ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕರಣಗಳ ತ್ವರಿತಗತಿ ವಿಲೇವಾರಿಗೆ ಹೆಸರುವಾಸಿಯಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಕೀಲರೊಬ್ಬರು ತಮ್ಮ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆಗೆ ನಿಗದಿಪಡಿಸುವಂತೆ ಮನವಿ ಮಾಡಿದ ವೇಳೆ ವ್ಯಕ್ತಪಡಿಸಿದ ಅಸಮಾಧಾನವಿದು.
ಮಂಗಳವಾರ ನ್ಯಾಯಪೀಠದ ಮುಂದೆ ಹಾಜರಾದ ವಕೀಲರೊಬ್ಬರು, ತಮ್ಮ ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಕೋರಿ ಮೆಮೊ ಸಲ್ಲಿಸಿದರು. ಮುಂದುವರಿದು, ನಾನು ಹಲವು ಬಾರಿ ಮೆಮೊ ಸಲ್ಲಿಸಿದ್ದೇನೆ. ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ಈ ಬಾರಿ ಪರಿಗಣಿಸಬೇಕು ಎಂದು ಮನವಿ ಮಾಡಿ ಮೆಮೊ ನೀಡಲು ಮುಂದಾದರು.ಅದಾಗಲೇ ಹಲವಾರು ಮೆಮೊಗಳನ್ನು ಸ್ವೀಕರಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಕೀಲರ ಮನವಿಗೆ ಪ್ರತಿಕ್ರಿಯಿಸಿ, ‘ಕಳೆದ 29 ದಿನಗಳಲ್ಲಿ 7,500 ಮೆಮೊ ಸಲ್ಲಿಕೆಯಾಗಿವೆ. ಅವುಗಳನ್ನು ಪರಿಗಣಿಸಿ ನಾನು 5,500 ಮೆಮೋಗಳನ್ನು ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಿದ್ದೇನೆ. ಇದನ್ನೂ ಮೀರಿ ಏನನ್ನು ಪಟ್ಟಿ ಮಾಡಲಾಗುತ್ತದೆ? ನಾನೂ ಮನುಷ್ಯ. ಎಷ್ಟು ಪ್ರಕರಣಗಳನ್ನು ಪಟ್ಟಿ ಮಾಡಬೇಕು. ಎಷ್ಟನ್ನು ವಿಚಾರಣೆಗ ಪಟ್ಟಿ ಮಾಡಬೇಕು ಹೇಳಿ? ಹಸುವಿನ ಕೆಚ್ಚಲಿನಲ್ಲಿ ರಕ್ತ ಬರುವವರೆಗೆ ಹಾಲು ಕರೆಯಲಾಗದು’ ಎಂದು ಬೇಸರ ವ್ಯಕ್ತಪಡಿಸಿದರು.