ಪ.ಜಾ, ಪ.ಪಂ ಅಲೆಮಾರಿ ನಿಗಮದ ಅಧ್ಯಕ್ಷೆ ಸಲಹೆ । ನಗರದಲ್ಲಿನ ಬಡಾವಣೆಗೆ ಭೇಟಿ । ಸಮಸ್ಯೆಗಳ ಆಲಿಸುವಿಕೆ
ಕನ್ನಡಪ್ರಭ ವಾರ್ತೆ ಯಾದಗಿರಿ
ನಿಮ್ಮ ಸಮಸ್ಯೆಗಳಿಗೆ ಹಂತ, ಹಂತವಾಗಿ ಪರಿಹಾರ ನೀಡಲಾಗುವವುದು. ಸರ್ಕಾರ ಅನುದಾನ ಸೇರಿದಂತೆಯೇ ವಿವಿಧ ಯೋಜನೆಗಳು ಜಾರಿ ಮಾಡಿದೆ. ಅವುಗಳನ್ನು ಪಡೆದು ಆರ್ಥಿಕವಾಗಿ ಮುಂದೆ ಬನ್ನಿ, ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷೆ ಜಿ.ಪಲ್ಲವಿ ಹೇಳಿದರು.ಇಲ್ಲಿನ ವಾರ್ಡ್ ನಂ.5ರ ಬೋಳಿವಾಡದ ಮೇದಾರ ಬಡಾವಣೆಗೆ ಭಾನುವಾರ ಭೇಟಿ ನೀಡಿದ ವೇಳೆ ಅಲ್ಲಿ ಸೇರಿದ್ದ ಮೇದಾರ ಸಮುದಾಯದ ಜನರನ್ನು ಉದ್ದೇಶಿಸಿ, ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡಿದಂತೆಯೇ ಪಲ್ಲವಿ ಅವರು ಸುದೀರ್ಘ ಮಾತುಗಳಿಂದ ಅನೇಕ ವಿಷಯಗಳನ್ನು ತಿಳಿಸಿದರು.
ನೀವು ನೀವೇ ಕಚ್ಚಾಡಬೇಡಿ, ಇದು ಮೊದಲೇ ಇಕ್ಕಟ್ಟಾದ ಓಣಿ, ಇಲ್ಲಿ ಚರಂಡಿ ವ್ಯವಸ್ಥೆ ಇಲ್ಲ, ಮನೆ ಮುಂದೆ ಹರಿಯುವ ಕಲುಷಿತ ನೀರಿನ ಮುಂದೆ ಕುಳಿತು ಬುಟ್ಟಿ ಇತರೆ ವಸ್ತುಗಳು ತಯಾರಿಸುತ್ತಿದ್ದೀರಿ, ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ? ಎಂದು ಕೇಳಿದ ಪಲ್ಲವಿ, ಅಲ್ಲಿಯೇ ಕುಳಿತಿದ್ದ ಸಂಜನಾ ಎಂಬ ಹುಡುಗಿ ಮಾತಾಡಿಸಿ, ಶಾಲೆ ಏಕೆ ಬಿಟ್ಟಿದ್ದಿ, ಯಾರು ಬಿಡಿಸಿದರು, ನಾಳೆಯಿಂದಲೇ ಶಾಲೆಗೆ ಹೋಗಬೇಕು, ಏನು ತಾಯಿ ಮಗಳಿಗೆ ಶಾಲೆ ಕಳುಹಿಸುತ್ತಿಯೋ, ಇಲ್ಲವೋ ಎಂದು ಕೇಳಿದಾಗ ಅಯಿತು ಕಳುಹಿಸಿತ್ತೀನಿ ಎಂದು ತಾಯಿ ಹೇಳಿದರೂ ಸಮಾಧಾನವಾಗದ ಅವರು ಕೈಮೇಲೆ ಕೈ ಹಾಕಿಸಿಕೊಂಡು ಭರವಸೆ ಪಡೆದರು.
ಈ ಮೇದಾರ ಬಡಾವಣೆಗೆ ಏನೇನು ಸೌಲಭ್ಯಗಳು ಬೇಕು ಅದೆಲ್ಲ ಮಡಿಕೊಡುವಂತೆಯೇ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪ ಸೇರಿದಂತೆಯೇ ಇತರರಿದ್ದರು. ಸಮಾಜದ ಮೂರು ಪ್ರಮುಖ ಬೇಡಿಕೆಗಳ ಮನವಿ ಸಲ್ಲಿಸಿದರು.ರುದ್ರಭೂಮಿಗೆ ಜಾಗ ನೀಡಬೇಕು, ಸಮುದಾಯ ಭವನ ನಿರ್ಮಾಣವಾಗಬೇಕು ಮತ್ತು ಬಂಬು ಬಜಾರದ ವ್ಯವಸ್ಥೆ ಆಗಬೇಕೆಂದು ಸಮಾಜದ ಪ್ರಮುಖರು ಒತ್ತಾಯಿಸಿದರು.