ಬಂಟ್ವಾಳ: ಅಹಂಕಾರ ಮತ್ತು ಮಮಕಾರವನ್ನು ಮೀರಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾರ್ಥ ಹಾಗೂ ಸ್ವಹಿತದ ವ್ಯಾಮೋಹದಿಂದ ಮುಕ್ತವಾಗಿ ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ದೇವರ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮೋತ್ಸವ, ಗುರುವಂದನೆ ಹಾಗೂ ಸೇವಾ ಸಂಭ್ರಮದ ಧಾರ್ಮಿಕ ಸಭೆಯಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.ಭಾರತದ ಆತ್ಮವೇ ಅಧ್ಯಾತ್ಮ. ಅಧ್ಯಾತ್ಮದ ಮೂಲಕ ಭೋಗದ ಬದುಕಿನಿಂದ ದೂರವಿದ್ದು, ಸಮಾಜದ ಒಳಿತಿಗಾಗಿ ಬದುಕಲು ಸಾಧ್ಯ. ಧರ್ಮದ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಸಹಕಾರ, ಸಂಸ್ಕಾರ, ಸಂಸ್ಕೃತಿ ಹಾಗೂ ಸಮಾಜಸೇವೆ ಮೂಲಕ ಬದುಕಿನ ಸಂಭ್ರಮವನ್ನು ಕಾಣಬೇಕು ಎಂದು ಶ್ರೀಗಳು ಹೇಳಿದರು.ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಲೋಕಸಭೆ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಹಿರಿಯ ವಕೀಲ ಓ. ಶಾಮ ಭಟ್, ಉದ್ಯಮಿಗಳಾದ ಡಾ. ಕೆ. ಪ್ರಕಾಶ ಶೆಟ್ಟಿ, ಕೆ.ಕೆ. ಶೆಟ್ಟಿ, ಡಾ. ರವಿ ಶೆಟ್ಟಿ ಮೂಡಂಬೈಲು, ಭಾಸ್ಕರ ಆರ್. ಶೆಟ್ಟಿ, ರಘು ಎಲ್. ಶೆಟ್ಟಿ ದೇವಸ್ಯ, ಪ್ರಗತಿಪರ ಕೃಷಿಕ ಶ್ಯಾಮ ಪ್ರಸಾದ್ ಕೊಣಲೆ ಹಾಗೂ ಮುಂಬೈ ಬಂಟ್ಸ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಆರ್.ಕೆ. ನಾಯರ್ಗೆ ಗೌರವಾಭಿನಂದನೆ: ಕಾರ್ಯಕ್ರಮದಲ್ಲಿ ಗುಜರಾತ್ನ ಖ್ಯಾತ ಪರಿಸರವಾದಿ ಹಾಗೂ ‘ಗ್ರೀನ್ ಹೀರೋ ಆಫ್ ಇಂಡಿಯಾ’ ಖ್ಯಾತಿಯ ಆರ್.ಕೆ. ನಾಯರ್ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.
ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ: ಜನ್ಮದಿನೋತ್ಸವ ಅಂಗವಾಗಿ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಧನ ಸಹಾಯ, ಮನೆ ನಿರ್ಮಾಣಕ್ಕೆ ನೆರವು, ಮರಣ ಸಾಂತ್ವನದ ಅಂಗವಾಗಿ ಕುಟುಂಬಗಳಿಗೆ ನೆರವು, ಉಚಿತ ಕನ್ನಡಕ ವಿತರಣೆ ಹಾಗೂ ಸಸಿ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ ತಾಳಿಪಾಡಿಗುತ್ತು, ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ, ಮಹಾರಾಷ್ಟ್ರ ಸಮಿತಿ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಡಾ. ಅದೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಆಶಯ ಗೀತೆ ಹಾಡಿದರು. ಮುಂಬೈ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ ಕೆ. ಶೆಟ್ಟಿ ಸ್ವಾಗತಿಸಿದರು. ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ ಹಾಗೂ ಮಹಾ ಸಂತರ್ಪಣೆ ನೆರವೇರಿತು. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ಜರುಗಿದವು.ರಾತ್ರಿ ವಿಶೇಷ ರಂಗಪೂಜೆ ಹಾಗೂ ಬೆಳ್ಳಿ ರಥೋತ್ಸವ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಜನ್ಮದಿನೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.