ಸ್ವತಃ ನಾನೇ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿಸಿದ್ದೆ. ರೈತರನ್ನು ಒಕ್ಕಲೆಬ್ಬಿಸಿರುವ ಜಾಗಕ್ಕೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಅರಣ್ಯ, ವರ್ಗಿಕರಿಸಿದ ಅರಣ್ಯ, ಪರಿಭಾವಿತ ಅರಣ್ಯ ಎಂದು ಹೇಳುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಗ್ರಾಮ ಅರಣ್ಯ 545.5 ಹೆಕ್ಟೇರ್ ಹೊಂದಿದೆ ಎಂದು ಮಾಹಿತಿಯನ್ನು ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ದುರ್ಬಲ ವರ್ಗದವರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿನಿಂದ ಒಕ್ಕಲೆಬ್ಬಿಸುವ ಅರಣ್ಯ ಅಧಿಕಾರಿಗಳ ಕ್ರಮವನ್ನು ತಡೆಯಬೇಕು ಎಸ್.ಎನ್. ಎಂದು ಶಾಸಕ ನಾರಾಯಣಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರಶೋತ್ತರ ಸಮಯದಲ್ಲಿ ಮಾತನಾಡಿ, ರೈತರು ತಲೆತಲಾಂತರಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಗೆ ಸಾಗುವಳಿ ಮಂಜೂರು ಮಾಡಿದ್ದು, ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಅವರ ಹೆಸರಲ್ಲಿ ಪಹಣಿ ಇದೆ. ಅಂತಹ ಜಮೀನಿನಿಂದ ನಿರ್ದಾಕ್ಷಿಣ್ಯವಾಗಿ ಏಕಾಏಕಿ ಖಾಲಿ ಮಾಡಿಸಲಾಗಿದೆ. ತಮ್ಮ ತಾಲೂಕಿನಲ್ಲಿ ಇದಕ್ಕೆ ಹಲವು ಉದಾಹರಣೆಗಳಿವೆ ಎಂದರು.
ಗ್ರಾಮ ಅರಣ್ಯಕ್ಕೆ ಮಾನದಂಡವೇನು?
ಸ್ವತಃ ನಾನೇ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿಸಿದ್ದೆ. ರೈತರನ್ನು ಒಕ್ಕಲೆಬ್ಬಿಸಿರುವ ಜಾಗಕ್ಕೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧವಿಲ್ಲ. 40 ಸೆಕ್ಷನ್ ಅಡಿಯಲ್ಲಿ ಅರಣ್ಯ, ವರ್ಗಿಕರಿಸಿದ ಅರಣ್ಯ, ಪರಿಭಾವಿತ ಅರಣ್ಯ ಎಂದು ಹೇಳುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಗ್ರಾಮ ಅರಣ್ಯ 545.5 ಹೆಕ್ಟೇರ್ ಹೊಂದಿದೆ ಎಂದು ಮಾಹಿತಿಯನ್ನು ನೀಡಿದ್ದು, ಗ್ರಾಮ ಅರಣ್ಯವನ್ನು ಯಾವ ಮಾನದಂಡಗಳ ಮೇಲೆ ಆಧಾರದ ನಿರ್ಧಾರ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಪರಿಭಾವಿತ ಅರಣ್ಯ ನಿಯಮ ಉಲ್ಲಂಘನೆ
ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮ ಅರಣ್ಯವನ್ನು ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸಭೆಗಳಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಶಾಸಕರು ಮತ್ತು ಸಚಿವರು ಮಾತನಾಡಿದ್ದು ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ 2 ಎಕರೆ 18 ಗುಂಟೆ ವಿಸ್ತೀರ್ಣದಲ್ಲಿ ಕನಿಷ್ಠ ಐವತ್ತು ಮರಗಳನ್ನು ಹೊಂದಿರಬೇಕು ಹಾಗೂ ಮೂವತ್ತು ಸೆಂಟಿಮೀಟರ್ ನಷ್ಟು ದಪ್ಪನೆಯ ಮರಗಳು ಇದ್ದರೆ ಮಾತ್ರ ಅದನ್ನು ಪರಿಭಾವಿತ ಅರಣ್ಯ ಎಂದು ನಿರ್ಧರಿಸಬೇಕು. ಆದರೆ ಆ ರೀತಿಯ ಲಕ್ಷಣಗಳು ಯಾವುದೂ ಇಲ್ಲದಿದ್ದರೂ, ಜಿಲ್ಲೆಯಾದ್ಯಂತ ಅರಣ್ಯ ಇಲಾಖೆಯ ದಾಖಲೆಗಳಲ್ಲಿ ಸುಮಾರು 4980 ಹೇಕ್ಟೇರ್ ಎಂದು ಗುರುತಿಸುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ ಪರಿಶೀಲಿಸಿ ಕ್ರಮ: ಸ್ಪಷ್ಟನೆ
ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸುವ ಸಲುವಾಗಿಯೇ ಸುಪ್ರೀಂಕೋರ್ಟ್ ಆದೇಶದ ಮೇಲೆ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಬಂಗಾರಪೇಟೆ ಕ್ಷೇತ್ರದಲ್ಲಿ ರೈತ-ರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಿದರೆ ಅದರ ಬಗ್ಗೆ ನಿರ್ದಿಷ್ಟವಾಗಿ ದೂರು ಕೊಡಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.