ಬಳ್ಳಾರಿ: ಸಾಹಿತ್ಯಿಕ ವಲಯದ ಬಹುಮುಖಿ ಸೃಜನಶೀಲ ಲೇಖಕ ಡಾ. ಚಿದಾನಂದ ಸಾಲಿ ಅವರ ಸಾಹಿತ್ಯಿಕ ಪಯಣ ಕುರಿತು ವಿಸ್ತೃತವಾಗಿ ಚರ್ಚಿಸಿ ಸಂವಾದಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಇಲ್ಲಿನ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಕನ್ನಡಭವನ ಸಭಾಂಗಣ ಸಾಕ್ಷಿಯಾಯಿತು.
ಸಂವಾದಕ್ಕೆ ಚಾಲನೆ ನೀಡಿದ ನಾಡಿನ ಖ್ಯಾತ ಯುವ ಲೇಖಕ ಆರೀಫ್ ರಾಜಾ ಅವರು, ಚಿದಾನಂದ ಸಾಲಿ ಅವರ ಸಾಹಿತ್ಯ ಕೃತಿಗಳಲ್ಲಿ ಬದುಕಿನ ವಿವಿಧ ಮಗ್ಗುಲುಗಳು, ಸಾಮಾಜಿಕ ವಾಸ್ತವ, ಮನುಷ್ಯ ಸಂಬಂಧಗಳು, ಗ್ರಾಮೀಣ ಬದುಕಿನ ಸೂಕ್ಷ್ಮತೆ, ಸಮಕಾಲೀನ ಸಮಾಜದ ತಲ್ಲಣಗಳು ಹಾಗೂ ಮಾನವೀಯ ಮೌಲ್ಯಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ ಎಂದರು.
ಸಾಹಿತ್ಯದ ಒಂದೇ ಪ್ರಕಾರಕ್ಕೆ ಸೀಮಿತವಾಗದೆ ಕಥೆ, ಕಾವ್ಯ, ಪ್ರಬಂಧ, ಅನುವಾದ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರು ತಮ್ಮ ಸೃಜನಶೀಲತೆಯನ್ನು ವಿಸ್ತರಿಸಿಕೊಂಡಿರುವುದು ಅವರ ಸಾಹಿತ್ಯಿಕ ಪಯಣದ ಪ್ರಮುಖ ವೈಶಿಷ್ಟ್ಯವಾಗಿದೆ. ಪ್ರಕಾರ ಬದಲಾದರೂ ಅವರ ಬರವಣಿಗೆಯಲ್ಲಿರುವ ಮಾನವೀಯ ಕಾಳಜಿ, ಸಾಮಾಜಿಕ ಸ್ಪಂದನೆ ಮತ್ತು ಜೀವನಾನುಭವಗಳೇ ಕೇಂದ್ರಬಿಂದುವಾಗಿವೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಹಾಗೂ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸವಣ್ಣ ಮಾತನಾಡಿ, ಸಾಹಿತ್ಯ ಎನ್ನುವುದು ಸಮಾಜವನ್ನು ನೋಡುವ, ಅರ್ಥಮಾಡಿಕೊಳ್ಳುವ ಮತ್ತು ಪ್ರಶ್ನಿಸುವ ಒಂದು ಸೂಕ್ಷ್ಮ ಮಾಧ್ಯಮ. ಲೇಖಕ ತನ್ನ ಸುತ್ತಲಿನ ಬದುಕಿಗೆ ಸ್ಪಂದಿಸಿದಾಗ ಮಾತ್ರ ಆತನ ಸಾಹಿತ್ಯಕ್ಕೆ ಜೀವಂತಿಕೆ ದೊರೆಯುತ್ತದೆ. ಚಿದಾನಂದ ಸಾಲಿ ಅವರ ಬರಹಗಳು ಬದುಕಿನ ಪ್ರತಿಬಿಂಬವಾಗಿ ಪ್ರತಿಫಲಿಸಿವೆ ಎಂದು ಅಭಿಪ್ರಾಯಪಟ್ಟರು.
ಯುವ ಲೇಖಕ ಡಾ. ಟಿ.ಎಸ್. ಗೊರವರ ಅವರು ಸಾಲಿಯವರ ಸಾಹಿತ್ಯ ಕುರಿತು ಮಾತನಾಡಿ, ಸಮಾಜದ ಅಂಚಿನಲ್ಲಿರುವವರ ನೋವು, ಸಂಘರ್ಷ, ಕನಸು, ನಿರೀಕ್ಷೆ, ಸಂಬಂಧಗಳ ಸಂಕೀರ್ಣತೆ ಹಾಗೂ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳು ಸಾಲಿಯವರ ಕಥನಗಳಲ್ಲಿ ವಿಭಿನ್ನ ನೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಕಥೆಯ ಪಾತ್ರಗಳನ್ನು ಕೇವಲ ಘಟನೆಗಳ ಭಾಗವಾಗಿ ಸೃಷ್ಟಿಸದೆ, ಅವರ ಒಳಮನಸ್ಸು ಮತ್ತು ಬದುಕಿನ ಸಂಘರ್ಷಗಳೊಂದಿಗೆ ಕಟ್ಟಿಕೊಡುವುದು ಸಾಲಿ ಅವರ ಕಥಾ ಶೈಲಿಯ ಪ್ರಮುಖ ಗುಣವಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಹಂದಿಹಾಳು ಹಾಗೂ ಡಾ. ನಾಗರಾಜ ಬಸರಕೋಡು ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪಡೆದ ಪಲ್ಲವ ಪ್ರಕಾಶನದ ಮುಖ್ಯಸ್ಥ ಪಲ್ಲವ ವೆಂಕಟೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.