ಬಡವರಿಗೆ ತೊಂದರೆ ಕೊಡಬೇಡಿ: ಶಾಸಕ ದೇಶಪಾಂಡೆ

KannadaprabhaNewsNetwork |  
Published : Jun 26, 2024, 12:35 AM IST
ಹಳಿಯಾಳ ತಾಪಂ ಸಭಾಭವನದಲ್ಲಿ ಮಂಗಳವಾರ ಹಳಿಯಾಳ-ದಾಂಡೇಲಿ ತಾಲೂಕ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ನಡೆಸಿದರು. | Kannada Prabha

ಸಾರಾಂಶ

ಸ್ವಚ್ಛತೆಗೆ ಆದ್ಯತೆ ನೀಡಿ: ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಿವೆ. ಅದಕ್ಕಾಗಿ ಎಲ್ಲ ಗ್ರಾಪಂಗಳು ಮೂರು ದಿನಗಳೊಳಗೆ ಗ್ರಾಮಗಳಲ್ಲಿನ ಚರಂಡಿಗಳನ್ನು ಶುಚಿಗೊಳಿಸಿ, ಘನತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡಿಸಿ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಹಳಿಯಾಳ: ಅಧಿಕಾರಿಗಳು ಬಡವರು, ಶೋಷಿತರನ್ನು ಪೀಡಿಸಬಾರದು. ನಿಮ್ಮೊಂದಿಗೆ ವಾದ, ತಕರಾರು ಮಾಡುವಷ್ಟು ಧೈರ್ಯ ಅವರಲ್ಲಿ ಇರಬಹುದು, ಆದರೆ ನಿಮ್ಮ ಪೀಡನೆಯಿಂದ ನೊಂದ ಮನಗಳು ಆಕ್ರಂದಿಸಿ ನೀಡುವ ಶಾಪ ಬಹಳ ಕೆಟ್ಟದ್ದು. ಇದು ನಿಮಗೆ ಅಥವಾ ನಿಮ್ಮ ಮುಂದಿನ ಪೀಳಿಗೆಗೆ ತಟ್ಟದೇ ಇರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಮಂಗಳವಾರ ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಐವತ್ತು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಹಿರಿಯನಾಗಿ ನನ್ನ ಅನುಭವದಿಂದ ಹೇಳುತ್ತಿದ್ದೇನೆ, ಬಡವರಿಗೆ ತೊಂದರೆ ಕೊಟ್ಟವರಿಗೆ ಯಾವತ್ತೂ ಒಳಿತಾಗಲ್ಲ ಎಂದರು. ಬಡತನ ಬಹಳ ಕೆಟ್ಟದ್ದು. ಬಡತನ ಯಾರಿಗೂ ಬರಬಾರದು. ಬಡವರಿಗೆ ಅನ್ಯಾಯವಾದರೆ ಸಹಿಸುವ ಶಕ್ತಿ ನನಗಿಲ್ಲ. ಇದನ್ನು ಅಧಿಕಾರಿಗಳು ಸರಿಯಾಗಿ ತಿಳಿದುಕೊಳ್ಳಿ. ಒಂಬತ್ತು ಬಾರಿ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಹೀಗಿರುವಾಗ ನನ್ನ ಮತದಾರರಿಗೆ ತೊಂದರೆಯಾದರೆ ಹೇಗೆ? ನಾನು ಸಂರಕ್ಷಿಸಬೇಕಲ್ಲವೇ ಎಂದು ಪ್ರಶ್ನಿಸಿದರು.

ನಿಮ್ಮ ಬಳಿ ಬರುವವರ ಸಮಸ್ಯೆಗಳನ್ನು ಮಾನವೀಯತೆಯ ದೃಷ್ಟಿಯಲ್ಲಿ ಪರಿಹರಿಸಿ. ಇನ್ಮುಂದೆ ನನ್ನ ಕ್ಷೇತ್ರದ ಯಾವುದೇ ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲಿ, ಅನಗತ್ಯವಾಗಿ ಕೊಡುವುದಾಗಲಿ ಕಚೇರಿ ಅಲೆದಾಡಿಸುವ ಕಾರ್ಯವನ್ನು ಮಾಡಿದ ಸುದ್ದಿ ನನ್ನ ಕಿವಿಗೆ ಬೀಳಬಾರದು ಎಂದರು.

ಶಾಸಕರು ಗರಂ: ಅರಣ್ಯ ಇಲಾಖೆಯ ಕೆಲವು ವಲಯ ಅರಣ್ಯಾಧಿಕಾರಿಗಳ ಆಡಳಿತ ಪದ್ಧತಿಯ ಬಗ್ಗೆ ತೀವ್ರ ಗರಂ ಆದ ದೇಶಪಾಂಡೆ ಅವರು, ಅರಣ್ಯ ಇಲಾಖೆಯ ಬಗ್ಗೆ ನನಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಹೊಸ ಅತಿಕ್ರಮಣಕ್ಕೆ ಅವಕಾಶ ನೀಡಬೇಡಿ ಎಂದು ಮೊದಲೇ ಹೇಳಿದ್ದೇನೆ. ಈಗಲೂ ಅದೇ ಮಾತನ್ನು ಪುನುರುಚ್ಚರಿಸುತ್ತೇನೆ. ಆದರೆ ದಶಕಗಳಿಂದ ಉಳುಮೆ ಮಾಡುವ ರೈತರನ್ನು ಒಕ್ಕಲೆಬ್ಬಿಸಲು ಹೋಗಬೇಡಿ. ಅಭಿವೃದ್ಧಿ ಕಾರ್ಯಗಳಿಗೆ ಅನಗತ್ಯವಾಗಿ ಪರಿಸರ ನೆಪದಲ್ಲಿ ಕಾಡಿಸಬೇಡಿ ಎಂದು ತಾಕಿತು ಮಾಡಿದರು.

ಸ್ವಚ್ಛತೆಗೆ ಆದ್ಯತೆ ನೀಡಿ: ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಿವೆ. ಅದಕ್ಕಾಗಿ ಎಲ್ಲ ಗ್ರಾಪಂಗಳು ಮೂರು ದಿನಗಳೊಳಗೆ ಗ್ರಾಮಗಳಲ್ಲಿನ ಚರಂಡಿಗಳನ್ನು ಶುಚಿಗೊಳಿಸಿ, ಘನತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡಿಸಿ ಎಂದರು.

ಗ್ರಾಪಂಗಳಲ್ಲಿ ಸ್ವಚ್ಛತೆ ಕಾರ್ಯ ಸರಿಯಾಗಿ ನಡೆದಿದೆಯಾ ಎನ್ನುವುದನ್ನು ಮೇಲಧಿಕಾರಿಗಳು ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಬೇಕೆಂದರು. ಗ್ರಾಮಾಂತರ ಭಾಗದಲ್ಲಿ ನಿಷ್ಕ್ರಿಯಗೊಂಡಿರುವ ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ ಎಂದು ಸೂಚಿಸಿದರು.

ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ಮೂಲ ಸೌಲಭ್ಯಗಳಿದ್ದರೂ ಸಣ್ಣಪುಟ್ಟ ಸಮಸ್ಯೆಗಳಿಗೆ ರೋಗಿಗಳನ್ನು ಹುಬ್ಬಳ್ಳಿ- ಧಾರವಾಡಕ್ಕೆ ಕಳಿಸುವುದನ್ನು ನಿಲ್ಲಿಸಬೇಕೆಂದರು.

ಪರಿಹಾರ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ ಅವರು, ಇಲಾಖೆಯ ಪ್ರಗತಿಯನ್ನು ಮಂಡಿಸಿ ಕಳೆದ ವರ್ಷದ ಬೆಳೆಹಾನಿ ಪರಿಹಾರ ₹14.65 ಕೋಟಿ ಹಾಗೂ ಬೆಳೆವಿಮೆ ₹5.5 ಕೋಟಿಯನ್ನು ರೈತರಿಗೆ ಖಾತೆಗಳಿಗೆ ಜಮಾ ಆಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಪ್ರಗತಿಯನ್ನು ಹೆಸ್ಕಾಂ, ಶಿಶು ಅಭಿವೃದ್ಧಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮಂಡಿಸಿದರು.

ಹಳಿಯಾಳ ತಾಪಂ ಆಡಳಿತಾಧಿಕಾರಿ ಬಿ.ಎಸ್. ಪಾಟೀಲ, ದಾಂಡೇಲಿ ತಾಲೂಕು ಆಡಳಿತಾಧಿಕಾರಿ ಆಶಾ ಎಂ. ಹಾಗೂ ತಾಪಂ ಇಒ ಪರಶುರಾಮ ಘಸ್ತೆ, ತಹಸೀಲ್ದಾರ್ ಆರ್.ಎಚ್. ಭಾಗವಾನ ಹಾಗೂ ಎಲ್ಲ ಅನುಷ್ಠಾನ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ