ಸಾಹಿತ್ಯ ಕ್ಷೇತ್ರದಲ್ಲಿ ಡಾ.ಹಂಪನಾ ಚಿರಸ್ಥಾಯಿ: ಶರಣಬಸಪ್ಪ ಯಾಳವಾರ

KannadaprabhaNewsNetwork | Published : Jul 3, 2024 12:22 AM

ಸುರಪುರ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಕಸಾಪ ವತಿಯಿಂದ ಅಗಲಿದ ಸಾಹಿತಿಗಳಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಕನ್ನಡ ಸಾಹಿತ್ಯ ಲೋಕದಲ್ಲಿ ಮಿಂಚಿ ಮರೆಯಾದ ಧ್ರುವತಾರೆ ಡಾ.ಕಮಲಾ ಹಂಪನಾ ಅವರು ಪ್ರಾಕೃತ ಶಾಸ್ತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದಲ್ಲದೆ ಜೈನ ಸಾಹಿತ್ಯ ಪರಂಪರೆಯಲ್ಲಿ ಹಲವಾರು ಸಂಶೋಧನೆ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಚಿರಸ್ಥಾಯಿ ಉಳಿದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಕಮಲಾ ಹಂಪನಾ, ಕಕ್ಕೇರಾದ ಯುವ ಸಾಹಿತಿ ರಾಘವೇಂದ್ರ ಮುದನೂರು ಮತ್ತು ಸಾಹಿತ್ಯ ನಾಡು ನುಡಿ ಚಿಂತಕ ನ್ಯಾಯವಾದಿ ಜಿ.ಎಸ್.ಪಾಟೀಲ್ ಅವರ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೂಡಬಿದರೆಯಲ್ಲಿ ಜರುಗಿದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಸ್ತ್ರೀ ಸಂವೇದನಾಶೀಲ ಸಾಹಿತಿಯಾಗಿದ್ದ ಅವರು ಜೀವಪರ ಸಾಮಾಜಿಕ ಮೌಲ್ಯಗಳನ್ನು ಬಿತ್ತುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ. ಅವರ ವಿಮರ್ಶೆಗಳು ಕಥಾ ಸಂಕಲನಗಳು ಸೇರಿ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಸಾಹಿತ್ಯ ಕೊಡುಗೆ ಮೂಲಕ ಚಿರಸ್ಥಾಯಿ ಆಗಿದ್ದಾರೆ ಎಂದರು.

ನ್ಯಾಯವಾದಿ ಜಿ.ಎಸ್.ಪಾಟೀಲ್ ಅವರು ಯಾವಾಗಲೂ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಬಾಂಧವ್ಯವನ್ನು ಹೊಂದುವ ಮೂಲಕ ಸಾಹಿತ್ತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು ಸಮಯ ಪ್ರಜ್ಞೆ ಅವರ ಜೀವಾಳವಾಗಿತ್ತು. ಯುವ ಸಾಹಿತಿ ರಾಘವೇಂದ್ರ ಮದ್ನೂರ್ ಸಾಮಾಜಿಕ ಚಿಂತನೆ ಹೊಂದಿದ್ದ ಅವರು ಕವನ ಸಂಕಲನ ಪ್ರಕಟಿಸುವ ಹಂತದಲ್ಲಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಕೀಳಿದಂತಾಯಿತು ಎಂದು ಹೇಳಿದರು.

ಸಾಹಿತಿಗಳಾದ ಶ್ರೀನಿವಾಸ ಜಾಲವಾದಿ, ನಬಿಲಾಲ್ ಮಕಾನದಾರ, ವಕೀಲ ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ, ಬಸವರಾಜ ಜಮದ್ರಕಾನಿ, ಅನ್ವರ್ ಜಮಾದಾರ, ರಜಾಕ್ ಭಗವಾನ್, ಮಾತನಾಡಿದರು.

ಉಪನ್ಯಾಸಕ ದೇವು ಹೆಬ್ಬಾಳ ನಿರೂಪಿಸಿದರು. ಗೌರವ ಕಾರ್ಯದರ್ಶಿ ಎಚ್. ರಾಠೋಡ್ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ವೆಂಕಟೇಶ ಪಾಟೀಲ್ ವಂದಿಸಿದರು. ಪ್ರಮುಖರಾದ ಮಹೇಶ್ ಪಾಟೀಲ್, ಶ್ರೀಶೈಲ್ ಯಂಕಂಚಿ, ಯಲ್ಲಪ್ಪ ಹುಲಿಕಲ್, ವೆಂಕಟೇಶ ಆಲ್ದರ್ತಿ, ಪ್ರಕಾಶ ಪಾಟೀಲ್, ಗಂಗಾಧರ ರುಮಾಲ್, ಬಸವರಾಜ ಕುಂಬಾರ, ಸಾಹೇಬರೆಡ್ಡಿ ಇಟ್ಟಿಗೆ, ಪ್ರಕಾಶ್ ಬಣಗಾರ, ಅನಿಲ್ ಕುಮಾರ್, ರಾಘವೇಂದ್ರ ಭಕ್ರಿ ಸೇರಿದಂತೆ ಇತರರಿದ್ದರು.