ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲಾದ್ಯಂತ ಇ-ಸ್ವತ್ತು ಆಂದೋಲನ ಕೈಗೊಂಡು, ಜ.1ರ ಒಳಗಾಗಿ ಇ-ಸ್ವತ್ತು ಮಾಡಿಕೊಡುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ದಾವಣಗೆರೆ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಇ-ಸ್ವತ್ತು ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಂಡು, ಜನೆವರಿ-01-2025ರ ಒಳಗಾಗಿ ಇ-ಸ್ವತ್ತು ಮಾಡಿಕೊಡಿ ಎಂದು ಹೇಳಿದರು.
ಪಿಡಿಒಗಳು ಹೊಸ ಹೊಸ ಆಲೋಚನೆ, ಯೋಜನೆಗಳ ಮೂಲಕ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಗ್ರಾಮೀಣ ಸರ್ಕಾರಿ ಶಾಲೆ, ಆಸ್ಪತ್ರೆಗಳ ಸುಧಾರಣೆ ಹಾಗೂ ಆರೋಗ್ಯ ಶಿಬಿರ, ಸ್ವಚ್ಛತೆ ಮೂಲಕ ಮಾದರಿಯಾಗಬೇಕು ಎಂದು ತಿಳಿಸಿದರು.ಹಲವು ಪಿಡಿಒಗಳು ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ದೂರು ಬರುತ್ತಿವೆ. ಇದಕ್ಕೆಲ್ಲಾ ಅವಕಾಶ ಕೊಡಬೇಡಿ. ಒಂದು ವೇಳೆ ಯಾವುದೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಜನರು ಸಮಸ್ಯೆ ಹೇಳಿಕೊಂಡು ಬಂದಾಗ ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಬೂಬು ಹೇಳದೆ, ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಸರ್ಕಾರಿ ಕೆಲಸ, ದೇವರ ಕೆಲಸವೆಂದು ಹೇಳುವುದಷ್ಟೇ ಅಲ್ಲ, ಅದು ಕೃತಿಗೂ ಬರಬೇಕು. ಪಂಚಾಯಿತಿಗಳಲ್ಲಿ ಜನಪರ ಕೆಲಸ ಮಾಡಬೇಕು. ಇಲ್ಲವಾದರೆ, ದಾವಣಗೆರೆ ಜಿಲ್ಲೆ ಬಿಟ್ಟು ಹೋಗಬಹುದು ಎಂದು ಸಂಸದೆ ಪ್ರಭಾ ಅವರು ಎಚ್ಚರಿಸಿದರು.ಗ್ರಾಮೀಣ ಜನರು ಮೂಲ ಸೌಕರ್ಯ ಕಲ್ಪಿಸುವಂತೆ ನನ್ನ ಬಳಿ ಬಂದು, ಮನವಿ ಮಾಡುತ್ತಾರೆ. ಹೀಗೆ ಜನರು ನಮ್ಮ ಬಳಿ ಅಳಲು ತೋಡಿಕೊಳ್ಳುತ್ತಾರೆಂದರೆ ಗ್ರಾಪಂ ಮಟ್ಟದಲ್ಲಿ ಪಿಡಿಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತಿಳಿಯುತ್ತದೆ. ಅದಕ್ಕೆ ಅವಕಾಶ ನೀಡಬೇಡಿ. ಪಾರದರ್ಶಕ, ಭ್ರಷ್ಟಾಚಾರ ರಹಿತವಾಗಿ ಜನರಿಗೆ ಸ್ಪಂದಿಸಬೇಕು. ಗ್ರಾಪಂ ಅಧಿಕಾರಿಗಳೊಂದಿಗೆ ಇದು ನನ್ನ ಮೊದಲ ಸಭೆ ಹಾಗೂ ಕೊನೆಯ ಎಚ್ಚರಿಕೆ ಎಂದು ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್ ಸೇರಿದಂತೆ ತಾಲೂಕು, ಗ್ರಾಮ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.