ಪ್ರವೀಣ್ ಘೋರ್ಪಡೆ
ಕನ್ನಡಪ್ರಭ ವಾರ್ತೆ ತಾಳಿಕೋಟೆತಾಲೂಕಿನ ಬೊಮ್ಮನಹಳ್ಳಿ, ಗುತ್ತಿಹಾಳ, ಬೋಳವಾಡ, ತಾಳಿಕೋಟೆ, ಹರನಾಳ, ಮಿಣಜಗಿ ಗ್ರಾಮಗಳ ಸೀಮೆಯಲ್ಲಿ ವರುಣದೇವ ಅವಾಂತರ ಸೃಷ್ಟಿ ಮಾಡಿದ್ದಾನೆ. ಡೋಣಿ ನದಿ ಪ್ರವಾಹದ ನೀರು ನುಗ್ಗಿದ್ದು ಬಿತ್ತನೆ ಮಾಡಿದ್ದ ಬೀಜಗೊಬ್ಬರ ಸೇರಿದಂತೆ ಕೆಲವೆಡೆ ಬೆಳೆದಿದ್ದ ಬೆಳೆಯೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಮೂಲಕ ಡೋಣಿ ನದಿ ರೈತರಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ.ಈಗಾಗಲೇ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಸೂರ್ಯಕಾಂತಿ ಅಲ್ಲದೇ ಕಬ್ಬು ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯುವ ನಿರಿಕ್ಷೆಯಲ್ಲಿದ್ದ ರೈತರಿಗೆ ಡೋಣಿ ನದಿಯೂ ರೈತರಿಗೆ ಕಣ್ಣೀರು ತರಿಸಿದೆ. ಡೋಣಿ ನದಿ ತೀರಕ್ಕೆ ಹೊಂದಿಕೊಂಡಿರುವ ಗುತ್ತಿಹಾಳ , ಬೋಳವಾಡ, ಬೊಮ್ಮನಹಳ್ಳಿ, ತಾಳಿಕೋಟೆ, ಹರನಾಳ ಗ್ರಾಮಗಳ ರೈತರು ನೂರಾರು ಎಕರೆಯಲ್ಲಿ ಶೇ.೯೦ ರಷ್ಟು ಬಿತ್ತನೆ ಮಾಡಿಕೊಂಡಿದ್ದರು. ಡೋಣಿ ನದಿಯ ಪ್ರವಾಹಕ್ಕೆ ಸಿಲುಕಿ ಎಲ್ಲವೂ ಹಾಳಾಗಿದೆ.
ಕೆಳಮಟ್ಟದ ಸೇತುವೆಗಳು ಜಲಾವೃತ:ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ಡೋಣಿ ನದಿ ಕಳೆದ 4 ದಿನಗಳಿಂದಲೂ ಉಕ್ಕಿ ಹರಿಯುತ್ತಿದ್ದು, ವಿಜಯಪೂರ ರಸ್ತೆಯ ಕೆಳಮಟ್ಟದ ಸೇತುವೆ ಹಾಗೂ ಹಡಗಿನಾಳ ಮಾರ್ಗದ ಮೂಕಿಹಾಳ ಹಳ್ಳದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ತಾಳಿಕೋಟೆಯಿಂದ ಬೇರೆ ಬೇರೆ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ತಾಳಿಕೋಟೆಯಿಂದ ರಾಜ್ಯ ಹೆದ್ದಾರಿಯ ಮೂಲಕ ವಿಜಯಪುರಕ್ಕೆ ತೆರಳುವ ಡೋಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಮೇಲ್ಮಟ್ಟದ ಸೇತುವೆ ೪ ವರ್ಷಗಳ ಹಿಂದೆಯೇ ಕುಸಿತ ಕಂಡಿದ್ದರಿಂದ ನೂತನ ಸೇತುವೆ ನಿರ್ಮಾಣಕ್ಕೆ ₹ ೩೦ ಕೋಟಿ ಟೆಂಡರ್ ಪ್ರಕ್ರಿಯೆ ಆಗಿದ್ದು, ಸೇತುವೆಯನ್ನು ನೆಲಸಮಗೊಳಿಸಲಾಗಿದೆ. ಹೀಗಾಗಿ, ಸಂಚಾರ ಮಾರ್ಗವನ್ನು ಪಕ್ಕದ ಕೆಳಮಟ್ಟದ ಸೇತುವೆಯ ಮೇಲೆ ನೀಡಲಾಗಿದೆ. ಆದರೆ, ಡೋಣಿ ನದಿಯೂ ತುಂಬಿ ಹರಿಯುತ್ತಿರುವುದರಿಂದ ಕೆಳಮಟ್ಟದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ, ಸಂಚಾರವೂ ಬಂದ್ ಆಗಿದೆ. ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹಡಗಿನಾಳ ಮುಖಾಂತರ ತೆರಳುವ ಕೆಳಮಟ್ಟದ ಸೇತುವೆಯ ಪಕ್ಕದಲ್ಲಿ ಮೇಲ್ಮಟ್ಟದ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಸಂಜೆಯ ವೇಳೆ ಮಳೆಯಾಗಿದ್ದರಿಂದ ಮೂಕಿಹಾಳ ಹಳ್ಳವೂ ತುಂಬಿ ಹರಿಯುತ್ತಿರುವುದರಿಂದ ಆ ರಸ್ತೆ ಸಂಚಾರವನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು:ಪ್ರವಾಹ ಸೃಷ್ಟಿಯಾಗಿ ಸೇತುವೆಗಳು ಮುಳಗಡೆಯಾಗಿ ರೈತರು, ಜನ ಸಾಮಾನ್ಯರು ಪರದಾಡುತ್ತಿದ್ದರೂ ತಾಲೂಕಾಡಳಿತದ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿಲ್ಲ. ಪ್ರವಾಹ ಉಂಟಾಗಿ ಮುಖ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡರೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೊರತು ಪಡಿಸಿ ತಾಲೂಕಾಡಳಿತದ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ. ಇದು ಪ್ರಯಾಣಿಕರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
-------ಕೋಟ್
ತಾಳಿಕೋಟೆ, ಗುತ್ತಿಹಾಳ, ಬೋಳವಾಡ, ಬೊಮ್ಮನಹಳ್ಳಿ ಹರನಾಳ ಭಾಗದಲ್ಲಿ ಡೋಣಿ ನದಿ ಅಪಯದ ಮಟ್ಟದಲ್ಲಿ ಹರಿಯುತ್ತಿದೆ. ನದಿ ದಡದಲ್ಲಿರುವ ಜಮೀನುಗಳಿಗೆ ಡೋಣಿ ನದಿಯ ನೀರು ನುಗ್ಗಿ ಬಿತ್ತನೆ ಮಾಡಿದ್ದ ಬೀಜ ಹಾಗೂ ಗೊಬ್ಬರ ಕೊಚ್ಚಿಕೊಂಡು ಹೋಗಿವೆ. ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದ ಬೀಜ,ಗ ಗೊಬ್ಬರವನ್ನು ಡೋಣಿ ನದಿ ಪ್ರವಾಹವೇ ನುಂಗಿದ್ದು, ರೈತರಿಗೆ ಸಂಕಷ್ಟ ತಂದಿದೆ. ಇಷ್ಟೆಲ್ಲ ಅವಾಂತರ ಸಂಭವಿಸಿದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ರೈತರ ಸಂಕಷ್ಟ ಕೇಳಿಲ್ಲ.ರಾಮು ಜಂಬಗಿ, ಗುತ್ತಿಹಾಳ ರೈತಬಾಕ್ಸ್
ಕೊಚ್ಚಿ ಹೋದ ಲಾರಿ, ಚಾಲಕ ಪಾರು: ಡೋಣಿ ನದಿಯ ತಾಳಿಕೋಟೆ ಬಳಿಯ ಕೆಳಮಟ್ಟದ ಸೇತುವೆಯಿಂದ ರಭಸಕ್ಕೆ ಅಶೋಕ್ ಲೇಲ್ಯಾಂಡ್ ಲಾರಿಯೊಂದು ಕೊಚ್ಚಿಕೊಂಡು ಹೋಗಿದೆ. ಗುರುವಾರ ತಡರಾತ್ರಿ 3 ಗಂಟೆ ಸುಮಾರಿಗೆ ತುಂಬಿ ಹರಿಯುತ್ತಿದ್ದ ನದಿಯನ್ನು ಲೆಕ್ಕಿಸದೇ ಚಾಲಕ ಲಾರಿಯನ್ನು ನದಿ ದಾಟಿಸಲು ಯತ್ನಿಸಿದ್ದು, ಈ ವೇಳೆ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಕೂಡಲೇ ಎಚ್ಚೆತ್ತ ಲಾರಿ ಚಾಲಕ ಲಾರಿಯಿಂದ ಜಿಗಿದು ಈಜಿಕೊಂಡು ದಡ ಸೇರಿದ್ದು, ಅಪಾಯದಿಂದ ಪಾರಾಗಿದ್ದಾನೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಲಾರಿ ಇನ್ನುವರೆಗೂ ಪತ್ತೆಯಾಗಿಲ್ಲ. ಈ ಲಾರಿ ಧಾರವಾಡದಿಂದ ಯಾದಗಿರಿ ಜಿಲ್ಲೆಗೆ ಎನ್ಟಿಪಿಸಿ ಸಾಮಗ್ರಿಗಳನ್ನು ತುಂಬಿಕೊಂಡು ತೆರಳುತ್ತಿತ್ತು ಎನ್ನಲಾಗಿದೆ.