ಅಮ್ಮತ್ತಿ ಫ್ರೌಢ ಶಾಲಾ ಮೈದಾನದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ನೋಂದಾಯಿತ ಫುಟ್ಬಾಲ್ ಕ್ಲಬ್ ಗಳ ನಡುವಿನ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಬಿಎಫ್.ಸಿ ತಂಡವು ಬೋಯಿಕೇರಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿವೆ. ಮಿಲನ್ಸ್ ಎಫ್.ಸಿ. ಅಮ್ಮತ್ತಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಅಮ್ಮತ್ತಿಯ ಫ್ರೌಢ ಶಾಲಾ ಮೈದಾನದಲ್ಲಿ ಕಳೆದ ಆರು ದಿನಗಳ ಕಾಲ ನಡೆದ ಕೊಡಗು ಜಿಲ್ಲಾ ಮಟ್ಟದ ನೋಂದಾಯಿತ ಫುಟ್ಬಾಲ್ ಕ್ಲಬ್ ಗಳ ನಡುವಿನ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಬಿಎಫ್.ಸಿ ತಂಡವು ಬೋಯಿಕೇರಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿವೆ.
ಮಿಲನ್ಸ್ ಎಫ್.ಸಿ. ಅಮ್ಮತ್ತಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.
30+30 ನಿಮಿಷಗಳ ಫೈನಲ್ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿಎಫ್.ಸಿ ತಂಡವು ತನ್ನ ಸ್ಟ್ರೈಕರ್ ಆಟಗಾರ ವಿಜು ಅವರು ಏಳನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನ ಮೂಲಕ ಮುನ್ನಡೆ ಪಡೆದುಕೊಂಡಿತು.
ಮೊದಲಾರ್ಧದಲ್ಲಿ ಮಿಲನ್ಸ್ ಎಫ್.ಸಿ ತಂಡವು ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾದರೂ ಕೂಡ ಸಮಬಲ ಗಳಿಸಲು ಸಾಧ್ಯವಾಗಲಿಲ್ಲ.
ದ್ವಿತೀಯಾರ್ಧದ 40ನೇ ನಿಮಿಷದಲ್ಲಿ ಬಿಎಫ್.ಸಿ ತಂಡದ ಪಾಂಡಿಯನ್ ಅವರು ಅಮೋಘ ಗೋಲು ಗಳಿಸುವುದರ ಮೂಲಕ 2-0 ಗೋಲುಗಳ ಮುನ್ನಡೆ ಪಡೆದುಕೊಂಡ ಬಿಎಫ್.ಸಿ ತಂಡವು ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 55 ನಿಮಿಷದಲ್ಲಿ ಅಣ್ಣಪ್ಪ ಮತ್ತು 58ನೇ ನಿಮಿಷದಲ್ಲಿ ವಿಜು ತಮ್ಮ ಎರಡನೇ ಗೋಲು ಬಾರಿಸುವುದರ ಮೂಲಕ 4-0 ಗೋಲುಗಳ ಅಂತರದಿಂದ ಗೆಲುವು ಪಡೆಯುವುದರ ಮೂಲ ಕೊಡಗು ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು.ಅತ್ಯುತ್ತಮ ಯುವ ಆಟಗಾರರನ್ನು ಕಣಕ್ಕಿಳಿಸಿದ ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡವು ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.
ಚಾಂಪಿಯನ್ ತಂಡಕ್ಕೆ 25 ಸಾವಿರ ರು. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 15 ಸಾವಿರ ರು. ಮತ್ತು ಟ್ರೋಫಿ ನೀಡಲಾಯಿತು.ಸೆಮಿ ಫೈಲನ್ ಪಂದ್ಯ:
ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಬಿಎಫ್ಸಿ ಬೋಯಿಕೇರಿ ಮತ್ತು ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡಗಳ ನಡುವೆ ನಡೆಯಿತು.
ಬಿಎಫ್.ಸಿ. ತಂಡವು ದಿವಾಕರ್ ಮತ್ತು ತನ್ವೀರ್ ಅವರು ತಲಾ ಒಂದು ಗೋಲುಗಳ ನೆರವಿನಿಂದ 2-0 ಗೋಲುಗಳ ಅಂತರದಿಂದ ಗೆದ್ದು ಇದೇ ಮೊದಲ ಬಾರಿಗೆ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಲೀಗ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಸಹರಾ ಯೂತ್ ಅಸೋಸಿಯೇಷನ್ ಒಂಟಿಯಂಗಡಿ ಮತ್ತು ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡಗಳ ನಡುವೆ ನಡೆಯಿತು.
ಮಿಲನ್ಸ್ ಎಫ್.ಸಿ. ತಂಡವು ಮಂಜು ಮತ್ತು ರಾಜೇಶ್ ಅವರು ತಲಾ ಒಂದು ಗೋಲುಗಳ ಬಲದಿಂದ 2-1 ಗೋಲುಗಳ ಅಂತರದಿಂದ ಗೆದ್ದಿತು.
ಸಹರಾ ತಂಡದ ಪರವಾಗಿ ಸುನಿಲ್ ಒಂದು ಗೋಲು ಗಳಿಸಿದರು.
ಫೈನಲ್ ಪಂದ್ಯದ ಮುಖ್ಯ ತೀರ್ಪುಗಾರರಾಗಿ ಧೀರಜ್ ರೈ, ಸಹ ತೀರ್ಪುಗಾರರಾಗಿ ಇಬ್ರಾಹಿಂ, ಪವನ್ ದರ್ಶನ್ ಸುಕುಮಾರ್ ಕಾರ್ಯನಿರ್ವಹಿಸಿದರು.
ಮಾ.26 ರಿಂದ 31ರ ವರೆಗೆ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೈಸೂರು ಅವರು ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರು.
ಜೆರ್ಸಿ ಬಿಡುಗಡೆ:
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸದಸ್ಯ ಮಹೇಂದ್ರ ಸುಂಟಿಕೊಪ್ಪ ಅವರು ಕೊಡಗು ಜಿಲ್ಲಾ ಫುಟ್ಬಾಲ್ ತಂಡದ 22 ಆಟಗಾರರಿಗೆ ಕೊಡುಗೆಯಾಗಿ ನೀಡಿರುವ ಜರ್ಸಿಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ ಬಿಡುಗಡೆ ಮಾಡಿದರು.ಸಮಾರೋಪ ಸಮಾರಂಭ:
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯ ಫೈನಲ್ ಪಂದ್ಯದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಕ್ರಿಸ್ಟೋಫರ್ ಮಡಿಕೇರಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕೋಶಾಧಿಕಾರಿ ದೀಪು ಮಾಚಯ್ಯ, ಸದಸ್ಯ ಲಿಜೇಶ್ ಅಮ್ಮತ್ತಿ ಇದ್ದರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಂದಿಕಂಡ ನಾಗೇಶ್ (ಈಶ್ವರ್) ಸ್ವಾಗತಿಸಿದರು. ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ತೀರ್ಪುಗಾರ ಅರುಣ್ ಅಮ್ಮತ್ತಿ ನಿರೂಪಿಸಿದರು. ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.