ವಿಜಯಪುರ: ಬಬಲೇಶ್ವರ ತಾಲೂಕಿನ ಮಮದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅಮಿತ ಮಿರ್ಜಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯಲ್ಲಿ ಸಂಶೋಧನೆ ಲೇಖನ ಮಂಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಂಫ್ಯಾಕ್ಟ್ ಆಫ್ ಟೆಕ್ನಾಲಾಜಿಕಲ್ ಅಡ್ವಾನ್ಸಮೆಂಟ್ ಆನ್ ಪ್ರೊಡಕ್ಟವಿಟಿ ಆಫ್ ಪಬ್ಲಿಕ್ ಆ್ಯಂಡ್ ಪ್ರೈವೆಟ್ ಸೆಕ್ಟರ್ ಬ್ಯಾಂಕ್ಸ್: ಎ ಸ್ಟಾಟಿಸ್ಟಿಕಲ್ ಸ್ಟಡಿ ವಿಷಯದ ಮೇಲೆ 2005 ರಿಂದ 2021ರ ವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಸಾರ್ವಜನಿಕ ವಲಯ) ಮತ್ತು ಐಸಿಐಸಿಐ (ಖಾಸಗಿ ವಲಯ)ಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಕುರಿತು ಬ್ಯಾಂಕುಗಳಲ್ಲಿ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ, ಸಾರ್ವಜನಿಕರಿಗೆ ಅದರಿಂದಾದ ಲಾಭ ಸೇರಿದಂತೆ ನಾನಾ ಅಂಶಗಳ ಕುರಿತು ಡಾ. ಅಮಿತ ಮಿರ್ಜಿ ಮತ್ತು ಡಾ. ಸೀಮಾ ತ್ರಿಪಾಠಿ ಅವರು ನಡೆಸಿದ ಸಂಶೋಧನಾ ಲೇಖನವನ್ನು ಡಾ. ಅಮಿತ ಮಿರ್ಜಿ ಮಂಡಿಸಿದರು.
ಇವರು ಮಂಡಿಸಿರುವ ಈ ಲೇಖನ ಅಮೆರಿಕಾದ ಪ್ರತಿಷ್ಠಿತ ಆಪಸರ್ಜ್ ಜರ್ನಲ್ ನಲ್ಲಿ ಪ್ರಕಟವಾಗಲಿದೆ. ಈ ಮೂಲಕ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಲೇಖನ ಮಂಡಿಸಿದ ವಿಜಯಪುರದ ಮೊದಲ ಸಂಶೋದಕ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಮಮದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ. ಪಾಟೀಲ ಅವರು ಡಾ. ಅಮಿತ ಮಿರ್ಜಿ ಅವರನ್ನು ಅಭಿನಂದಿಸಿದ್ದಾರೆ.