ಕನ್ನಡಪ್ರಭ ವಾರ್ತೆ ಕೊರಟಗೆರೆ/ ತುಮಕೂರು
ಇಲ್ಲಿನ ಜನರಿಗೆ ಸಂಚರಿಸಲು ಸರಿಯಾದ ರಸ್ತೆಯಿಲ್ಲ. ನಿತ್ಯ ಕೆಲಸ ಕಾರ್ಯಗಳಿಗೆ ಹೋಗಲು, ಮಕ್ಕಳನ್ನು ಶಾಲೆಗೆ ಬಿಡಲು, ವಯೋವೃದ್ಧರು ದವಾಖಾನೆಗೆ ತೆರಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಬಂದರೆ ಕೆಸರುಮಯ ರಸ್ತೆಗಳು: ಮಳೆ ಬಂದರೆ ಕೆಸರು ಮಯವಾಗುವ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಇಂತಹ ರಸ್ತೆಯಲ್ಲೇ ಜನರು ಎದ್ದು ಬಿದ್ದು ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೊರಟರೆ ರೈತರು ರಸ್ತೆಯಲ್ಲಿ ನಡೆಯಲಾಗದೆ ಜಮೀನು ಬದುಗಳ ಮೇಲೆ ಹೋಗುತ್ತಿದ್ದಾರೆ.ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರೆಲ್ಲ ನಾಲ್ಕೈದು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತೋವಿನಕೆರೆ ಗ್ರಾಮ ಪಂಚಾಯ್ತಿ ತೆರಿಗೆ ಮಾತ್ರ ಕಾಲಕಾಲಕ್ಕೆ ವಸೂಲಿ ಮಾಡುತ್ತಿದೆ. ಆದರೆ ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಆ ತೆರಿಗೆ ಹಣ ಬಳಕೆಯಾಗುತ್ತಿಲ್ಲ. ಗ್ರಾಪಂ ಆಡಳಿತ ಯಂತ್ರವಂತೂ ಕೆಟ್ಟು ಹೋಗಿದೆ. ಗ್ರಾಮಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸದಿದ್ದ ಮೇಲೆ ಇಲ್ಲಿಗೆ ಗ್ರಾಪಂ ಅವಶ್ಯಕವೇನಿದೆ ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಸಚಿವರಾಗಲೀ, ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಕೂಡಲೇ ಇತ್ತ ಗಮನ ಹರಿಸಿ ರಸ್ತೆ ದುರಸ್ಥಿ ಮಾಡಬೇಕು, ಇಲ್ಲದಿದ್ದರೆ ಈ ಎರಡೂ ಗ್ರಾಮಗಳ ಗ್ರಾಮಸ್ಥರು ರಸ್ತೆ ದುರಸ್ಥಿಗಾಗಿ ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದಾರೆ.