ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ವೆಂಕಣ್ಣಯ್ಯ ವಿದ್ಯಾಸಂಸ್ಥೆಯ ಮಾರುತಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು. ಸರ್ಕಾರ ಕೆಲವು ಸೌಲಭ್ಯ ನೀಡಿದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಇನ್ನೂ ಹೆಚ್ಚಿನ ಸೌಲಭ್ಯ ಅಗತ್ಯವಿದೆ. ದಾನಿಗಳು ಇಂತಹ ಸೌಲಭ್ಯ ನೀಡಲು ಮುಂದೆಬಂದು ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕು ಎಂದು ಬೇಡರೆಡ್ಡಿಹಳ್ಳಿಯ ಟಾಟಾ ಸೋಲಾರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ತಿಳಿಸಿದರು.ಗುರುವಾರ ತಾಲೂಕಿನ ತಳಕು ಗ್ರಾಮದ ವೆಂಕಣ್ಣಯ್ಯ ವಿದ್ಯಾ ಸಂಸ್ಥೆಯ ಮಾರುತಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ನೀಡಿ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಪ್ರತಿನಿತ್ಯ ಶುದ್ಧ ಕುಡಿಯುವ ನೀರು ಸೇವಿಸಿದರೆ ಅವರ ಆರೋಗ್ಯ ಸುಧಾರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಂಪನಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಬಿ.ಸುರೇಶ್ ಮಾತನಾಡಿ, ಶಾಲೆಗೆ ಟಾಟಾ ಸೋಲಾರ್ ಕಂಪನಿಯವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಮಕ್ಕಳು ಪ್ರತಿನಿತ್ಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಶಾಲೆಯ ಪರವಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ವೇಳೆ ಗ್ರಾಪಂ ಸದಸ್ಯ ಟಿ.ಕೃಷ್ಣಮೂರ್ತಿ, ಬಸವರೆಡ್ಡಿ, ಇಂಜಿನಿಯರ್ ಹನುಮೇಶ್, ಟಿ.ವೀರೇಶ್, ತಿಮ್ಮಾರೆಡ್ಡಿ, ಶಿಕ್ಷಕರಾದ ವೀಣಾಶ್ರೀ, ಅಶೋಕ್, ರವೀಂದ್ರ, ಭೀಮಾನಾಯ್ಕ, ಶಾಲಿನಿ, ನಾಗವೇಣಿ, ಚಂದ್ರಿಕಾ, ಬೋರಮ್ಮ, ರೇಖಾ, ಅಂಜು, ಪಿ.ಎಚ್.ಹೂಗಾರ್ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.