ಮುಂಡಗೋಡ: ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಜಗತ್ತಿಗೆ ಜ್ಞಾನ ನೀಡಿದ ಮಹಾನ್ ಚಿಂತಕ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಮುಡೆಣ್ಣನವರ ಹೇಳಿದರು.
ರಾಜ್ಯಮಟ್ಟದ ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಮಾತನಾಡಿ, ಮಹಿಳಾ ದಿನಾಚರಣೆ ಅಲಂಕಾರಕ್ಕಾಗಿ ಅಲ್ಲ, ಅದು ಹಕ್ಕು, ಸಮಾನತೆ ಮತ್ತು ಸಂವಿಧಾನ ಮೌಲ್ಯಗಳ ಅರಿವಿಗಾಗಿ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು. ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗಮಯ ಜೀವನ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣ ಹೋರಾಟವನ್ನು ಉದಾಹರಿಸಿ, ಮಹಿಳಾ ಸಂಘಟನೆಗಳ ಮಹತ್ವವನ್ನು ವಿವರಿಸಿದರು. ಸಂವಿಧಾನಿಕ ಹಕ್ಕುಗಳನ್ನು ಅರಿತುಕೊಳ್ಳುವಂತೆ ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಮಾತನಾಡಿ, ಸಂವಿಧಾನದಿಂದ ದೇಶದ ಸ್ಥಿರತೆ ಸಾಧ್ಯವಾಗಿದೆ. ಮಹಿಳೆಯರು ಸಮಾಜದ ಪ್ರಗತಿಗೆ ಮೂಲಶಕ್ತಿ ಎಂಬ ಹೇಳಿದರು.ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾ. ಅನಿಲ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಚಿಂತಕಿ ವೈಷ್ಣವಿ, ಅಂಬೇಡ್ಕರ್ ಅವರ ಹೋರಾಟ ಮತ್ತು ಮಹಿಳಾ ಹಕ್ಕುಗಳ ಕುರಿತು ಮಾತನಾಡಿದರು.
ಸಂವಿಧಾನ ಜಾಗೃತಿ ಜಾಥಾ: ಜಾಥಾದಲ್ಲಿ ಮಹಿಳೆಯರು ಸ್ವಾತಂತ್ರ್ಯ ಹೋರಾಟಗಾರ್ತಿಯರು, ವೈದ್ಯೆ, ಶಿಕ್ಷಕಿ, ವಕೀಲರು, ರಾಜಕೀಯ ಕ್ಷೇತ್ರದ ಮಹಿಳೆಯರಂತೆ ವೇಷಭೂಷಣ ಧರಿಸಿ ಸ್ತಬ್ಧಚಿತ್ರ ಪ್ರದರ್ಶನ ನೀಡಿದರು. ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಭಾವಚಿತ್ರಗಳೊಂದಿಗೆ ಟ್ರ್ಯಾಕ್ಟರ್ಗಳಲ್ಲಿ ಮೆರವಣಿಗೆ ನಡೆಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಶಿವಾಜಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನ, ಮಹಿಳಾ ಹಕ್ಕುಗಳು ಹಾಗೂ ಸಮಾನತೆ ಕುರಿತು ಘೋಷಣೆ ಕೂಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.