ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬರ ನಿರ್ವಹಣಾ ಸಮಿತಿ ರಚನೆಯಂತೆ ಅಧಿಕಾರಿಗಳು ಯಾವುದೇ ಕಾರಣ ಹೇಳದೆ ಪ್ರಾಮಾಣಿಕವಾಗಿ ಕೆಲಸ ಮಾಡಿ ರೈತರು ಹಾಗೂ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸೂಚಿಸಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ಬರ ನಿರ್ವಹಣಾ ಸಮಿತಿ (ಟಾಸ್ಕ್ ಪೋರ್ಸ್) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಗಾರು ಹಂಗಾಮಿನ ಬರ ಪೀಡಿತ ತಾಲೂಕು ಎಂದು ಶ್ರೀರಂಗಪಟ್ಟಣ ಘೊಷಣೆ ಹಿನ್ನೆಲೆಯಲ್ಲಿ ಜಿಲ್ಲಾ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಸಮಿತಿಯ ಅಧ್ಯಕ್ಷರಾಗಿ ಶಾಸಕರಿದ್ದು, ತಹಸೀಲ್ದಾರ್ ಹಾಗೂ ತಾಪಂ ಇಒ ಸದಸ್ಯ ಕಾರ್ಯದರ್ಶಿಗಳಾಗಿ ಸಮಿತಿಯಲ್ಲಿದ್ದಾರೆ ಎಂದರು.
ಪಿಆರ್ಇಡಿ ಎಂಜಿನಿಯರ್, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೇ ಇಲಾಖೆಗಳಿಂದ ಒಬ್ಬೊಬ್ಬರು, ಕಂದಾಯ ಇಲಾಖೆಯಿಂದ ಆಯಾ ಹೊಬಳಿ ಮಟ್ಟದ ಉಪ ತಹಸೀಲ್ದಾರ್ ಸದಸ್ಯರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗ, ಗ್ರಾಮ ಸಹಾಯಕ ಇವರ ಜೊತೆಗೆ ಆಯಾ ಗ್ರಾಪಂ ಪಿಡಿಒಗಳು ಗ್ರಾಮಗಳಲ್ಲಿನ ಜಮೀನಿಗೆ ನೀರಿಲ್ಲದೆ ಬರಡಾಗಿರುವ ಹಾಗೂ ಜನ-ಜಾನುವಾರುಗಳಿಗೆ ಮೇವು, ಕುಡಿವ ನೀರು ಕೊರತೆ, ಪಶುಗಳಿಗೆ ಆಹಾರದ ಕೊರತೆ, ಬರ ಪೀಡಿತವಾದ ಸ್ಥಳ ಗುರುತಿಸಿ ಪರಿಶೀಲನೆ ನಡೆಸಿ ಮಾಹಿತಿಗಳ ಸದಸ್ಯರಿಗೆ ತಿಳಿಸಬೇಕು ಎಂದರು.
ಪಿಡಿಒ, ಕಾರ್ಯದರ್ಶಿಗಳು ಗ್ರಾಮದಲ್ಲಿ ಜನರು ಕುಡಿವ ನೀರಿನ ಕೊಳವೆಬಾವಿ ಕೆಟ್ಟಿದ್ದರೆ, ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಎಚ್ಚರ ವಹಿಸಿ ತಕ್ಷಣ ಅವುಗಳ ದುರಸ್ತಿ ಪಡಿಸಬೇಕು. ಜನರಿಗೆ ಮೂಲ ಸೌಕರ್ಯಗಳ ಕಡೆ ಗಮನ ಹರಿಸಬೇಕು. ವಿದ್ಯುತ್ ಇಲಾಖೆ ಅಧಿಕಾರಿಗಳು ಸಹ ಅದಕ್ಕೆ ಸ್ಪಂದನೆ ನೀಡಿ ನೀರಿನ ಸಮಸ್ಯೆ ಎದುರಾಗದಂತೆ ಕೆಲಸ ನಿರ್ವಹಿಸುವಂತೆ ತಾಕೀತು ಮಾಡಿದರು.ಒಬ್ಬೊಬ್ಬರೆ ಬರ ಪೀಡಿತ ಪ್ರದೇಶಗಳಿಗೆ ತೆರಳಿ ತಮಗಿಷ್ಟ ಬಂದಂತೆ ಮಾಹಿತಿ ನೀಡದೆ, ಸಂಬಂಧಿಸಿ ಇಲಾಖೆ ಸದಸ್ಯರು ಖುದ್ದು ಹಾಜರಿದ್ದು, ತಪ್ಪು ಮಾಹಿತಿಗಳ ಕೊಡದಂತೆ ಎಚ್ಚರ ವಹಿಸಬೇಕು ಎಂದರು.
ಸಮಿತಿ ಸದಸ್ಯರು ಬರ ಪೀಡಿತ ಪ್ರದೇಶಗಳಿಗೆ ತೆರಳದೆ ಯಾವುದೇ ಕಾರಣ ಹೇಳಿ ತಪ್ಪಿಸಿಕೊಳ್ಳಬೇಡಿ ನೀವು ಕೊಟ್ಟ ಮಾಹಿತಿ, ವರದಿಯಿಂದ ರೈತರು ಸೇರಿದಂತೆ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ ಎಂದರು.ಸಭೆಯಲ್ಲಿ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪಿಆರ್ಇಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣ, ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಗಾಯಿತ್ರಿ, ಪಶು ಸಂಗೋಪನಾ ಇಲಾಖೆ ಡಾ.ಸುರೇಶ್ ಜಿ.ಜೆ, ಪುರಸಭೆ ಮುಖ್ಯಾದಿಕಾರಿ ರಾಜಣ್ಣ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.