ಕನ್ನಡಪ್ರಭ ವಾರ್ತೆ ಮಂಗಳೂರು
ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಸಾಲ ಪಡೆಯುವ ರೈತರ ಅರ್ಜಿಯನ್ನು ತಿರಸ್ಕಾರ ಮಾಡಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮ್ಯಾನೇಜರ್ ವೆಂಕಟರಾಮಯ್ಯ ಟಿ.ಎನ್. ಅವರು ಬ್ಯಾಂಕ್ಗಳಿಗೆ ಸಲಹೆ ನೀಡಿದ್ದಾರೆ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾ ಬ್ಯಾಂಕ್ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ರೈತರು ಖಾಸಗಿ ಲೇವಾದೇವಿದಾರರಿಂದ ಅಧಿಕ ಬಡ್ಡಿದರಕ್ಕೆ ಸಾಲ ಪಡೆದು ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡ ಬಹಳಷ್ಟು ಉದಾಹರಣೆಗಳಿವೆ. ಡಿಸೆಂಬರ್ ಅಂತ್ಯದವರೆಗಿನ ವರದಿಯ ಪ್ರಕಾರ, ರಾಜ್ಯದಲ್ಲಿ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ 354 ಮಂದಿಯ ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದವರು ಬ್ಯಾಂಕ್ಗಳಿಂದ ಸಾಲ ಪಡೆದಿಲ್ಲ ಎಂಬ ಕಾರಣಕ್ಕೆ ಪರಿಹಾರವೇ ದೊರೆತಿಲ್ಲ. ಹಾಗಾಗಿ ಬ್ಯಾಂಕ್ಗಳು ರೈತರಿಗೆ ಆದ್ಯತೆಯ ನೆಲೆಯಲ್ಲಿ ಸಾಲ ನೀಡಬೇಕು. ಕೃಷಿ ಸಾಲದ ಅರ್ಜಿಗಳನ್ನು ತಿರಸ್ಕಾರ ಮಾಡಬೇಡಿ ಎಂದು ಕರೆ ನೀಡಿದರು.
ಜನಧನ್, ಎಪಿವೈ ಪ್ರಗತಿ ಕುಂಠಿತ:ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಡಾ.ಆನಂದ್ ಮಾತನಾಡಿ, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಜನಧನ್, ಅಟಲ್ ಪಿಂಚಣಿಯಂಥ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳ ಪ್ರಗತಿ ನಿರಾಶಾದಾಯಕವಾಗಿದೆ. ಈ ಬಗ್ಗೆ ಗಂಭೀರವಾಗಿ ಕಾರ್ಯಪ್ರವೃತ್ತವಾಗಬೇಕು. ಇಂಥ ಯೋಜನೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸಿ, ಬ್ಯಾಂಕ್ಗಳಿಗೆ ಶಾಖಾವಾರು ನೀಡಿದ ಗುರಿಯನ್ನು ತಲುಪಲೇ ಬೇಕು ಎಂದು ತಾಕೀತು ಮಾಡಿದರು.
ಪ್ರಧಾನ ಮಂತ್ರಿ ಜನ್ಧನ್ ಯೋಜನೆ (ಪಿಎಂಜೆಡಿವೈ)ಯ ಗುರಿಯನ್ನು ಬ್ಯಾಂಕ್ಗಳು ತಲುಪಿದ್ದರೂ ಜನ್ಧನ್ ಓವರ್ಡ್ರಾಫ್ಟ್ ಖಾತೆಗಳನ್ನು ತೆರೆಯುವಲ್ಲಿ ಹಿಂದೆ ಬಿದ್ದಿವೆ. ಕೇವಲ ಶೇ. 68.88 ಗುರಿ ಸಾಧನೆ ಮಾಡಲಾಗಿದೆ. ಕಳೆದ ಸಭೆಯಲ್ಲಿ ಸೂಚನೆ ನೀಡಿದ ಬಳಿಕವೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಪ್ರತಿ ಶಾಖೆಗಳಿಗೆ ಕೇವಲ 10 ಓವರ್ಡ್ರಾಫ್ಟ್ ಖಾತೆಗಳ ಗುರಿ ನೀಡಿದ್ದರೂ ಏಕೆ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಅದೇ ರೀತಿ, ಅಟಲ್ ಪಿಂಚಣಿ ಯೋಜನೆಯಡಿ ಕೇವಲ 3,90,97 ಖಾತೆಗಳನ್ನು ಜಿಲ್ಲೆಯ ಬ್ಯಾಂಕ್ಗಳು ತೆರೆದಿವೆ. ಬ್ಯಾಂಕ್ಗಳಿಗೆ ನೀಡಿದ ಗುರಿಯ ಶೇ.76ರಷ್ಟು ಮಾತ್ರ ಪ್ರಗತಿಯಾಗಿದೆ. ಜನರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಕೊಡಿಸುವಲ್ಲಿ ನಿರ್ಲಕ್ಷ್ಯ ಮಾಡುವುದು ಸಲ್ಲದು ಎಂದು ಎಂದು ಡಾ.ಆನಂದ್ ಹೇಳಿದರು.
ಲೀಡ್ ಬ್ಯಾಂಕ್ ಮ್ಯಾನೆಜರ್ ಕವಿತಾ ಶೆಟ್ಟಿ ಮಾತನಾಡಿ, ಪಿಎಂ ಸ್ವನಿಧಿ ಮೊದಲ ಕಂತಿನಡಿ 12,175 ಫಲಾನುಭವಿಗಳಿಗೆ ಸಾಲ ಮಂಜೂರಾಗಿದೆ. ಅದರಲ್ಲಿ 192 ಅರ್ಜಿಗಳು ವಿತರಣೆಗೆ ಬಾಕಿ ಇವೆ. ಎರಡನೇ ಕಂತಿನಲ್ಲಿ 3282 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, ಮೂರನೇ ಕಂತಿನಲ್ಲಿ ಜೂ.10ಕ್ಕೆ 1187 ಅರ್ಜಿಗಳಿಗೆ ಸಾಲ ಮಂಜೂರಾಗಿದೆ ಎಂದರು. ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ಫಲಾನುಭವಿಗಳು ಆಸಕ್ತಿ ತೋರದೆ ಇರುವುದು ಸೇರಿದಂತೆ ಹಲವು ಕಾರಣಗಳನ್ನು ಬ್ಯಾಂಕ್ ಅಧಿಕಾರಿಗಳು ನೀಡಿದರು.ಬೆಳೆವಿಮೆ ಮಾಹಿತಿ:
ಹವಾಮಾನ ಆಧರಿತ ಬೆಳೆವಿಮೆ ನೋಂದಣಿ ಇಡೀ ರಾಜ್ಯದಲ್ಲಿ ದ.ಕ.ದಲ್ಲೇ ಅತಿ ಹೆಚ್ಚು ಆಗಿದ್ದು, ಈ ಬಾರಿ ಆಗಸ್ಟ್ನಿಂದ ನೋಂದಣಿ ಆರಂಭವಾಗಲಿದೆ. ಇದಕ್ಕೆ ಬ್ಯಾಂಕ್ಗಳು ಸಹಕಾರ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದರು. ಭತ್ತಕ್ಕೆ ಬೆಳೆ ವಿಮೆಗಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಆಗಸ್ಟ್ 8 ಕೊನೆದಿನ. ಬ್ಯಾಂಕ್ಗಳಿಗೆ ಈ ಬಗ್ಗೆ ಅರ್ಜಿಗಳು ಬಂದ ಕೂಡಲೆ ಪ್ರಕ್ರಿಯೆ ಮುಗಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು.ಮೀನುಗಾರಿಕೆ ಇಲಾಖೆ ಅಧಿಕಾರಿ ದಿಲೀಪ್ ಕುಮಾರ್ ಮಾತನಾಡಿ, 2018ರಿಂದ ಮೀನು ಮಾರಾಟಕ್ಕೆ ಸಾಲ ಪಡೆದಿರುವ ಮೀನುಗಾರ ಮಹಿಳೆಯರ ಸಾಲದ ಬಡ್ಡಿಯ ಮಾಹಿತಿಯನ್ನು ಮೀನುಗಾರಿಕಾ ಇಲಾಖೆಗೆ ಸಲ್ಲಿಸಲು ಬ್ಯಾಂಕ್ಗಳು ವಿಫಲವಾಗಿವೆ. ಹೀಗಾಗಿ ಬಡ್ಡಿ ಮೊತ್ತವನ್ನು ಮೀನುಗಾರ ಮಹಿಳಾ ಗುಂಪುಗಳಿಗೆ ಮರುಪಾವತಿಸಲು ಸಮಸ್ಯೆಯಾಗಿದೆ ತಿಳಿಸಿದರು. ಈ ಮಾಹಿತಿ ಕೂಡಲೆ ನೀಡುವಂತೆ ಜಿಪಂ ಸಿಇಒ ಬ್ಯಾಂಕ್ಗಳಿಗೆ ಸೂಚಿಸಿದರು.ಬಾಕ್ಸ್
ಬ್ಯಾಂಕ್ಗಳಲ್ಲಿ ಕನ್ನಡ ಮಾತಾಡಿಬ್ಯಾಂಕ್ ಶಾಖೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡ ಬಳಕೆ ಮಾಡುವಂತೆ ಜಿಪಂ ಸಿಇಒ ಡಾ.ಆನಂದ್ ಸೂಚಿಸಿದರು. ಕೆಲವು ಬ್ಯಾಂಕ್ಗಳಲ್ಲಿ ಜನರಿಗೆ ಮಾರ್ಗದರ್ಶನ ನೀಡಲು ಕನ್ನಡ ಮಾತನಾಡುವವರೇ ಇಲ್ಲ. ಇದೇ ಕಾರಣದಿಂದ ಜನರಿಗೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಉಪಯೋಗ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಕನ್ನಡ ಬಾರದೆ ಇರುವ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು. ರಾಜ್ಯದಲ್ಲೇ ಹಲವು ವರ್ಷ ಇದ್ದರೂ ಅನೇಕ ಬ್ಯಾಂಕ್ ಮ್ಯಾನೇಜರ್ಗಳಿಗೇ ಕನ್ನಡ ಬರಲ್ಲ. ಇವರು ಕೂಡ ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂದು ಸೂಚಿಸಿದರು.