ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಡಿಕೆಸು ಧ್ವನಿ: ತಿಮ್ಮಾಪುರ

KannadaprabhaNewsNetwork |  
Published : Feb 06, 2024, 01:34 AM IST
timmapur | Kannada Prabha

ಸಾರಾಂಶ

ದೇಶದಲ್ಲಿ ಅಲ್ಲೋಲ- ಕಲ್ಲೋಲ ಎಬ್ಬಿಸಿದ್ದು ಬಿಜೆಪಿ. ನಾವೇನು ಜಾತಿ, ಧರ್ಮಗಳ ನಡುವೆ ಇಬ್ಭಾಗ ಮಾಡಿದ್ದೇವೆಯೇ? ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವ ಆರ್.ಬಿ. ತಿಮ್ಮಾಪುರ ಕಿಡಿಕಾರಿದರು.

ಹುಬ್ಬಳ್ಳಿ: ಕೇಂದ್ರದಿಂದ ಅನುದಾನ ನೀಡುವಲ್ಲಿ ನಮ್ಮ ಭಾಗಕ್ಕೆ ಅನ್ಯಾಯವಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿಯವರು ದೇಶ ವಿಭಜನೆ ಮಾಡಬೇಕು ಎಂದು ಹೇಳಿಕೆಯನ್ನೇ ತಿರಚಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಾಟೆ, ಗಲಭೆ ಎಬ್ಬಿಸುವುದು ಬಿಜೆಪಿ ಕೆಲಸ. ಇವರು ಯಾವ ದೇಶವನ್ನು ಕಟ್ಟಿದ್ದಾರೆ? ದೇಶದಲ್ಲಿ ಅಲ್ಲೋಲ- ಕಲ್ಲೋಲ ಎಬ್ಬಿಸಿದ್ದು ಬಿಜೆಪಿ. ನಾವೇನು ಜಾತಿ, ಧರ್ಮಗಳ ನಡುವೆ ಇಬ್ಭಾಗ ಮಾಡಿದ್ದೇವೆಯೇ? ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಚುನಾವಣೆ ಬಂದರೆ ಸಾಕು ಬಿಜೆಪಿಯವರ ಆಟ ಪ್ರಾರಂಭವಾಗುತ್ತದೆ. ಯಾವುದೇ ಒಂದು ಅಭಿವೃದ್ಧಿ ಕೇಳಬೇಡಿ, ಬಿಜೆಪಿಯವರ ಉದ್ಯೋಗ ಏನೆಂದರೆ ಗಲಾಟೆ, ಗಲಭೆ, ಭಾವನಾತ್ಮಕವಾಗಿ ಮತ ಕೇಳುವುದಷ್ಟೇ ಎಂದು ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕೊಡಬೇಕಾದ ಅನುದಾನ ಸಮರ್ಪಕವಾಗಿ ಕೊಡಬೇಕಲ್ಲವೇ? ನಾವೇನು ಭಿಕ್ಷೆ ಕೇಳುತ್ತಿಲ್ಲ, ಇದೆಲ್ಲ ಚುನಾವಣೆ ಗಿಮಿಕ್. ನಮ್ಮ ಪಾಲಿನ ಹಣ ಕೇಂದ್ರ ಸರ್ಕಾರ ಕೊಡುವಲ್ಲಿ ಮೀನಮೇಷ ಎಣಿಸುತ್ತಿದೆ. ಇದರಲ್ಲಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ದೇಶದಲ್ಲಿ ರಾಮಮಂದಿರ ಕಟ್ಟಿದರೆ ಸಾಲದು, ರಾಮರಾಜ್ಯ ಆಗಬೇಕು, ಇದೀಗ ಬಡವರು ಬದುಕುತ್ತಿದ್ದಾರೆ ಎಂದರೆ ಅದಕ್ಕೆ ನಾವು ಕೊಟ್ಟ ಗ್ಯಾರಂಟಿ ಯೋಜನೆಗಳೇ ಕಾರಣ ಎಂದರು.

ಬಿಜೆಪಿಯವರದ್ದು ಬರೀ ಸರ್ಕಾರ ಬೀಳಿಸುವ ದಂಧೆ, ಯಾವತ್ತು ಜನ ಅವರಿಗೆ ಬಹುಮತ ಕೊಟ್ಟಿಲ್ಲ, ಅಡ್ಡದಾರಿಯ ಮೂಲಕ, ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ತಿಮ್ಮಾಪುರ ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ