ಚಿಕ್ಕಬಳ್ಳಾಪುರದ ಡೀಸಿ ಕಚೇರಿಯಲ್ಲಿ ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ ಕುರಿತ ಕಾರ್ಯಾಗಾರ । ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ
ದೇವರ ದೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು, ಮಾನವರಾದ ನಾವು ಯಾವುದೇ ರೀತಿಯಲ್ಲಿ ಲಿಂಗ ತಾರತಮ್ಯ ಮಾಡುವುದು ಬೇಡ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ “ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ” ಕುರಿತ ಕಾರ್ಯಾಗಾರ ಹಾಗೂ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ” ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ಪಿಡುಗು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಆಧುನಿಕ ಜಗತ್ತಿನಲ್ಲಿಯೂ ಅಲ್ಲಲ್ಲಿ ಮರುಕಳಿಸುತ್ತಿರುತ್ತದೆ, ಹೆಣ್ಣು ಮಕ್ಕಳ ಜನನದ ಮೇಲೆ ಕೀಳರಿಮೆ ಇಂದಿಗೂ ಪ್ರಸ್ತುತವಾಗಿರುವುದು ಆತಂಕಕಾರಿ ವಿಷಯ. ಜಿಲ್ಲೆಯಲ್ಲಿ 2001 ರ ಜನಗಣತಿಯ ಪ್ರಕಾರ 1000 ಪುರುಷರಿಗೆ, 952 ಹೆಣ್ಣುಮಕ್ಕಳು, 2011 ರ ಜನಗಣತಿಯ ಪ್ರಕಾರ 953 ಹೆಣ್ಣುಮಕ್ಕಳ ಲಿಂಗಾನುಪಾತಗವಿರುವುದು ಇದನ್ನು ಬಿಂಬಿಸುತ್ತದೆ. ಲಿಂಗ ಪತ್ತೆ ಹಾಗೂ ಹೆಣ್ಣು ಮಗುವಿನ ಗರ್ಭಪಾತ ಮಾಡುವುದು ಕಾನೂನು ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧ, ಉಲ್ಲಂಘಿತರಿಗೆ 3 ವರ್ಷ ಹಾಗೂ ಅದಕ್ಕೂ ಮೀರಿದ ಜೈಲು ಶಿಕ್ಷೆ ಇದೆ. ಹೆಣ್ಣು ಮಕ್ಕಳನ್ನು ಸಾಮಾಜಿಕ ಮತ್ತು ಆರ್ಥಿಕ ಹೊರೆ ಎಂದು ಗ್ರಹಿಸುವುದು ತಪ್ಪು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಹೆಣ್ಣು ಭ್ರೂಣಲಿಂಗ ಹತ್ಯೆಯ ತಡೆಗೆ ಕಟ್ಟುನಿಟ್ಟಿನ ಕ್ರಮಗಳು ತೆಗೆದುಕೊಳ್ಳುತ್ತಿದೆ. ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರವಿಧಾನಗಳ ಅಧಿನಿಯಮ 1994ರ ಪ್ರಕಾರ ‘ಲಿಂಗ ಆಯ್ಕೆಯ ನಿಷೇಧ’ ಯಾವುದೇ ಕಾರಣಕ್ಕೂ ಭ್ರೂಣದಲ್ಲೇ ಲಿಂಗ ಪತ್ತೆ ಮಾಡಬಾರದು, ಇದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಕರಿಸಿದವರ ವಿರುದ್ಧ ಕಾನೂನು ರಿತ್ಯಾ ಕಠಿಣ ಶಿಕ್ಷೆಯಾಗುತ್ತದೆ ಎಂದರು.ಕುಷ್ಠರೋಗ ಸಾಂಕ್ರಾಮಿಕ ರೋಗವಾಗಿದ್ದು, ಇದು ಗುಣಮುಖವಾಗುವಂತಹ ಕಾಯಿಲೆ.2025 ರ ವೇಳೆಗೆ ನಮ್ಮ ದೇಶದಲ್ಲಿ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಿಕ್ಕೆ ಪಣತೊಡಲಾಗಿದೆ. ಈ ರೋಗಕ್ಕೆ ಒಳಗಾಗಿರುವವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಇದೆ. ಜಿಲ್ಲೆಯಲ್ಲಿ 49 ಕುಷ್ಠರೋಗ ಪ್ರಕರಣಗಳಿದ್ದು, ಅವರೆಲ್ಲರನ್ನೂ ಗುಣಮುಖ ಮಾಡಬೇಕು, 2023 ರ ಡಿಸೆಂಬರ್ 27 ರಿಂದ 2024ರ ಜನವರಿ 11 ರವರೆಗೆ ಮನೆ ಮನೆಗೆ ಭೇಟಿ ಮಾಡಿ ಕುಷ್ಠರೋಗ ಪೀಡಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಬೇಕು, ಹಾಗೂ ಲಿಂಗ ತಾರತಮ್ಯ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಮ್ಮ ಹಂತದಲ್ಲಿ ಅರಿವು ಮೂಡಿಸಲು ಆಶಾ ಕಾರ್ಯಕರ್ತರು ಮುಂದಾಗಬೇಕು. ಅದಕ್ಕಾಗಿ ಇಂದಿನ ಕಾರ್ಯಾಗಾರದಲ್ಲಿ ತಾವು ಮೊದಲು ಅರಿತು ನಂತರ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಕುಷ್ಠರೋಗ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳು ಮತ್ತು ಭಿತ್ತಿಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು.
---
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ “ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ” ಕುರಿತ ಕಾರ್ಯಾಗಾರ ಹಾಗೂ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ” ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಉಧ್ಘಾಟಿಸಿದರು