ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಡಾ.ಎನ್.ಎಸ್.ಇಂದ್ರೇಶ್ ಪುನರಾಯ್ಕೆ

KannadaprabhaNewsNetwork |  
Published : Mar 14, 2025, 12:33 AM IST
ಡಾ.ಎನ್.ಎಸ್.ಇಂದ್ರೇಶ್ ಪುನರಾಯ್ಕೆ | Kannada Prabha

ಸಾರಾಂಶ

ಭಾರತೀಯ ಜನತಾ ಪಕ್ಷದ ಮಂಡ್ಯ ಜಿಲ್ಲಾಧ್ಯಕ್ಷರಾಗಿ ಡಾ.ಎನ್.ಎಸ್.ಇಂದ್ರೇಶ್ ಪುನರಾಯ್ಕೆಯಾಗಿದ್ದಾರೆ. ಯಾವುದೇ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಮುಖಂಡರು, ಕಾರ್ಯಕರ್ತರು ಸರ್ವಾನುಮತದಿಂದ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತೀಯ ಜನತಾ ಪಕ್ಷದ ಮಂಡ್ಯ ಜಿಲ್ಲಾಧ್ಯಕ್ಷರಾಗಿ ಡಾ.ಎನ್.ಎಸ್.ಇಂದ್ರೇಶ್ ಪುನರಾಯ್ಕೆಯಾಗಿದ್ದಾರೆ. ಯಾವುದೇ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಮುಖಂಡರು, ಕಾರ್ಯಕರ್ತರು ಸರ್ವಾನುಮತದಿಂದ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದಾರೆ.

ಇಲ್ಲಿನ ಸುಭಾಷ್‌ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಚುನಾವಣಾ ಪ್ರಭಾರಿ ಫಣೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ.ಎನ್.ಎಸ್.ಇಂದ್ರೇಶ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಶಾಲು-ಹಾರ ಹಾಕಿ ಅಭಿನಂದಿಸಿದರಲ್ಲದೆ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಿ.ಪಿ.ಉಮೇಶ್ ಅವರ ಬಳಿಕ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಡಾ.ಎನ್.ಎಸ್.ಇಂದ್ರೇಶ್ ಅವರು. ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಮೈತ್ರಿ ಧರ್ಮ ಪಾಲನೆಯೊಂದಿಗೆ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು. ಪಕ್ಷದೊಳಗೆ ಭಿನ್ನಮತ, ಅಪಸ್ವರಗಳಿಗೆ ಆಸ್ಪದವಿಲ್ಲದೆ ಎರಡೂ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರು.

ಪಾಂಡವಪುರ ಪುರಸಭೆ ಉಪಾಧ್ಯಕ್ಷ ಸ್ಥಾನ, ಮಳವಳ್ಳಿ ಪುರಸಭೆ ಅಧ್ಯಕ್ಷ ಸ್ಥಾನ ಹಾಗೂ ಮಂಡ್ಯ ನಗರಸಭೆ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ದೊರಕಿಸಿಕೊಡುವಲ್ಲಿ ಸಾಕಷ್ಟು ಶ್ರಮವಹಿಸಿದ್ದರು. ಸರ್ಕಾರದ ವಿರುದ್ಧ ನಡೆಸಲಾದ ಹೋರಾಟಗಳಲ್ಲೂ ಪಕ್ಷದ ಎಲ್ಲಾ ಮುಖಂಡರು- ಕಾರ್ಯಕರ್ತರನ್ನು ಒಗ್ಗಟ್ಟಿನಿಂದ ತೊಡಗಿಸಿಕೊಂಡಿದ್ದರಿಂದಲೇ ಎರಡನೇ ಅವಧಿಗೆ ಡಾ.ಎನ್.ಎಸ್.ಇಂದ್ರೇಶ್ ಅವರ ಆಯ್ಕೆ ಸುಗಮವಾಗಲು ಕಾರಣವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾದ ಸಮಯದಲ್ಲೇ ಎನ್.ಎಸ್.ಇಂದ್ರೇಶ್ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವಂತೆ ಹಲವು ಹಿರಿಯ ಮುಖಂಡರು ಸಲಹೆ ನೀಡಿದ್ದರು. ಅವರನ್ನು ಬದಲಾವಣೆ ಮಾಡುವುದರಿಂದ ವಿನಾಕಾರಣ ಗೊಂದಲಗಳು, ಅಪಸ್ವರಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಇಂದ್ರೇಶ್ ಜಿಲ್ಲೆಯೊಳಗೆ ಮೈತ್ರಿಧರ್ಮ ಪಾಲನೆಯೊಂದಿಗೆ ಸಮರ್ಥವಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆಂಬ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿದ್ದರು. ಹೀಗಾಗಿ ರಾಜ್ಯ ನಾಯಕರು ಡಾ.ಎನ್.ಎಸ್.ಇಂದ್ರೇಶ್ ಅವರೊಬ್ಬರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದ್ದರು. ಅಲ್ಲಿಂದ ಅಂತಿಮಗೊಂಡು ಲಕೋಟೆಯಲ್ಲಿ ಬಂದಿದ್ದನ್ನು ಅಧಿಕೃತವಾಗಿ ಸಭೆಯಲ್ಲಿ ಘೋಷಿಸಲಾಯಿತು.

ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಶ್ರೀಧರ್, ಡಾ.ಸದಾನಂದ ಹಾಗೂ ಇತರರಿದ್ದರೂ ಇಂದ್ರೇಶ್ ಅವರನ್ನು ಸರಿಗಟ್ಟುವ ಸಾಮರ್ಥ್ಯವನ್ನು ಪ್ರದರ್ಶಿಸಲಿಲ್ಲ. ಹೀಗಾಗಿ ಇಂದ್ರೇಶ್ ಅವರ ಹೆಸರು ಅಂತಿಮವಾಗಿ ಆಯ್ಕೆಗೊಂಡಿತು.

ಸಭೆಯಲ್ಲಿ ಚುನಾವಣಾ ಪ್ರಭಾರಿ ಸಚ್ಚಿದಾನಂದಮೂರ್ತಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಶ್ರೀಧರ್, ಡಾ.ಸದಾನಂದ, ವಿವೇಕ್, ಸಿ.ಟಿ.ಮಂಜುನಾಥ್, ವಸಂತಕುಮಾರ್, ಹೆಚ್.ಕೆ.ಅಶೋಕ್‌ಕುಮಾರ್ ಇತರರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ