ಸಾಧನೆಗೆ ಸಮಸ್ಯೆಗಳು ನೆಪವಾಗದಿರಲಿ: ಡೀಸಿ

KannadaprabhaNewsNetwork | Updated : Jun 08 2025, 01:23 AM IST
ನಮ್ಮ ಸುತ್ತಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ಯಾಕೆಂದರೆ ನಮಗೆ ಸಾಧನೆ ಮಾಡಬೇಕು ಎಂಬ ಛಲವಿದ್ದಾಗ ಸಮಸ್ಯೆಗಳು ನಮಗೆ ಕಾಣಿಸಬಾರದು. ಸಾಧನೆ ಮಾಡುವುದು ಮಾತ್ರ ನಮ್ಮ ಗುರಿಯಾಗಬೇಕು ಮತ್ತೊಬ್ಬರಿಗೆ ಸಂದೇಶವನ್ನು ನೀಡುವಂತಹದ್ದು ನಮ್ಮ ಸಾಧನೆಯಾಗಿರಬೇಕು

ಕನ್ನಡಪ್ರಭ ವಾರ್ತೆ ಕೋಲಾರಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮೈಸೂರು ಸಂಸ್ಥಾನದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ತಮ್ಮದೇ ಆದ ಶೈಲಿಯಲ್ಲಿ ಕಥೆಗಳನ್ನು ರಚನೆ ಮಾಡುತ್ತಿದ್ದರು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ ಇವರನ್ನು ಕನ್ನಡದ ಆಸ್ತಿ ಎಂದು ಕರೆಯುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ಮಾಲೂರು ತಾಲೂಕಿನ ಮಾಸ್ತಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೪ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.ಸೌಲಭ್ಯ ಇಲ್ಲದಿದ್ದರೂ ಸಾಧನೆ

ನಾವು ಹಳ್ಳಿಯ ಜನರು ನಮಗೆ ಯಾವುದೇ ರೀತಿಯ ಸೌಕರ್ಯಗಳು ಇಲ್ಲ ಅಂತಹ ಕಾರಣಗಳನ್ನು ಹೇಳುತ್ತೇವೆ, ಆದರೆ ಸುಮಾರು ೧೨೫ ವರ್ಷಗಳ ಹಿಂದೆ ಇಂತಹ ಕೆಲಸಗಳನ್ನು ಮಾಡಲು ಯಾವ ರೀತಿಯ ಸೌಕರ್ಯಗಳು ಇತ್ತು ಎಂಬುದನ್ನು ನಾವು ಅರಿತುಕೊಳ್ಳಬೇಕು. ಅಂದಿನ ಕಾಲದಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೇವಲ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಮಾಡದೆ ಎಲ್ಲಾ ಕ್ಷೇತ್ರಕ್ಕೂ ಒತ್ತು ಕೊಟ್ಟಿದ್ದಾರೆ ಮತ್ತು ಅಭಿವೃದ್ಧಿ ಮಾಡಿ ಹೋಗಿದ್ದಾರೆ. ಆದ್ದರಿಂದಲೇ ನಮ್ಮ ಅವಿಭಾಜ್ಯ ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ, ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರವರ್ಥಮಾನಕ್ಕೆ ಬರುತ್ತಾರೆ ಎಂದು ತಿಳಿಸಿದರು.ನಮ್ಮ ಸುತ್ತಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ಯಾಕೆಂದರೆ ನಮಗೆ ಸಾಧನೆ ಮಾಡಬೇಕು ಎಂಬ ಛಲವಿದ್ದಾಗ ಸಮಸ್ಯೆಗಳು ನಮಗೆ ಕಾಣಿಸಬಾರದು. ಸಾಧನೆ ಮಾಡುವುದು ಮಾತ್ರ ನಮ್ಮ ಗುರಿಯಾಗಬೇಕು ಮತ್ತೊಬ್ಬರಿಗೆ ಸಂದೇಶವನ್ನು ನೀಡುವಂತಹದ್ದು ನಮ್ಮ ಸಾಧನೆಯಾಗಿರಬೇಕು ಎಂದರು.ಅನ್ಯ ಭಾಷೆಯ ವ್ಯಾಮೋಹ ಬೇಡ

ಮಾಸ್ತಿ ಗ್ರಾಮವು ಪಕ್ಕದಲ್ಲಿಯೇ ತಮಿಳುನಾಡಿನ ಗಡಿಗೆ ಹೊಂದುಕೊಂಡಿದ್ದರೂ ಕನ್ನಡ ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಗಡಿ ಪ್ರದೇಶದಲ್ಲಿ ನಿರಂತರವಾಗಿ ಕನ್ನಡ ಭಾಷಾ ಬಳಕೆ ಮಾಡುವುದರಿಂದ ಇನ್ನಷ್ಟು ಕನ್ನಡ ಸಾಹಿತ್ಯದ ಕೆಲಸ ಮಾಡಬಹುದು, ಬೇರೆ ಯಾವುದೋ ಭಾಷೆಯ ವ್ಯಾಮೋಹಕ್ಕೆ ನಮ್ಮ ಭಾಷೆ ಬಲಿಪಶು ಮಾಡುವುದು ಸರಿಯಲ್ಲ. ದಯವಿಟ್ಟು ಕನ್ನಡವನ್ನು ಓದುವ ಅಭ್ಯಾಸ ಮಾಡಿಕೊಂಡರೆ ಹೃದಯ ಶ್ರೀಮಂತರಾಗುತ್ತೀರಾ ಎಂದರು.ಮಾಸ್ತಿ ಹೆಸರಿನಲ್ಲಿ ವಸತಿ ಶಾಲೆ

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನಮ್ಮ ತಾಲೂಕಿನವರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮದಿನಾಚರಣೆ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷವಾಗಿದೆ. ಅವರು ವಾಸಿಸುತ್ತಿದಂತಹ ಮನೆಯಿದ್ದು, ಅದನ್ನು ಗ್ರಂಥಾಲಯ ಮಾಡಲಾಗಿದೆ. ನೂತನವಾಗಿ ೨ ಕೋಟಿ ರೂ. ವೆಚ್ಚದಲ್ಲಿ ಮಾಸ್ತಿ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಿದ್ದೇವೆ ಮತ್ತು ಶೀಘ್ರವೇ ಮಾಸ್ತಿ ಅವರ ಹೆಸರಿನಲ್ಲಿ ವಸತಿ ಶಾಲೆ ಉದ್ಘಾಟನೆ ಮಾಡಲಿದ್ದೇವೆ ಎಂದು ತಿಳಿಸಿದರು.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಭಾವಚಿತ್ರ ಇರುವ ಸುಮಾರು ೧೫ಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳ ಮೆರವಣಿಗೆ ಕಾರ್ಯಕ್ಕೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. ಮಾಸ್ತಿ ಗ್ರಾಪಂ ಆವರಣದಿಂದ ಪ್ರಾರಂಭಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ಅವರು ವಾಸಿಸುತ್ತಿದ್ದ, ಮನೆಯ ಆವರಣದಲ್ಲಿ ವೆಂಕಟೇಶ್ ಅಯ್ಯಂಗಾರ್ ಪುತ್ಥಳಿ ಉದ್ಘಾಟಿಸಿದರು.

ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್, ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ, ಮಾಲೂರು ತಹಸೀಲ್ದಾರ್ ಎಂ.ವಿ.ರೂಪ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಮಾಲೂರು ತಾಲ್ಲೂಕು ಕಾರ್ಯನಿರ್ವಹಕಾಧಿಕಾರಿ ಕೃಷ್ಣಪ್ಪ, ಮುಖಂಡರಾದ ಶಶಿಕಲಾ, ಹನುಮಂತಪ್ಪ, ಅಶ್ವತ್ ರೆಡ್ಡಿ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರವಿಕುಮಾರ್, ಅಕ್ರಂ ಪಾಷಾ, ಸರ್ದಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಇದ್ದರು.