ಕನ್ನಡಪ್ರಭ ವಾರ್ತೆ ಮಳವಳ್ಳಿ
ಬೆಂಗಳೂರು ಜನರಿಗೆ ಕುಡಿಯುವ ನೀರಿನ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಹೆಮ್ಮೆಯ ವಿಚಾರ. ಆದರೆ, ಇದರಲ್ಲಿ ರಾಜಕೀಯ ಬೆರೆಸೋದು ಬೇಡ ಎಂದು ಮಾಜಿ ಸಚಿವ ಭೈರತಿ ಬಸವರಾಜು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ 110 ಹಳ್ಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಈ ಯೋಜನೆಯಿಂದ ಸಮಸ್ಯೆ ನಿವಾರಣೆಯಾಗಿದೆ ಎಂದರು.
ಈ ಯೋಜನೆಗಾಗಿ ನಾನು ಕೂಡ ಈ ಹಿಂದೆ ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ್ದೆ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿಯೂ ಸ್ಥಳ ಪರಿಶೀಲನೆ ನಡೆಸಿದ್ವಿ. ಕಾಮಗಾರಿ ಬೇಗ ಮುಗಿಸಲು ಅಧಿಕಾರಿಗೆ ಸೂಚನೆ ಕೊಡಲಾಗಿತ್ತು. ಆದರೆ, ಕೋವಿಡ್ನಿಂದ 1.5 ವರ್ಷ ಕಾಮಗಾರಿ ಮಾಡಲು ಆಗಲಿಲ್ಲ ಎಂದರು.ಆ ಕೆಲಸ ಈಗ ಪೂರ್ಣಗೊಂಡಿರೋದು ಸಂತಸ ತಂದಿದೆ. ಆದರೆ, ಇದರಲ್ಲಿ ರಾಜಕೀಯ ಬೆರೆಸೋದು ಬೇಡ. ಬೆಂಗಳೂರಿನ ಒಳೆತಿಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಜನರ ನೀರಿನ ಬವಣೆ ತೀರಸಲು ಶಾಸಕರು, ಸರ್ಕಾರ ಬದ್ಧವಾಗಿದ್ದೇವೆ ಎಂದರು.
ನಮಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ 110 ಹಳ್ಳಿಗಳ ವ್ಯಾಪ್ತಿ ಶಾಸಕರು ಬಂದಿದ್ದಾರೆ. ಐದನೇ ಹಂತಕ್ಕೆ ಈ ಯೋಜನೆ ನಿಲ್ಲದಿರಲಿ. 6ನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.ಬೆಂಗಳೂರಲ್ಲಿ ಮಳೆ ಯಥೇಚ್ಛವಾಗಿ ಸುರಿದಿದೆ. ಬಹಳಷ್ಟು ಕಡೆ ಜನರಿಗೆ ತೊಂದರೆಯಾಗಿದೆ. ನಾವು ಆ ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದ್ದೇವೆ. ಮಳೆಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಹಂತ ಹಂತವಾಗಿ ಬೆಂಗಳೂರು ಅಭಿವೃದ್ಧಿಯಾಗುತ್ತದೆ. ಡಿಸಿಎಂ ಡಿಕೆಶಿ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ಬೆಂಗಳೂರು ಜನ ನೆಮ್ಮದಿಯಾಗಿ ಇರುವ ವಾತಾವರಣ ನಿರ್ಮಾಣ ಮಾಡುತ್ತೇವೆ. ಸರ್ಕಾರ ಕೂಡ ಬೇಗ ಹಣ ಬಿಡುಗಡೆ ಮಾಡಬೇಕಿತ್ತು. ಕೆಲವು ಒತ್ತುವರಿ ತೆರವು ಮಾಡಿದರೆ ಸಮಸ್ಯೆ ಬಗೆಹರಿಸಬಹುದು ಎಂದರು.