ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷರಾಗಿ ಗೋಣಿತುಮಕೂರು ಲಕ್ಷ್ಮೀಕಾಂತ್, ಸದಸ್ಯರಾಗಿ ದಂಡಿನಶಿವರ ಕುಮಾರ್ , ಹಬುಕನಹಳ್ಳಿ ವಸಂತಕುಮಾರ್, ದುಂಡದ ಡಿ.ಬಿ.ಶಿವರಾಜು, ಪಿ.ಮಾಲಿನಿ, ರಾಘದೇವನಹಳ್ಳಿಯ ಎ.ಎಂ.ಸುಧಾಮಣಿ, ಮುದ್ದನಹಳ್ಳಿಯ ಬ್ಯಾಟರಂಗೇಗೌಡ, ತುರುವೇಕೆರೆಯ ರೇವಣ್ಣ, ನದೀಮ್ ಪಾಷಾ, ಬಾಣಸಂದ್ರದ ಸತ್ಯನಾರಾಯಣ, ಬೆಂಡೇಕೆರೆಯ ಬಿ.ಎನ್.ಕೃಷ್ಣೇಗೌಡ, ಅರೇಮಲ್ಲೇನಹಳ್ಳಿಯ ಆರ್.ಶಿವಣ್ಣ, ಮುತ್ತುಗದಹಳ್ಳಿಯ ಎಂ.ಜಿ.ರವಿಕುಮಾರ್, ನಾಗಲಾಪುರ ಜಗದೀಶ್, ಮಾಯಸಂದ್ರದ ಖಾದೀರ್ ಪಾಷರವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿಗಳು ಮಾಡಿರುವ ಆದೇಶವನ್ನು ಜಿಲ್ಲಾ ಪಂಚಾಯಿತಿ ಸಿಇಒ ರವರು ಜಾರಿಗೊಳಿಸಿದ್ದಾರೆಂದು ಗ್ಯಾರಂಟಿ ಯೋಜನಾ ಅನುಷ್ಠಾನಾ ಸಮಿತಿಯ ಕಾರ್ಯದರ್ಶಿಯೂ, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಅನಂತರಾಜು ಘೋಷಣೆ ಮಾಡಿದರು.ನೂತನ ಅಧ್ಯಕ್ಷ ಹಾಗೂ ಸದಸ್ಯರ ಬೆಂಬಲಿಗರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕೋಳಾಲ ನಾಗರಾಜು, ದೇವರಾಜು, ಮುಖಂಡರಾದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಉಗ್ರೇಗೌಡ, ನಿರ್ದೇಶಕರಾದ ತಾವರೇಕೆರೆ ಬೋರೇಗೌಡ ಸೇರಿ ಹಲವಾರು ರಾಜಕೀಯ ಮುಖಂಡರು, ಸಂಘ ಸಂಸ್ಥೆಯ ಆಧ್ಯಕ್ಷರು ನೂತನ ತಂಡಕ್ಕೆ ಅಭಿನಂದಿಸಿದರು.ನೂತನ ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೀಕಾಂತ್ ಮಾತನಾಡಿ, ತಮ್ಮನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮೆಲ್ ಕಾಂತರಾಜುರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವಂತೆ ಮಾಡಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಸರ್ಕಾರದ ಯೋಜನೆ ಇದುವರೆಗೆ ಯಾರಿಗೆ ದೊರೆತಿಲ್ಲವೋ ಅವರೆಲ್ಲರಿಗೂ ಯೋಜನೆಯ ಉಪಯೋಗವನ್ನು ಕೊಡಿಸುವಲ್ಲಿ ತಾವು ಪ್ರಯತ್ನಿಸುವುದಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಲಾಗಿರುವ ಪಂಚ ಗ್ಯಾರಂಟಿಗಳು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೂ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚಿಸಲಾಗಿತ್ತು. ಇದರಂತೆ ತುರುವೇಕೆರೆ ತಾಲೂಕಿನಲ್ಲೂ 30-7-24 ರಂದು ತುರುವೇಕೆರೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ರವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಿ 14 ಜನರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಆದರೆ ಧಿಡೀರನೆ ತಾಲೂಕು ಸಮಿತಿಯನ್ನು ಪುನರ್ರಚನೆ ಮಾಡಿರುವುದು ಅಚ್ಚರಿ ಎನಿಸಿದೆ. ಬಹುಶಃ ರಾಜ್ಯದಲ್ಲಿ ಇದೇ ಮೊದಲ ಪ್ರಕರಣ ಎಂದು ಹೇಳಲಾಗಿದೆ.ಇದೇ ವೇಳೆ ಹಿಂದಿನ ಅಧ್ಯಕ್ಷರಾಗಿದ್ದ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಸೇರಿದಂತೆ ಹಿಂದಿನ ಹಲವಾರು ಸದಸ್ಯರು ಪದಗ್ರಹಣ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು ಚರ್ಚಾ ವಿಷಯವಾಗಿತ್ತು.