ಕನ್ನಡಪ್ರಭ ವಾರ್ತೆ, ತುಮಕೂರುಶಿಕ್ಷಣವೆಂಬುದು ನಿಮ್ಮನ್ನು ಗುಡಿಸಿಲಿನಿಂದ ಅರಮನೆಗೆ ಕರೆದುಕೊಂಡು ಹೋಗುವ ರಹದಾರಿ. ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತೆಂದು ಕುಗ್ಗದೆ, ಆತ್ಮಸ್ಥೈರ್ಯದಿಂದ ಸಾಗಿದಲ್ಲಿ ಮುಂದೆ ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುತ್ತದೆ ಎಂದು ಜಾನಪದ ಕಲಾವಿದರಾದ ಡಾ.ಅಮ್ಮರಾಮಚಂದ್ರ ಅಭಿಪ್ರಾಯಪಟ್ಟಿದ್ದಾರೆ.ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರಿನ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ಯುವ ರೆಡ್ಕ್ರಾಸ್, ಐಕ್ಯೂಎಸಿ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಸಂಭ್ರಮ-2026 ಗೆ ಚಾಲನೆ ನೀಡಿ ಮಾತನಾಡಿದರು.ಎಸ್.ಎಸ್.ಎಲ್.ಸಿಯಲ್ಲಿ ನಾಲ್ಕನೇ ಬಾರಿಗೆ 240ಅಂಕ ಪಡೆದು ಪಾಸಾದ ನಾನು, ಎಂ.ಎ.ಯಲ್ಲಿ ಚಿನ್ನದ ಪದಕ ಪಡೆದೆ. ಸೂಕ್ತ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹ ದೊರೆತರೆ ದೌರ್ಬಲ್ಯಗಳನ್ನು ಮೆಟ್ಟಿನಿಂತು, ಸಾಧನೆಯ ಕಡೆಗೆ ಹೆಜ್ಜೆ ಹಾಕಲು ಸ್ಪೂರ್ತಿ ದೊರೆಯುತ್ತದೆ. ಸೋತವರನ್ನು ಸೋಲಿಸುವುದೇ ಸಂಭ್ರಮವಲ್ಲ. ಗೆದ್ದವರನ್ನು ಸೋಲಿಸುವುದು ನಿಜವಾದ ಸಂಭ್ರಮ. ಪೋಷಕರ ಕಣ್ಣಲ್ಲಿ ಆನಂದ ಭಾಷ್ಪ ಬರುವಂತೆ ಮಾಡುವುದೇ ನಮ್ಮಗುರಿಯಾಗಬೇಕು ಎಂದರು. ಶಾಲಾ ಕಾಲೇಜು ದಿನಗಳಲ್ಲಿ ಹಾಡುಗಾರನಾಗಿ, ರಂಗೋಲಿ ಕಲೆಗಾರನಾಗಿ ಎಲ್ಲೆಡೆ ಸ್ಪರ್ಧೆ ಮಾಡುತ್ತಿದೆ. ಇದನ್ನು ಗುರುತಿಸಿದ ಹಿರಿಯರು ನನ್ನ ಬೆನ್ನುತಟ್ಟಿದರು. ಇದರ ಭಾಗವಾಗಿ ಜಾನಪದ ಹಾಡುಗಾರಿಕೆಯಲ್ಲಿ ಚಿನ್ನ ಪದಕ ಪಡೆಯುವುದರ ಜೊತೆಗೆ, ೯ ವಿದೇಶಗಳಲ್ಲಿ ಹಾಡುಗಾರಿಕೆ ಮಾಡಲು ಅವಕಾಶ ದೊರೆಯಿತು. ಇದಕ್ಕೆ ವೇದಿಕೆ ಕಲ್ಪಿಸಿದ್ದು ಯುವಜನೋತ್ಸವ. ಕಾಲೇಜಿನ ಇಂತಹ ಸಾಂಸ್ಕೃತಿಕ ವೇದಿಕೆಗಳು, ಯುವ ಜನೋತ್ಸವಗಳನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ, ಅವುಗಳಿಂದ ನಿಮ್ಮ ಜೀವನವೇ ಬದಲಾಗಲಿದೆ ಎಂದು ತಮ್ಮ ಬದುಕನ್ನೇ ಉದಾಹರಿಸಿದರು. ಅಂತಾರಾಷ್ಟ್ರೀಯ ಅಥ್ಲಿಟ್ ತೇಜಶ್ವಿನಿ ಮಾತನಾಡಿ, ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳಿದ್ದು, ಎಲ್ಲಾ ಇಲಾಖೆಗಳ ಉದ್ಯೋಗದಲ್ಲಿ ಶೇ 2 ರ ಮೀಸಲಾತಿ ಕಲ್ಪಿಸಲಾಗಿದೆ. ಯುವಜನರು ಇದರ ಸದುಪಯೋಗ ಪಡೆದುಕೊಂಡು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಸಂತ.ಟಿ.ಡಿ. ಹದಿ ಹರೆಯದ ಈ ಸಮಯವನ್ನು ನಾವು ಸಮರ್ಪಕವಾಗಿ ಬಳಸಿಕೊಂಡರೆ ಜೀವನದಲ್ಲಿ ಗೆಲ್ಲಬಹುದು. ಇದು ನಮಗೆ ಹೆಮ್ಮೆಯ ವಿಚಾರವಾಗಿದೆ. ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವುದರ ಜೊತೆಗೆ ಹೊಸಬರು ಸಾಧನೆಯತ್ತ ಗಮನಹರಿಸಲಿ ಎಂದು ಶುಭ ಹಾರೈಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಅಯೇಷಾ ಸಿದ್ದೀಖಾ , ಶಿಕ್ಷಣವೆಂಬುದು ಮಕ್ಕಳ ಸರ್ವಾಂಗೀಣ ಅಭಿವೃದ್ದಿಯ ಸಂಕೇತವಾಗಿದೆ. ನಮ್ಮಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಅವರನ್ನು ಹುರಿದುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ಅನುಸೂಯ.ಕೆ.ವಿ.,ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ರೇಣುಕ ಪ್ರಸಾದ್.ಬಿ.ಆರ್,ಕನ್ನಡ ಉಪನ್ಯಾಸಕ ಡಾ.ಗಂಗಾಧರ್. ಜೆ.ಡಾ.ಯೋಗೀಶ್, ಡಾ.ಮಲ್ಲೇಶಪ್ಪ.ಟಿ.ಎಸ್,ಮಹದೇವ್, ರಘು,ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್ ಮತ್ತಿತರರು ಉಪಸ್ಥಿತರಿದ್ದರು. ಮೃತ್ಯುದೇವತೆ ಸಿನಿಮಾತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.