ಕನ್ನಡಪ್ರಭ ವಾರ್ತೆ ಮೈಸೂರುಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಂಬಳಕ್ಕೋಸ್ಕರ ಕೆಲಸ ಮಾಡಬಾರದು. ಜೀವ ಉಳಿಸುವ ವೈದ್ಯರು ಮತ್ತು ಅಕ್ಷರ ಕಲಿಸುವ ಶಿಕ್ಷಕರು ತಮ್ಮ ಸೇವೆಯನ್ನು ಅರಿತುಕೊಳ್ಳಬೇಕು. ಸಮಾಜದಲ್ಲಿ ತಮಗಿರುವ ಸ್ಥಾನಮಾನವನ್ನು ಅರಿತು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.ಡಾ. ಚಂದ್ರಶೇಖರ್ ಫೌಂಡೇಷನ್ ಮತ್ತು ಕಾವೇರಿ ಸಮೂಹ ವಿದ್ಯಾಸಂಸ್ಥೆಗಳು ವತಿಯಿಂದ ಮೈಸೂರು ತಾಲೂಕು ಇಲವಾಲ ಹೋಬಳಿ ಕರ್ಕನಹಳ್ಳಿ ಗ್ರಾಮದಿಂದ ಗುಂಗ್ರಾಲ್ ಛತ್ರದವರೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇಲವಾಲ ಹೋಬಳಿ ಕೇಂದ್ರಸ್ಥಾನವಾಗಿದೆ. ಮುಂದಿನ ದಿನಗಳಲ್ಲಿ ನಗರಪಾಲಿಕೆಯು ಗ್ರೇಟರ್ ಮೈಸೂರು ರಚನೆಯಾದರೆ ಇಲವಾಲ ಮೈಸೂರಿಗೆ ಸೇರಲಿದೆ. ಈ ಭಾಗಗಳು ಸಾಕಷ್ಟು ಅಭಿವೃದ್ದಿ ಕಾಣಬಹುದು ಎಂದರು. ಕಾವೇರಿ ಆಸ್ಪತ್ರೆಯನ್ನು ಆರಂಭ ಮಾಡಿದ ದಿನದಿಂದಲೂ ಡಾ. ಚಂದ್ರಶೇಖರ್ ಅವರು ಆರೋಗ್ಯ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಆರೋಗ್ಯ ಕ್ಷೇತ್ರವಲ್ಲದೆ ಶಿಕ್ಷಣಕ್ಕೂ ಆದ್ಯತೆ ನೀಡಿದ್ದಾರೆ. ಮುಂದೆ ಇಲವಾಲ ಭಾಗದಲ್ಲಿ ಎಂಜಿನಿಯರಿಂಗ್ ಶಿಕ್ಷಣ ತೆರೆಯಲು ಮುಂದಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿದೆ. ನಗರ ಪ್ರದೇಶದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇರಲಿಲ್ಲ. ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಕೆ.ಆರ್.ಎಸ್ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.ಆರೋಗ್ಯ, ಶಿಕ್ಷಣಕ್ಕೆ ಸೀಮಿತವಾಗದೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ದೊಡ್ಡ ವೈದ್ಯರಾಗಿದ್ದರೂ ಯಾವುದೇ ಅಹಂಕಾರ ಇಲ್ಲದೆ ಸರಳತೆಯಿಂದ ಸಂಸ್ಥೆಯನ್ನು ಕಟ್ಟಿದ್ದಾರೆ ಎಂದು ನುಡಿದರು.ಹವಾಮಾನ ಬದಲಾವಣೆಯಿಂದ ಸಾಕಷ್ಟು ವ್ಯತ್ಯಾಸ ನೋಡುತ್ತಿರುವುದರಿಂದ ನಾವು ಪರಿಸರ ಕಾಪಾಡಬೇಕು. ಜಿಪಂ ಅಧ್ಯಕ್ಷನಾಗಿದ್ದಾಗ ಇಲವಾಲದಿಂದ ಮನುಗನಹಳ್ಳಿ ಕಡೆಗೆ, ಕುಶಾಲನಗರದವರೆಗೆ ಗಿಡಗಳನ್ನು ನೆಟ್ಟಿದ್ದರಿಂದ ಇಂದು ದೊಡ್ಡದಾಗಿ ಬೆಳೆದು ನೆರಳು ನೀಡುತ್ತಿದೆ. ನಾನು ಸಹಕಾರ ಸಚಿವನಾಗಿದ್ದಾಗ ಸಾಲು ಮರದ ತಿಮ್ಮಕ್ಕನನ್ನು ಕರೆದು ಒಂದೇ ದಿನ ಒಂದು ಲಕ್ಷ ಗಿಡವನ್ನು ನೆಡಲಾಗಿತ್ತು.ಶಾಲಾ, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆ, ಉದ್ಯಾನವನಗಳಲ್ಲಿ ಗಿಡ ನೆಡುವಂತೆ ಮಾಡಿಸಿದ್ದೆ ಎಂದರು. ಸಾಮಾಜಿಕ ಅರಣ್ಯ ವಿಭಾಗದಿಂದ ಗಿಡಗಳನ್ನು ಬೆಳೆಸಿ ಅದನ್ನು ನೆಟ್ಟು ನಿರ್ವಹಣೆ ಮಾಡಲು ಮೂರು ವರ್ಷಕ್ಕೆ ಹಣವನ್ನು ಕೊಡಲಾಗಿತ್ತು. ನಾನು ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಮೂರು ವರ್ಷಗಳ ಬದಲಿಗೆ ಆರು ವರ್ಷದ ನಂತರ ಕೊಡುವಂತೆ ಮಾಡಿಸಿದ್ದೆ ಎಂದು ನುಡಿದರು.ಮನುಷ್ಯನು ಉತ್ತಮವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಪರಿಸರ ಮತ್ತು ಒಳ್ಳೆಯ ಗಾಳಿ ಇರಬೇಕು. ಶೀತಾಂಶವನ್ನು ಮರ ಹಿಡಿದಿಡುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಮರಗಳನ್ನು ಬೆಳೆಸಿ ಪೋಷಿಸಬೇಕು ಎಂದು ಸಲಹೆ ನೀಡಿದರು. ಒಂದು ಕಾಲದಲ್ಲಿ ಹತ್ತು ಎಕರೆಯಷ್ಟು ಜಮೀನು ಹೊಂದಿದ್ದವರೂ ಇಂದು ಜಮೀನು ಮಾರಾಟ ಮಾಡಿ ಅದ್ಧೂರಿ ಮದುವೆ ಎನ್ನುವಂತಾಗಿದೆ. ಸರಳ ಮದುವೆ ಮಾಡಿ ಹೆಣ್ಣು ಮಗಳ ಹೆಸರಿನಲ್ಲಿ ಠೇವಣಿ ಇಡುವಂತೆ ಹೇಳಿದರೂ ಕೇಳಲ್ಲ. ಸಂಜಯ್ ಗಾಂಧಿ ಅವರು ಸಚಿವರಾಗಿದ್ದಾಗ ಒಂದು ಮರ ಕಡಿದರೆ ಹತ್ತು ಗಿಡ ನೆಡುವಂತೆ ಹೇಳಿದ್ದನ್ನು ನೆನಪಿಸಿಕೊಳ್ಳಬೇಕು ಎಂದರು.ಸಹಕಾರ ಸಂಘಗಳಿಂದಲೂ ವಿಶ್ವ ಪರಿಸರ ದಿನಾಚರಣೆ ಮಾಡುವ ಜತೆಗೆ ಗಿಡಗಳನ್ನು ನೆಡುವಂತಹ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈಗಾಗಲೇ ಸಹಕಾರ ಸಂಘದಿಂದ ತೀರ್ಮಾನ ಮಾಡಿ ಎಲ್ಲರಿಗೂ ಹೇಳಲಾಗಿದೆ. ಶೀಘ್ರದಲ್ಲೇ ಸಹಕಾರಿಗಳು ಗಿಡ ನೆಡುವ ಕೆಲಸ ಮಾಡಲಿದ್ದಾರೆ ಎಂದರು.ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ,ಸಿ. ಲಕ್ಷ್ಮಣ್ ಮಾತನಾಡಿದರು. ಕಾವೇರಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಚಂದ್ರಶೇಖರ್, ಡಾ. ಸರಳಾ ಚಂದ್ರಶೇಖರ್, ಆಡಳಿತಾಧಿಕಾರಿ ಡಾ.ಬಿ. ಶ್ರೀಕಂಠಸ್ವಾಮಿ, ಸಂಸ್ಥೆಯ ಅಶೋಕ್, ರಾಜು ಮೊದಲಾದವರು ಇದ್ದರು.ಪ್ರಾಂಶುಪಾಲರು, ಉಪನ್ಯಾಸಕರು, ವೈದ್ಯರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಗಿಡಗಳನ್ನು ನೆಟ್ಟರು.