆಗಣಿಸುತ್ತ ಜಾನಪದ ಕಲೆಗಳನ್ನು ಉಳಿಸಿ ಬೆಳಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಜಾನಪದ ಕಲೆ ಯುವಜನ ಮೇಳವನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗ ಬೇಕೆಂಬ ಉದ್ದೇಶದಿಂದ ಅಂದು ಜಿಲ್ಲಾ ಮಟ್ಟದ ಯುವಜನ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಲಾಸಕ್ತರು, ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಆಸಕ್ತ ಜಿಲ್ಲೆಯ ಕಲಾವಿದರು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ದೊಂದಿಗೆ ಫಲಕ, ಪ್ರಮಾಣಪತ್ರ ವಿತರಿಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಮಾಜಿ ಸಚಿವೆ ಡಾ. ಮೋಟಮ್ಮ, ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮತ್ತು ಶಾಸಕ ಎಚ್.ಡಿ. ತಮ್ಮಯ್ಯ ಅವರನ್ನು ಭೇಟಿಮಾಡಿ ಸಹಕಾರ ಕೋರುವುದಾಗಿ ಹೇಳಿದರು.ಈ ಯುವಜನ ಮೇಳದಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಜಿಲ್ಲಾ ಹಾಗೂ ತಾಲೂಕಿನ ಎಲ್ಲಾ ಕಲಾಸಕ್ತ ಬಂಧು ಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾ ಸಂಘದ ಮುಖಂಡರಾದ ನವೀನ್ ಕಣಚೂರು, ಶಶಿಕುಮಾರ್, ಜಯಪಾಲ್, ಹೇಮಂತ್, ಶ್ರವಣ್, ಪ್ರೀತಮ್ ಉಪಸ್ಥಿತರಿದ್ದರು