ನರಗುಂದ: ಸಮಾಜದಲ್ಲಿ ನಾವು ಗಂಡು-ಹೆಣ್ಣು ಭೇದ ಮಾಡದೇ ಇಬ್ಬರು ಮಕ್ಕಳನ್ನು ಸಮನಾಗಿ ನೋಡಬೇಕೆಂದು ಬ್ರಹ್ಮಕುಮಾರಿ ಪ್ರಭಕ್ಕನವರ ಹೇಳಿದರು. ಅವರು ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ಮನೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಭೇದ ಭಾವ ಮಾಡದೆ ಸಮನಾದ ಸಂಸ್ಕಾರವನ್ನು ನೀಡಬೇಕು. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ದೇವರನ್ನು ನಂಬಬೇಕು, ದೇವರು ನಾವು ಮಾಡುವ ಒಳ್ಳೆ ಕೆಲಸದಲ್ಲಿ ಸದಾ ಇರುತ್ತಾನೆ ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ರಾಜು ಕಲಾಲ ಮಾತನಾಡಿ, ಸ್ತ್ರೀಯರು ಎಲ್ಲಾ ಕ್ಷೇತ್ರದಲ್ಲೂ ಕೆಲಸಗಳನ್ನು ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಶಕ್ತಿ ಅಗಾಧವಾದದ್ದು, ಹೆಣ್ಣಿನ ತ್ಯಾಗ ಮತ್ತು ಪ್ರೀತಿಗೆ ಸರಿ ಸಮಾನವಾದದ್ದು ಬೇರೊಂದಿಲ್ಲ, ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಆದ್ದರಿಂದ ಎಲ್ಲ ನದಿಗಳಿಗೆ ನಾರಿ ಹೆಸರುಗಳನ್ನು ಇಟ್ಟಿರುತ್ತಾರೆ, ಹೆಣ್ಣು ಇಲ್ಲದೆ ಈ ಜಗತ್ತಿನ ಊಹಿಸಲು ಸಾಧ್ಯವಿಲ್ಲ. ಹೆಣ್ಣು ಮಡದಿ, ಸಹೋದರಿ, ಅತ್ತೆ, ಸೊಸೆ, ಮಗಳಾಗಿ, ಶಿಕ್ಷಕಿಯಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಾಳೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಒಂದು ಹೆಣ್ಣು ಹತ್ತು ಮಕ್ಕಳನ್ನು ಸಾಕಬಹುದು. ಆದರೆ ಈಗಿನ ಕಾಲದಲ್ಲಿ 10 ಗಂಡು ಮಕ್ಕಳು ಒಬ್ಬ ತಾಯಿಯನ್ನು ಸರಿಯಾಗಿ ನೋಡುತ್ತಿಲ್ಲ. ಒಂದು ಮಗುವಿಗೆ ಜನ್ಮ ಕೊಡುವ ಸಾಮರ್ಥ್ಯವನ್ನು ಹೆಣ್ಣಿಗೆ ಮಾತ್ರ ಇರುತ್ತದೆ. ಹೆಣ್ಣು ದೀಪವಿದ್ದಂತೆ, ತಾನು ಉರಿದು ಇನ್ನೊಬ್ಬರಿಗೆ ಬೆಳಕನ್ನು ನೀಡುತ್ತಾಳೆ, ಹೆಣ್ಣು ಸಂಸಾರದ ಕಣ್ಣು, ಗಂಡ-ಹೆಂಡತಿ ಇಬ್ಬರು ಹೊಂದಿಕೊಂಡು ಹೋದರೆ ಮಾತ್ರ ಸಾಮರಸ್ಯದ ಜೀವನ ಸಾಧ್ಯ ಎಂದು ತಿಳಿಸಿದರು.ಮುಖ್ಯೋಪಾಧ್ಯಾಯ ಪಿ.ವಿ. ಕೆಂಚನಗೌಡ್ರ, ಹದ್ದಿ, ಶೀಲಾ ಹುಂಡೇಕರಮಠ, ಶೈಲಾ ಜಗತ್ತಾಪ, ಎಸ್.ವಿ. ಬ್ಯಾಹಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಎಫ್.ವಿ. ಶಿರುಂದಮಠ, ಬಿ.ಎಸ್. ಕಬಾಡ್ರ, ಶಾಲೆಯ ಗುರುಗಳು, ಗುರುಮಾತೆಯರು ಇದ್ದರು.
ಎಂ. ಎಚ್. ನದಾಫ್ ಸ್ವಾಗತಿಸಿದರು. ವೈ .ಆರ್.ತಳವಾರ ಕಾರ್ಯಕ್ರಮ ನಿರೂಪಿಸಿದರು.