ತೀರ್ಥಹಳ್ಳಿ: ಮುಸ್ಲೀಮರಿಗಾಗಿ ಈ ದೇಶದ ಸಂವಿಧಾನವನ್ನೇ ಬದಲಿಸಬಹುದು ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯವಾಗಿದ್ದು, ಈ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರಾಷ್ಟ್ರೀಯ ಭಾವನೆಗೆ ಮಾಡಿದ ಅಪಮಾನವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.ಉಪ ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಪಟ್ಟಣದ ಕುವೆಂಪು ವೃತ್ತದಲ್ಲಿ ಮಂಗಳವಾರ ಮಂಡಲ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಸೆಂಬ್ಲಿ ಅಧಿವೇಶನದ ಕೊನೆಯ ದಿನದಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಸ್ಲೀಮರಿಗಾಗಿ ಈ ದೇಶದ ಸಂವಿಧಾನವನ್ನೇ ಬದಲಿಸಬಹುದು ಎಂದು ಹೇಳಿರುವುದು ದೇಶದ್ರೋಹಿ ಹೇಳಿಕೆಯಾಗಿದೆ ಎಂದು ದೂರಿದರು.ಈ ದೇಶದಲ್ಲಿ ಅಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಮುಸ್ಲೀಮರ ಓಲೈಕೆ ಮತ್ತು ಮತ ಗಳಿಕೆಗಾಗಿ ಸುಮಾರು 75 ಬಾರಿ ಸಂವಿಧಾನವನ್ನು ತಿದ್ದುಪಡಿದೆ. ಕಾಂಗ್ರೆಸ್ ಪಕ್ಷ ಒಮ್ಮೆಯೂ ದೇಶದ ಪರವಾಗಿ ಮಾಡಿಲ್ಲಾ. ಸ್ವಾರ್ಥ ಮತ್ತು ಮುಸ್ಲೀಮರ ಓಲೈಕೆಗಾಗಿಯೇ ತಿದ್ದುಪಡಿ ಮಾಡಿದೆ. ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಿದ್ದ ಆ ಪಕ್ಷ ಅದರಿಂದ ಪಾಠ ಕಲಿಯದೇ ಅದೇ ಪ್ರವೃತ್ತಿಯನ್ನು ಮುಂದುವರೆಸಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಅವಧಿಯಲ್ಲಿ ದೇಶದ ಹಿತದೃಷ್ಟಿಯಿಂದಷ್ಟೇ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಜಾತಿ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದು, ಈ ದೇಶದಲ್ಲಿ ಹಿಂದೂಗಳು ಎರಡನೇ ದರ್ಜೆಯಂತಾಗಿದ್ದಾರೆ. ಕಾಂಗ್ರೆಸ್ಸಿನ ವಿದ್ರೋಹಿ ನಿಲುವು ಖಂಡನೀಯವಾಗಿದೆ ಎಂದರು. ಮಂಡಲ ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ಪಕ್ಷದ ಮುಖಂಡರಾದ ಪ್ರಶಾಂತ್ ಕುಕ್ಕೆ, ಸಂದೇಶ್ ಜವಳಿ, ಯಶೋದಾ ಮಂಜುನಾಥ್, ನಂದನ್ ಹಸಿರುಮನೆ, ರಕ್ಷಿತ್ ಮೇಗರವಳ್ಳಿ, ಸಂತೋಷ್ ದೇವಾಡಿಗ ಮುಂತಾದವರು ಇದ್ದರು.