ಮಧ್ಯವರ್ತಿಗಳಿಂದ ಮೋಸ ಹೋಗಬೇಡಿ: ಆರ್.ನಾಗಸೇನ

KannadaprabhaNewsNetwork | Updated : Feb 05 2025, 12:35 AM IST

ಸಾರಾಂಶ

ಹೊಸದಾಗಿ ತೆರೆಯುವ ಮದ್ಯ ಮಳಿಗೆಗಳು ಹಾಗೂ ಅಬಕಾರಿ ಇಲಾಖೆಯಲ್ಲಿ ಕೆಲಸ ಆಗಬೇಕಿರುವುದನ್ನು ಮುಂದಿಟ್ಟುಕೊಂಡು ಕೆಲವು ಮಧ್ಯವರ್ತಿಗಳು ಹಣ ಪಡೆದು ಕೆಲಸ ಮಾಡಿಸುವುದಾಗಿ ಹೇಳಿ ವಂಚಿಸುತ್ತಿದ್ದಾರೆ. ದಯಮಾಡಿ ಇದಕ್ಕೆ ಕಿವಿಗೊಡಬೇಡಿ. ಇಲಾಖೆಯಲ್ಲಿ ಕಾನೂನಾತ್ಮಕವಾಗಿಯೇ ಕೆಲಸ ನಡೆಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಬಕಾರಿ ಪ‍ರವಾನಗಿ ಕೊಡಿಸುವುದಾಗಿ ಹೇಳಿ ಮಧ್ಯವರ್ತಿಗಳು ಹಲವರನ್ನು ವಂಚಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಮಧ್ಯವರ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್‌.ನಾಗಸೇನ ಮನವಿ ಮಾಡಿದರು.

ನಗರದ ಸ್ಫೋರ್ಟ್ಸ್‌ ಕ್ಲಬ್‌ ಸಭಾಂಗಣದಲ್ಲಿ ಜಿಲ್ಲಾ ಮದ್ಯಮಾರಾಟಗಾರರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಅಬಕಾರಿ ಜಾಗೃತಿ ಸಭಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಹೊಸದಾಗಿ ತೆರೆಯುವ ಮದ್ಯ ಮಳಿಗೆಗಳು ಹಾಗೂ ಅಬಕಾರಿ ಇಲಾಖೆಯಲ್ಲಿ ಕೆಲಸ ಆಗಬೇಕಿರುವುದನ್ನು ಮುಂದಿಟ್ಟುಕೊಂಡು ಕೆಲವು ಮಧ್ಯವರ್ತಿಗಳು ಹಣ ಪಡೆದು ಕೆಲಸ ಮಾಡಿಸುವುದಾಗಿ ಹೇಳಿ ವಂಚಿಸುತ್ತಿದ್ದಾರೆ. ದಯಮಾಡಿ ಇದಕ್ಕೆ ಕಿವಿಗೊಡಬೇಡಿ. ಇಲಾಖೆಯಲ್ಲಿ ಕಾನೂನಾತ್ಮಕವಾಗಿಯೇ ಕೆಲಸ ನಡೆಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಸಭೆಯಲ್ಲಿ ಮಧ್ಯವರ್ತಿಗಳ ಮಾರಾಟಗಾರರು ಅಂಗಡಿಗಳನ್ನು ಯಾವ ಸಮಯದಲ್ಲಿ ಮುಚ್ಚುವುದು ಮತ್ತು ತರೆಯುವುದರ ಬಗ್ಗೆ ಅರಿವಿರಬೇಕು. ಅದನ್ನು ತಪ್ಪದೇ ಪಾಲಿಸಬೇಕು. ವಿನಾಕಾರಣ ಪೊಲೀಸರು ಬಂದು ತೊಂದರೆ ಕೊಟ್ಟರೆ ನನ್ನ ಗಮನಕ್ಕೆ ತಂದರೆ ಅದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಥವಾ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ ಎಂದರು.

ಕಾನೂನಾತ್ಮಕವಾಗಿ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ. ವೈನ್ಸ್‌ ಸ್ಟೋರ್‌ಗಳಲ್ಲಿ ಪ್ಲಾಸ್ಟಿಕ್‌ ಗ್ಲಾಸ್‌ ಸೇರಿದಂತೆ ಇತರೆ ಪ್ಲಾಸ್ಟಿಕ್‌ ಪದಾರ್ಥಗಳನ್ನು ಬಳಸದಂತೆ ತಿಳಿಸುತ್ತೇವೆ, ಪ್ಲಾಸ್ಟಿಕ್‌ ಬದಲಿಗೆ ಬೇರೆ ವಸ್ತುಗಳ ಮೂಲಕ ಬಳಸಿಕೊಳ್ಳುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಒಟ್ಟಿನಲ್ಲಿ ಪರಿಸರ ಸಂರಕ್ಷಣೆಗೂ ಒತ್ತು ನೀಡಬೇಕು ಎಂದರು.

ಮದ್ಯಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ಮಹೇಶ್‌ ಮಾತನಾಡಿ, ಸಂಘದ ಸಮಸ್ಯೆಗಳು ಏನಾದರೂ ಇದ್ದರೆ ಎಲ್ಲರೂ ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರೋಣ, ವಿನಾಕಾರಣ ತೊಂದರೆ ಕೊಡುವುದನ್ನು ತಪ್ಪಿಸಲು ಕಾನೂನಾತ್ಕವಾಗಿಯೇ ಹೋಗೋಣ ಎಂದರು.

ಸಭೆಯಲ್ಲಿದ್ದ ಮದ್ಯಮಾರಾಟಗಾರರು ಹಲವು ಸಮಸ್ಯೆಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಕಾರ್ಯಕ್ರಮದಲ್ಲಿ ಅಬಕಾರಿ ಉಪ ಅಧೀಕ್ಷಕ ರಾಧಾಮಣಿ, ಸಂಘದ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌, ಮರೀಗೌಡ, ದಿನೇಶ್‌, ಗೋವಿಂದ್‌ ರಾಜು ಭಾಗವಹಿಸಿದ್ದರು.

Share this article