ಸಂಡೂರು: ತಾಲೂಕಿನ ದೊಡ್ಡ ಅಂತಾಪುರ ಗ್ರಾಮದ ಚಂದ್ರಶೇಖರ ಅವರ ಹೊಲದ ಬದುವಿನ ಉತ್ತರಾಭಿಮುಖವಾಗಿ ಇರುವ ಹುಟ್ಟು ಬಂಡೆಯ ಮೇಲೆ ಕೆತ್ತಲಾಗಿರುವ ದಳವಾಯಿ-ಗೌಡರ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಪತ್ತೆ ಹಚ್ಚಿದೆ.
ದಾನ ಶಾಸನವು ವಿಜಯನಗರೋತ್ತರ ಕಾಲದ ಗ್ರಾಮೀಣ ಆಡಳಿತ, ಧಾರ್ಮಿಕ ವ್ಯವಸ್ಥೆ, ದಾನ ಸಂಸ್ಕೃತಿಯ ಕುರಿತು ಮಹತ್ವದ ಮಾಹಿತಿ ನೀಡುವ ಅಪರೂಪದ ಶಾಸನವಾಗಿದೆ. ಇದು ಕೇವಲ ಒಂದು ಶಾಸನದ ಪತ್ತೆಯಲ್ಲ. ಒಂದು ಗ್ರಾಮದ ಮರೆತುಹೋದ ಇತಿಹಾಸವನ್ನು ಮರುಜೀವಗೊಳಿಸಿದ ಮಹತ್ವದ ಸಂಶೋಧನೆಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.
ಶಾಸನದ ಶಿಲ್ಪಕಲೆ ಹಾಗೂ ಭಕ್ತಿ ಕಲೆಯ ಸಂಗಮ:ಈ ಶಾಸನವು ಸುಮಾರು ೪ ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಾಗಿರುವ ಗ್ರಾನೈಟ್ ಬಂಡೆಯ ಮೇಲೆ ಕೆತ್ತಲಾಗಿದೆ. ಶಾಸನದ ಎಡ ಭಾಗದಲ್ಲಿ ಚಂದ್ರ, ಬಲಬದಿಗೆ ಸೂರ್ಯನ ಚಿಹ್ನೆಗಳನ್ನು ಕೆತ್ತಲಾಗಿದೆ. ಮಧ್ಯದಲ್ಲಿ ಶಿವಲಿಂಗದ ಎದುರು ಭಕ್ತಿಭಾವದಿಂದ ಕುಳಿತಿರುವ ನಂದಿಯ ಸುಂದರ ಶಿಲ್ಪವನ್ನು ಕೆತ್ತಲಾಗಿದೆ. ಅದರ ಕೆಳಭಾಗದಲ್ಲಿ ದೊಡ್ಡ ಗಾತ್ರದ ಶಿವಲಿಂಗವನ್ನು ಕೆತ್ತಿರುವುದು ಈ ಶಾಸನದ ಧಾರ್ಮಿಕ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಶಾಸನವನ್ನು ಬರೆಸಿದವರು ಶೈವ ಧರ್ಮದವರೆಂದು ತಿಳಿದು ಬರುತ್ತದೆ.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್. ತಿಪ್ಪೇಸ್ವಾಮಿ, ಈ ಶಾಸನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಅದರ ಕೊನೆಯಲ್ಲಿ ಕಂಡುಬರುವ ಶಾಪಾಶಯ. ದಾನವು ನಿರಂತರವಾಗಿ ಮುಂದುವರೆಯಬೇಕು. ಯಾರಾದರೂ ಈ ದಾನವನ್ನು ನಿಲ್ಲಿಸಿದರೆ ಅಥವಾ ಶಾಸನವನ್ನು ನಾಶಪಡಿಸಿದರೆ, ಅವರು ವಾರಣಾಸಿಯಲ್ಲಿ ತಮ್ಮ ತಾಯಿಯನ್ನು ಕೊಂದ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಕಠಿಣ ಎಚ್ಚರಿಕೆ ದಾಖಲಿಸಲಾಗಿದೆ ಎಂದರು.