ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ 2026-27ನೇ ಸಾಲಿನಲ್ಲಿ ಒಟ್ಟು ₹87.83 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಈ ಪೈಕಿ ಒಟ್ಟು ₹1.62 ಕೋಟಿ ಉಳಿತಾಯ ಬಜೆಟ್ ಇದಾಗಿದೆ ಎಂದು ನಗರಸಭಾ ಅಧ್ಯಕ್ಷೆ ಸುಮಿತ್ರ ಆನಂದ್ ತಿಳಿಸಿದರು.
ನೈರ್ಮಲ್ಯ ಯೋಜನೆಗಳಿಗೆ ಅನುದಾನ:
ನಗರದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿ, ಸಂರಕ್ಷಿಸುವ ಸಲುವಾಗಿ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ₹2 ಕೋಟಿ ಮತ್ತು ಉದ್ಯಾನವನಗಳ ನಿರ್ವಹಣೆಗಾಗಿ ₹20 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಸುಂದರ, ಸ್ವಚ್ಛ ಹಾಗೂ ನಿರ್ಮಲ ನಗರವನ್ನಾಗಿಸುವ ದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ ₹4.10 ಕೋಟಿ ಮೀಸಲಿಡಲಾಗಿದೆ.ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸಿ ಮತ್ತು ಡಿ ಕಸ ಸಂಸ್ಕರಣಾ ಘಟಕ ಹಾಗೂ ಒಣಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಮತ್ತು ಪಾರಂಪರಿಕ ತ್ಯಾಜ್ಯ ವಿಲೆವಾರಿಗಾಗಿ ₹3.27 ಕೋಟಿ ಅನುದಾನ. ಸ್ವಚ್ಚ ಭಾರತ್ ಮಿಷನ್-2 ಯೋಜನೆಯಲ್ಲಿ ವಡ್ಡರಪಾಳ್ಯದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಗ್ರಹವಾಗಿರುವ 46,000 ಟನ್ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿಗಾಗಿ ₹4.77 ಕೋಟಿ ಅನುದಾನವನ್ನು ನಿಗದಿ ಮಾಡಲಾಗಿದೆ.
ಇಲ್ಲಿನ ಕೆ.ಆರ್ ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ ₹3 ಕೋಟಿ ಅನುದಾನ ಅಂದಾಜಿಸಲಾಗಿದೆ. ಸ್ಮಾರ್ಟ್ ಮಾರುಕಟ್ಟೆ ಮತ್ತು ಫುಡ್ ಕೋರ್ಟ್ಗಳ ನಿರ್ಮಾಣಕ್ಕೆ ₹3 ಕೋಟಿ. ನೇಕಾರರ ಭವನ ನಿರ್ಮಿಸಲು ₹10 ಲಕ್ಷ, ನಗರಸಭಾ ಕಚೇರಿಯ ಹಾಗೂ ಡಾ. ರಾಜಕುಮಾರ್ ಕಲಾಮಂದಿರದ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಕೆಗೆ ₹60 ಲಕ್ಷ, ರೊಚ್ಚು ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಸ್ವಾಧೀನಕ್ಕಾಗಿ ₹2.50 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.
ನಗರದ ಜನರಿಗೆ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಲು ಸುಮಾರು 10,000 ಕುಡಿಯುವ ನೀರಿನ ನಳ ಸಂಪರ್ಕವನ್ನು ಸಾರ್ವಜನಿಕರಿಗೆ ಒದಗಿಸಲು ಅಮೃತ 2.0 ಯೋಜನೆಯಡಿಯಲ್ಲಿ ₹10 ಕೋಟಿಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 2026-27ನೇ ಸಾಲಿನ ಬಜೆಟ್ನಲ್ಲಿ ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಫ್ರೋತ್ಸಾಹ ಧನ ನೀಡಲು ₹10 ಲಕ್ಷ ಅನುದಾನ ಮೀಸಲಿಡಲಾಗಿದೆ. ನಗರದ ಒಳಚರಂಡಿ ರೊಚ್ಚು ನೀರನ್ನು ಅಧುನಿಕ ರೀತಿಯಲ್ಲಿ ಸಂಸ್ಕರಿಸಿ ಶುದ್ದೀಕರಿಸಲು ಎಸ್.ಟಿ.ಪಿ ನಿರ್ಮಾಣಕ್ಕೆ ₹4.77 ಕೋಟಿ ಅನುದಾನ ಒದಗಿಸಲಾಗಿದೆ.
ನಗರದಲ್ಲಿ ಕಸ ಸುರಿಯುತ್ತಿರುವ ಪ್ರಮುಖ ಪ್ರದೇಶಗಳಲ್ಲಿ ಒಂದು ನೂರು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲು ಚಿಂತನೆ ನಡೆಸಲಾಗಿದ್ದು, ಆ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯುವ ವ್ಯವಸ್ಥಗೆ ಬ್ರೇಕ್ ಹಾಕುವ ಗುರಿ ಹೊಂದಲಾಗಿದೆ. ನೂರು ಸಿಸಿಟಿವಿ ಕ್ಯಾಮರಾ ಅಳವಡಿಸುವುದರಿಂದ ನಗರದಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಾಯಕವಾಗಲಿದೆ ಎಂದು ವಿವರಿಸಿದರು.
ಬಜೆಟ್ಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಎಲ್ಲ ವಲಯಗಳಿಗೆ ಆದ್ಯತಾವಾರು ಅನುದಾನ ಹಂಚಿಕೆ ನಡೆದಿಲ್ಲ. ಹಿಂದುಳಿದ ವಾರ್ಡ್ ಗಳಿಗೆ ಹೆಚ್ಚಿನ ಅನುದಾನ ನೀಡಬೇಕಿತ್ತು. ದೂರದೃಷ್ಠಿಯ ಕೊರತೆ ಎದ್ದುಕಾಣುತ್ತಿದ್ದು, ಹಿಂದಿನ ವರ್ಷದ ಘೋಷಣೆಗಳು ಇನ್ನೂ ಕಾರ್ಯಗತಗೊಂಡಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಪೌರಾಯುಕ್ತ ಕಾರ್ತಿಕೇಶ್ವರ, ಉಪಾಧ್ಯಕ್ಷ ಮಲ್ಲೇಶ, ಸದಸ್ಯರಾದ ಪದ್ಮನಾಭ, ಶಿವು, ತ.ನ ಪ್ರಭುದೇವ, ಎಂ.ಜಿ ಶ್ರೀನಿವಾಸ್, ರವಿ, ಹಂಸಪ್ರಿಯ, ಸುಧಾರಾಣಿ, ಕಾಂತರಾಜು, ನಾಗರತ್ನಮ್ಮ, ಇಂದ್ರಾಣಿ, ನಾಗರಾಜು, ನಾಗವೇಣಿ, ಸುರೇಶ್, ನವೀನ್, ಕೆ. ಮಂಜುಳ, ಪ್ರಭಾ ಸೇರಿದಂತೆ ಹಲವು ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.
ಕೆಡಿಬಿಪಿ2-
ದೊಡ್ಡಬಳ್ಳಾಪುರದ ನಗರಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆಗೂ ಮುನ್ನ ಅಧ್ಯಕ್ಷೆ ಸಮಿತ್ರಾ ಸದಸ್ಯರೊಂದಿಗೆ ಬಜೆಟ್ ಪ್ರತಿ ಪ್ರದರ್ಶಿಸಿದರು.