ಮಾರಸಿಂಗನಹಳ್ಳಿಯಲ್ಲಿ ಚಿರತೆ ದಾಳಿಗೆ ನಾಯಿ ಬಲಿ..!

KannadaprabhaNewsNetwork | Published : May 30, 2025 12:09 AM
ಮದ್ದೂರು ತಾಲೂಕಿನ ನಿಲುವಾಗಿಲು ಗ್ರಾಪಂ ವ್ಯಾಪ್ತಿಯ ಮಾರಸಿಂಗನಹಳ್ಳಿಯಲ್ಲಿ ಬೀದಿ ದೀಪಗಳು ಕೆಟ್ಟು ಬಹಳ ದಿನಗಳಾಗಿದ್ದರೂ ದುರಸ್ತಿಗೆ ಗ್ರಾಪಂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗ್ರಾಮಸ್ಥರು ಪಿಡಿಒ ರವಿಕುಮಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.
Follow Us

ಕನ್ನಡಪ್ರಭ ವಾರ್ತೆ ಮದ್ದೂರು

ಚಿರತೆ ದಾಳಿಯಿಂದ ನಾಯಿ ಬಲಿಯಾಗಿರುವ ಘಟನೆ ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಗುರುವಾರ ಬೆಳಗಿನ ಜಾವ ಜರುಗಿದೆ.

ಗ್ರಾಮದ ಅಪ್ಪಾಜಿ ಮತ್ತು ನಂಜೇಗೌಡ ರ ಮನೆ ಹಿಂಭಾಗದ ಧನದ ಕೊಟ್ಟಿಗೆಗೆ ನುಗ್ಗಿ ಜಾನುವಾರು ಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಮನೆ ಬಳಿಯಿದ್ದ ಸಾಕು ನಾಯಿ ಬೊಗಳುವ ಶಬ್ದ ಕೇಳಿ ಕೊಟ್ಟಿಗೆ ಮೇಲೆ ದಾಳಿ ಮಾಡುವುದು ಬಿಟ್ಟು ಏಕಾಏಕಿ ನಾಯಿ ಮೇಲೆ ದಾಳಿ ಮಾಡಿ ತಿಂದು ಹಾಕಿ ಸ್ಥಳದಿಂದ ಪರಾರಿಯಾಗಿದೆ.

ತಾಲೂಕಿನ ನಿಲುವಾಗಿಲು ಗ್ರಾಪಂ ವ್ಯಾಪ್ತಿಯ ಮಾರಸಿಂಗನಹಳ್ಳಿಯಲ್ಲಿ ಬೀದಿ ದೀಪಗಳು ಕೆಟ್ಟು ಬಹಳ ದಿನಗಳಾಗಿದ್ದರೂ ದುರಸ್ತಿಗೆ ಗ್ರಾಪಂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗ್ರಾಮಸ್ಥರು ಪಿಡಿಒ ರವಿಕುಮಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡ ಎಂ. ಸಿ.ನಂಜೇಶ್ ಆರೋಪಿಸಿದ್ದಾರೆ.

ಗ್ರಾಪಂ ಅಪ್ಪಾಜಿ ಮತ್ತು ನಂಜೇಗೌಡರ ಮನೆ ಸೇರಿದಂತೆ ಗ್ರಾಮದಲ್ಲಿ ಕೆಟ್ಟು ಹೋಗಿರುವ ಬೀದಿ ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಶಾಸಕರು ಮತ್ತು ತಾಪಂ ಇಒ ದೂರು ನೀಡುವುದರ ಜೊತೆಗೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಂಜೇಶ್ ಎಚ್ಚರಿಕೆ ನೀಡಿದರು.

ಚಿರತೆ ದಾಳಿಗೆ ಹಸು, ಕರು ಬಲಿ

ಪಾಂಡವಪುರ:

ಚಿರತೆ ದಾಳಿಯಿಂದ ಹಸು ಮತ್ತು ಕರು ಬಲಿಯಾಗಿರುವ ಘಟನೆ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ಗ್ರಾಮದ ಮರಂಕೇಗೌಡರಿಗೆ ಸೇರಿದ ಹಸು ಮತ್ತು ಕರು ಎರಡನ್ನು ಕೊಂದು ತಿಂದಿರುವ ಚಿರತೆ ಪರಾರಿಯಾಗಿದೆ. ಬುಧವಾರ ರಾತ್ರಿ ಮನೆ ಪಕ್ಕದ ದನಕೊಟ್ಟಿಗೆಗೆ ನುಗ್ಗಿರುವ ಚಿರತೆ ಹಸು ಮತ್ತು ಕರು ಎರಡರ ಮೇಲೂ ದಾಳಿ ನಡೆಸಿದೆ. ಕರುವನ್ನು ಕೊಂದು ಮನೆಯ ಬಳಿ ಬಿಟ್ಟು ಹಸುವನ್ನು ಎಳೆದುಕೊಂಡು ಪಕ್ಕದಲ್ಲಿ ಇರುವ ನಾಲೆಯ ಬಳಿ ಬಿಟ್ಟು ಪರಾರಿಯಾಗಿದೆ. ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ವೈದ್ಯರಿಂದ ಮೃತ ಹಸು ಮತ್ತು ಕರುವಿನ ಪಂಚನಾಮೆ ನಡೆಸಿದ್ದಾರೆ. ಜತೆಗೆ ಚಿರತೆ ಸೆರೆಗೆ ಬೋನ್‌ನ್ನು ಇರಿಸಿದ್ದಾರೆ.