- ಮುತ್ತಿನಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಮತಗಳ್ಳತನ ಜಾಗ್ರತಿ ಅಭಿಯಾನಕ್ಕೆ ಚಾಲನೆ
ಬಿಹಾರ ರಾಜ್ಯದಲ್ಲಿ ಬಿಜೆಪಿಯವರು ಸಂವಿಧಾನ ಬಾಹಿರವಾಗಿ, ಅಲ್ಪ ಸಂಖ್ಯಾತರು, ದಲಿತರ 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶಮಂತ್ ಆರೋಪಿಸಿದರು.
ಬುಧವಾರ ಮುತ್ತಿನಕೊಪ್ಪದಲ್ಲಿ ಗ್ರಾಪಂ ಮಟ್ಟದ ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ನಡೆದ ಸಹಿ ಸಂಗ್ರಹ ಅಭಿಯಾನಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಬಿಹಾರದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೋರಾಟದ ಫಲವಾಗಿ ಮತ್ತೆ ವಾಪಾಸು 38 ಲಕ್ಷ ದಲಿತರ, ಅಲ್ಪ ಸಂಖ್ಯಾತರ ಹೆಸರನ್ನು ಮತಪಟ್ಟಿಗೆ ಸೇರಿಸಲಾಗಿದೆ. ಅನೇಕ ರಾಜ್ಯಗಳಲ್ಲಿ ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೆಸರು ತೆಗೆಯಲಾಗಿದೆ. ಡಾ.ಅಂಬೇಡ್ಕರ್ ಸಂವಿಧಾನ ರಚಿಸಿ ಭಾರತ ದೇಶದ ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ.ಆದರೆ, ಬಿಜೆಪಿಯವರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಯಾತ್ರೆ ಮಾಡಿ ಜನರ ನಾಡಿ ಬಡಿತ ಅರಿತಿದ್ದರು. ರಾಹುಲ್ ಗಾಂಧಿ ಜೊತೆ ಯುವಜನರು ಬರುತ್ತಿರು ವುದನ್ನು ಅರಿತ ಬಿಜೆಪಿಗೆ ಸೋಲು ನಿಶ್ಚಿತ ಎಂದು ಗೊತ್ತಾದ ಕೂಡಲೇ ಮತಗಳ್ಳತನ ಮಾಡಿದ್ದಾರೆ ಎಂದರು.
ಕಳೆದ 11 ವರ್ಷದಿಂದ ದೇಶದಲ್ಲಿ ಬಿಜೆಪಿ ದುರಾಳಿತ ಮಾಡುತ್ತಿದೆ. ಜನರ ಮೇಲೆ ಅವೈಜ್ಞಾನಿಕವಾದ ಜಿಎಸ್ ಟಿ ಹಾಕಿ ತೊಂದರೆ ಕೊಟ್ಟರು. ಹೊಸ, ಹೊಸ ಕಾನೂನು ತಂದು ರೈತರಿಗೆ, ಮಹಿಳೆಯರಿಗೆ ತೊಂದರೆ ನೀಡುತ್ತಿದ್ದಾರೆ. ಮಣಿಪುರದಲ್ಲಿ ಹೋರಾಟ ನಡೆದು ಹತ್ತಾರು ಜೀವ ಬಲಿಯಾದರೂ ನಮ್ಮ ದೇಶದ ಪ್ರಧಾನಿ ಅಲ್ಲಿಗೆ ಭೇಟಿ ನೀಡಲಿಲ್ಲ. ಕಳೆದ ವಾರ ಸುಪ್ರೀಂ ಕೋರ್ಟಲ್ಲಿ ವಕೀಲರೊಬ್ಬರು ನ್ಯಾಯಾಧೀಶರಿಗೆ ಅಪಮಾನ ಮಾಡಿ ದೇಶದ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತಂದಿದ್ದರೂ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.