ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ದರ ವಸೂಲಿ ಮಾಡಬೇಡಿ

KannadaprabhaNewsNetwork | Published : Jun 20, 2025 12:34 AM

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗ್ರೇಡ್ 2 ತಹಸೀಲ್ದಾರ್ ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ರೈತ ಮುಖಂಡರು, ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾಗೂ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಸಲಾಯಿತು.

ಹಿರಿಯೂರು: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗ್ರೇಡ್ 2 ತಹಸೀಲ್ದಾರ್ ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ರೈತ ಮುಖಂಡರು, ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾಗೂ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಸಲಾಯಿತು.

ಸಭೆಯಲ್ಲಿ ತಾಲೂಕಿನ ರಾಸಾಯನಿಕ ಗೊಬ್ಬರ ಮಾರಾಟಗಾರರ ಅಂಗಡಿಗಳಲ್ಲಿ ರೈತರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಇತ್ತೀಚೆಗೆ ಜಿಲ್ಲೆಯಲ್ಲಿ ಸ್ಕ್ಯಾಡ್ ಅಧಿಕಾರಿಗಳು ಬಂದಿದ್ದರು ಎಂಬ ಕಾರಣಕ್ಕೆ ಅಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ, ಗೊಬ್ಬರ, ಔಷಧಿ ಮುಂತಾದವುಗಳನ್ನು ಖರೀದಿಸಲು ಬಂದಾಗ ಅಂಗಡಿಗಳು ಮುಚ್ಚಿದ್ದನ್ನು ಕಂಡು ರೈತರು ಅಂಗಡಿ ಮಾಲೀಕರ ವರ್ತನೆಗೆ ಬೇಸರಗೊಂಡು ವಾಪಸ್ ತೆರಳಿದ್ದು, ರೈತರಿಗೆ ಅಂಗಡಿ ಮುಚ್ಚುವುದನ್ನು ಮುಂಜಾಗ್ರತೆಯಾಗಿ ತಿಳಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ರಾಸಾಯನಿಕ ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮುಂಭಾಗದಲ್ಲಿ ಹಾಗೂ ಕೃಷಿ ಇಲಾಖೆ ಮುಂಭಾಗದಲ್ಲಿ ದರ ಪಟ್ಟಿ ಕಡ್ಡಾಯವಾಗಿ ಹಾಕಬೇಕು. ರೈತರಿಗೆ ನ್ಯಾಯಯುತ ಎಂಆರ್‌ಪಿ ಬೆಲೆಗೆ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ನೀಡಬೇಕು. ಹೆಚ್ಚುವರಿ ಹಣ ವಸೂಲಿ ಮಾಡಕೂಡದು ಎಂದು ರೈತ ಮುಖಂಡರು ಒತ್ತಾಯಿಸಿದರು.

ಅವಧಿ ಮುಗಿದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ವಿತರಿಸುತ್ತಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಮತ್ತು ಔಷಧಿ ಖರೀದಿಸಿದಾಗ ಸೂಕ್ತ ಜಿಎಸ್‌ಟಿ ಬಿಲ್ಲುಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಗೊಬ್ಬರದಂಗಡಿ ಮಾಲೀಕರು, ರಾಸಾಯನಿಕ ಗೊಬ್ಬರ ಅಂಗಡಿ ಮಾಲೀಕರು ದಿನಾಂಕ 28-5-2025 ರಂದು ಎಲ್ಲರೂ ಒಂದೇ ಬಾರಿ ತಂಬ್ ನೀಡಲು ಹೋಗಿದ್ದುದರಿಂದ ಅಂಗಡಿಗಳನ್ನು ಮುಚ್ಚಲಾಗಿತ್ತು. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ಅಂಗಡಿಗಳ ಮುಂಭಾಗ ದರಪಟ್ಟಿ ಹಾಕಬೇಕು ಹಾಗೂ ಹೆಚ್ಚಿನ ದರವನ್ನು ವಸೂಲು ಮಾಡಬಾರದು. ಹಾಗೇನಾದರೂ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಉಮೇಶ್, ಪವಿತ್ರ, ಪಾರ್ವತಮ್ಮ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಲೋಕೇಶ್, ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಜಿಲ್ಲಾ ಉಪಾಧ್ಯಕ್ಷ ಎಂ.ಲಕ್ಷ್ಮಿಕಾಂತ್, ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಓ.ಶಿವಕುಮಾರ್, ಕಾರ್ಯಾಧ್ಯಕ್ಷ ದಸ್ತಗಿರಿಸಾಬ್, ಉಪಾಧ್ಯಕ್ಷ ಮೇಟಿಕುರ್ಕೆ ತಿಪ್ಪೇಸ್ವಾಮಿ, ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು, ಕಾತ್ರಿಕೇನಹಳ್ಳಿ ಮಂಜುನಾಥ್, ವoದೇ ಮಾತರಂ ರೈತ ಸಂಘದ ಅಧ್ಯಕ್ಷ ಟಿ.ಸಂತೋಷ್, ಭಾರತೀಯ ಕಿಸಾನ್ ಸಂಘದ ಜಯಣ್ಣ, ದಿಂಡಾವರ ಚಂದ್ರಗಿರಿ, ರಾಸಾಯನಿಕ ಕೃಷಿ ಪರಿಕರ ಮಾರಾಟಗಾರರಾದ ಎಂ.ವಿ.ಹರ್ಷ, ಜಗನ್ನಾಥ್, ಮಂಜೇಶ್ ಕುಮಾರ್, ಶಿವಣ್ಣ ಹಾಗೂ ತಾಲೂಕಿನ ಎಲ್ಲಾ ಗೊಬ್ಬರದ ಅಂಗಡಿಗಳ ಮಾಲೀಕರು ಇದ್ದರು.