ಬಿ. ನಾಗೇಂದ್ರ ವಿಚಾರದಲ್ಲಿ ಡಿಕೆ ಶಿವಕುಮಾರ್‌ ಹೇಳಿಕೆ ಸರಿಯಲ್ಲ: ಶಾಸಕ ಚನ್ನಬಸಪ್ಪ

KannadaprabhaNewsNetwork |  
Published : Aug 12, 2026, 01:45 AM IST
ಪೊಟೋ: 11ಎಸ್‌ಎಂಜಿಕೆಪಿ01: ಎಸ್‌.ಎನ್‌.ಚನ್ನಬಸಪ್ಪ | Kannada Prabha

ಸಾರಾಂಶ

ಅಧಿವೇಶನದ ಸಂದರ್ಭದಲ್ಲಿಯೇ ನಾಗರ ಪಂಚಮಿ ಹಬ್ಬವೂ ಬರುತ್ತಿದೆ. ಪಂಚಮಿಯಲ್ಲಿ ನಾಗರಾಜನಿಗೆ ಹಾಲೆರೆಯಲಾಗುತ್ತದೆ. ಆದರೆ, ಭ್ರಷ್ಟಾಚಾರ ಆರೋಪ ಹೊತ್ತು ಸಚಿವರಾದ ನಾಗೇಂದ್ರನಂತಹ ದುಷ್ಟರಿಗೆ ಹಾಲೆರೆಯುವ ಮನಸ್ಥಿತಿಯಲ್ಲಿ ನಾವಿಲ್ಲ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಧಿವೇಶನದ ಸಂದರ್ಭದಲ್ಲಿಯೇ ನಾಗರ ಪಂಚಮಿ ಹಬ್ಬವೂ ಬರುತ್ತಿದೆ. ಪಂಚಮಿಯಲ್ಲಿ ನಾಗರಾಜನಿಗೆ ಹಾಲೆರೆಯಲಾಗುತ್ತದೆ. ಆದರೆ, ಭ್ರಷ್ಟಾಚಾರ ಆರೋಪ ಹೊತ್ತು ಸಚಿವರಾದ ನಾಗೇಂದ್ರನಂತಹ ದುಷ್ಟರಿಗೆ ಹಾಲೆರೆಯುವ ಮನಸ್ಥಿತಿಯಲ್ಲಿ ನಾವಿಲ್ಲ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಕಿಡಿಕಾರಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಾಗೇಂದ್ರ ಬುಸ್ ಅನ್ನುವುದಿಲ್ಲ, ವಿಚಿತ್ರವಾದ ಮಾನಸಿಕತೆ ಇರುವ ನಾಗೇಂದ್ರ. ಇಂತಹವರ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಖಂಡನೀಯ. ಇಂಥಹ ಬೇಜವಾಬ್ದಾರಿ ಹೇಳಿಕೆಗಳು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಕುಟುಕಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿ.ನಾಗೇಂದ್ರ ಅವರ ಪರವಾಗಿ ಮಾತನಾಡಿ ಯಾರ ಮೇಲೆ ಪ್ರಕರಣವಿಲ್ಲ? ನನ್ನ ಮೇಲೂ ಪ್ರಕರಣವಿದೆ. ಎಲ್ಲರ ಮೇಲೂ ಪ್ರಕರಣವಿದೆ ಎಂದಿರುವುದು ‘ಜೊತೆಗಿರುವವರು ಓಡಾಡಿಕೊಂಡಿರಲಿ’ ಎಂಬಂತಾಗಿದೆ. ಇಂಥಹ ಹೇಳಿಕೆಯನ್ನು ಮುಖ್ಯಮಂತ್ರಿಗಳಿಂದ ನಿರೀಕ್ಷಿಸಿರಲಿಲ್ಲ. ಡಿ.ಕೆ.ಶಿವಕುಮಾರ್‌ ಮೇಲಿರುವ ಪ್ರಕರಣದ ಸ್ವರೂಪವೇ ಬೇರೆ. ನಾಗೇಂದ್ರ ಮೇಲಿರುವ ಪ್ರಕರಣಗಳ ಸ್ವರೂಪವೇ ಬೇರೆ. ಇಂಥಹ ಬೇಜವಾಬ್ದಾರಿ ಹೇಳಿಕೆಗಳು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಅಧಿವೇಶನದ ಬಗ್ಗೆ ವಿಶೇಷವಾಗಿ ಯೋಚಿಸಲಾಗಿದೆ. ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ತಂಡದಿಂದ ಚರ್ಚೆ ನಡೆದಿದೆ. ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ರೂಪಿಸುವ ಚರ್ಚೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿವಿಧ ಪಿಂಚಣಿಗಳನ್ನು ಸರ್ಕಾರ 4-5 ತಿಂಗಳಿಂದ ನಿಲ್ಲಿಸಿದೆ. ಪರಿಶೀಲನೆ ಹೆಸರಿನಲ್ಲಿ ರಾಜ್ಯ ಸರ್ಕಾರವು ನಗರದಲ್ಲಿ ಸುಮಾರು 6 ಸಾವಿರ ಜನರ ಪಿಂಚಣಿಯನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ಕೂಡಲೇ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಿಂಚಣಿದಾರರ ಪರವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಅಲ್ಲದೆ ಪಿಂಚಣಿದಾರರು ತಮ್ಮ ಮರಣ ದಾಖಲೆಯ ದೃಢೀಕರಣ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಸರ್ಕಾರದ ಇತ್ತೀಚಿನ ಸುತ್ತೋಲೆ ಸರ್ಕಾರದ ಸಚಿವರು, ಅಧಿಕಾರಿಗಳು ಎಷ್ಟರ ಮಟ್ಟಿಗೆ ಮೂರ್ಖರಿದ್ದಾರೆ ಎಂಬುದನ್ನು ದೃಢೀಕರಿಸುತ್ತದೆ. ಇಂಥಹ ಅಸಂಬಂಧ ಸತ್ತೋಲೆಗಳನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಪಿಂಚಣಿ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು. ಅಂಗವಿಕಲರಂತಹ ಫಲಾನುಭವಿಗಳ ಅರ್ಹತೆಯನ್ನು ಪದೇ ಪದೇ ಪರಿಶೀಲಿಸುವ ಅಗತ್ಯವೇನು? ಸರ್ಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಹಿಂದೆ ನಡೆಸಿದ ಪರಿಶೀಲನೆ ಮತ್ತು ದಾಖಲಾತಿಗಳ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.

ಎಸ್ಐಆರ್‌ಗೆ ಸಂಬಂಧಿಸಿದಂತೆ, ನಗರದಲ್ಲಿ ಸುಮಾರು 56 ಸಾವಿರ ಮತದಾರರ ಹೆಸರುಗಳು ಮತ ಪಟ್ಟಿಯಿಂದ ಹೊರಗುಳಿಯುತ್ತವೆ ಎಂಬ ಮಾಹಿತಿ ಇದೆ. ಆದರೆ, ಸರಿಯಾದ ದಾಖಲಾತಿ ಸಲ್ಲಿಸುವ ಮೂಲಕ ಅಂಥಹ ಮತದಾರರು ಪುನ: ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬಹುದು. ಮರಣ, ಸ್ಥಳಾಂತರ, ಎರಡೆರಡು ಕಡೆ ಮತ ಇದ್ದವರು ಮೊದಲಾದವರ ಹೆಸರು ಡಿಲಿಟ್ ಆದರೂ ಸುಮಾರು ಶೇ.30ರಷ್ಟು ಮತ ಕಡಿಮೆಯಾಗಬಹುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನನ್ನು ಮುಗಿಸಲು ಕಿಮ್ಮನೆ ಸುಪಾರಿ ನೀಡಲೂ ಸಿದ್ಧ: ಶಾಸಕ ಆರಗ ಜ್ಞಾನೇಂದ್ರ ಆರೋಪ
ರಾಜ್ಯ ಸರ್ಕಾರದ ಆಡಳಿತ ವೈಪಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ