ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ನಿಷ್ಠಾವಂತ ನಾಯಕರೆಂದೇ ಗುರುತಿಸಿಕೊಂಡಿರುವ ಡಾ.ಈ.ಸಿ.ನಿಂಗರಾಜ್ಗೌಡರ ಸಂಘಟನಾ ಸಾಮರ್ಥ್ಯ, ಕ್ರಿಯಾಶೀಲ ನಾಯಕತ್ವವನ್ನು ಗುರುತಿಸಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳ ಸಹ ಪ್ರಭಾರಿ ಹುದ್ದೆಯನ್ನು ನೀಡಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪ್ರಬಲ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ಈ.ಸಿ.ನಿಂಗರಾಜ್ಗೌಡ ಪಕ್ಷದ ಸೂಚನೆ ಮೇರೆಗೆ ಕೊನೆಯ ಹಂತದಲ್ಲಿ ಕಣದಿಂದ ಹಿಂದೆ ಸರಿದಿದ್ದರು. ಅದನ್ನೂ ಗಮನದಲ್ಲಿಟ್ಟುಕೊಂಡು ಅವರಿಗೆ ಈ ಹುದ್ದೆ ನೀಡಲಾಗಿದೆ.
ಪಕ್ಷದ ಸಂಘಟನೆ, ಚುನಾವಣೆ ಕಾರ್ಯಚಟುವಟಿಕೆಗಳ ಬಗ್ಗೆ ತೀರ್ಮಾನಗಳನ್ನು ಕೈಗೊಂಡು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಕಳೆದ ೩೭ ವಷರ್ಗಳಿಂದ ಸಂಘ-ಪರಿವಾರದ ಭಾರತೀಯ ಕಿಸಾನ್ ಸಂಘ, ವಿಶ್ವ ಹಿಂದೂ ಪರಿಷದ್, ವನವಾಸಿ ಕಲ್ಯಾಣ ಆಶ್ರಮ, ಸಂಸ್ಕೃತ ಭಾರತಿ, ಭಾರತೀಯ ಮಜ್ದೂರ್ ಸಂಘ ಸೇರಿದಂತೆ ಸಂಘ-ಪರಿವಾರದ ಹಲವಾರು ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.ಎಬಿವಿಪಿ ಸಂಘಟನೆ ವೇಳೆ ನಿರಂತರವಾಗಿ ಹೋರಾಟ ರೂಪಿಸಿದವರು. ಎಡಪಂಥೀಯ ಸಂಘಟನೆಗಳು ಕಾಲೇಜಿನಲ್ಲಿ ಎಬಿವಿಪಿ ಸಂಘಟಿಸಲು ಅಡ್ಡಿಪಡಿಸಿದಾಗ ದಿಟ್ಟವಾಗಿ ಎದುರಿಸಿದರು. ಆ ಕಾರಣಕ್ಕೆ ರಾಜ್ಯಮಟ್ಟದ ನಾಯಕರ ಗಮನ ಸೆಳೆದಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದ ಜಯಂತಿ, ಸುಭಾಷ್ಚಂದ್ರ ಬೋಸ್ ಜಯಂತಿ ಆಚರಿಸಿ ಎಲ್ಲರ ಗಮನ ಸೆಳೆದರು. ಈ ವೇಳೆ ಗೌಡರ ಬೆಂಬಲಿಗರ ಮೇಲೆ ಹಲ್ಲೆ ನಡೆದಿತ್ತು. ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರೇ ಮೈಸೂರು ಪೊಲೀಸ್ ಕಮಿಷನರ್ಗೆ ಪೋನ್ ಮಾಡಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದರು.ಅನಂತರ ನಿಂಗರಾಜ್ಗೌಡರ ಹೋರಾಟ ಮತ್ತಷ್ಟು ಪ್ರಖರತೆ ಪಡೆದುಕೊಂಡಿತ್ತು.