ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಪುರಸ್ಕಾರದ ಕೊರತೆ: ವಿಜಯ ರಾಮೇಗೌಡ

KannadaprabhaNewsNetwork |  
Published : Mar 10, 2025, 12:18 AM IST
9ಕೆಎಂಎನ್ ಡಿ35  | Kannada Prabha

ಸಾರಾಂಶ

ಸಿನಿಮಾ, ದೂರದರ್ಶನ, ಮೊಬೈಲ್ ಸಂಸ್ಕೃತಿಯ ಆಕ್ರಮಣಗಳ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಯುವಕರು ಪೌರಾಣಿಕ ನಾಟಕಗಳನ್ನು ಕಲಿತು ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗ್ರಾಮೀಣ ಕಲಾವಿದರು ತಮ್ಮ ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಮಿಣ ಪ್ರದೇಶದ ರಂಗಭೂಮಿ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಪುರಸ್ಕಾರದ ಕೊರತೆ ಇದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ರಂಗಭೂಮಿ ಕಲಾವಿದರಿಗೆ ಸಹಾಯ ಹಸ್ತ ಚಾಚಬೇಕಿದೆ ಎಂದು ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ ಕರೆನೀಡಿದರು.

ಪುರಸಭಾ ವ್ಯಾಪ್ತಿ ಹೊಸಹೊಳಲು ಗ್ರಾಮದಲ್ಲಿ ಜರುಗಿದ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವದ ಅಂಗವಾಗಿ ಮಾರುತಿ ಯುವಕ ಸಂಘದಿಂದ ಆಯೋಜಿಸಿದ್ದ ಭಿಮನ್ಯು ವಿವಾಹ ಅಥವಾ ಭೀಮ-ದುರ್ಯೋಧನರ ಗದಾಯುದ್ಧ ಪೌರಾಣಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಸಿನಿಮಾ, ದೂರದರ್ಶನ, ಮೊಬೈಲ್ ಸಂಸ್ಕೃತಿಯ ಆಕ್ರಮಣಗಳ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಯುವಕರು ಪೌರಾಣಿಕ ನಾಟಕಗಳನ್ನು ಕಲಿತು ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗ್ರಾಮೀಣ ಕಲಾವಿದರು ತಮ್ಮ ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.

ಒಂದೂಂದು ನಾಟಕ ಪ್ರದರ್ಶನಕ್ಕೂ ಲಕ್ಷಾಂತರ ರು. ಹಣ ವೆಚ್ಚವಾಗುತ್ತದೆ. ಡ್ರಾಮಾ ಮಾಸ್ಟರ್, ನಾಟಕದ ಸೀನರಿಗಳು, ಪಾತ್ರಗಳಿಗೆ ತಕ್ಕಂತಹ ವೇಷ ಭೂಷಣಗಳು ಸೇರಿದಂತೆ ಎಲ್ಲದಕ್ಕೂ ಕಲಾವಿದರೇ ಹಣ ಹೊಂದಿಸಿಕೊಳ್ಳಬೇಕಾದ ಪರಿಸ್ಥಿಯಿದೆ. ಆದ ಕಾರಣ ಗ್ರಾಮಿಣ ರಂಗಭೂಮಿ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ನೆರವಿನ ಅವಶ್ಯಕತೆಯಿದೆ ಎಂದರು.

ಪೌರಾಣಿಕ ನಾಟಕಗಳಲ್ಲಿ ನಾವು ಅನುಸರಿಸಬೇಕಾದ ಬದುಕಿನ ಮಾರ್ಗದ ಸಂದೇಶವಿದೆ. ಸತ್ಯ ಮತ್ತು ಧರ್ಮಕ್ಕೆ ಎಂದಿಗೂ ಜಯ. ಅಧರ್ಮ ಎಂದೂ ಗೆಲ್ಲುವುದಿಲ್ಲ ಎನ್ನುವುದನ್ನು ನಮ್ಮ ಹಿರಿಯರು ಸಾರಿದ್ದಾರೆ ಎಂದರು.

ಗ್ರಾಮೀಣ ಯುವಕ ಸಂಘಗಳು ಕೇವಲ ನಾಟಕ ಪ್ರದರ್ಶನಕ್ಕೆ ಸೀಮಿತವಾಗದೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಚಿಂತಿಸಬೇಕು. ಪಕ್ಷ ರಾಜಕಾರಣವನ್ನು ಬದಿಗೊತ್ತಿ ತಮ್ಮ ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳ ಮುಂದೆ ತಮ್ಮ ಗ್ರಾಮದ ಸಮಸ್ಯೆಗಳ ಅರಿವು ಮೂಡಿಸಿ ಅನುಕೂಲ ಪಡೆದುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಯಮನಹಳ್ಳಿ ಮಂಜೇಗೌಡ, ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘದ ಮಾಜಿ ಅಧ್ಯಕ್ಷ ಚಂದ್ರೇಗೌಡ, ನಿರ್ದೇಶಕ ಕೃಷ್ಣೇಗೌಡ, ಗ್ರಾಮ ಮುಖಂಡರಾದ ಪ್ರಕಾಶ್, ಹಿರಿಯ ಕಲಾವಿದರಾದ ಹರಿಹರಪುರ ಮಹದೇವೇಗೌಡ, ಶಂಕರೇಗೌಡ, ರಾಗಿಮುದ್ದನಹಳ್ಳಿ ಕೆ.ಆರ್.ದೇವರಾಜು, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''