ಶೀಘ್ರ ಪ್ರತಿ ತಾಲೂಕುಗಳಲ್ಲೂ ಜನಸ್ಪಂದನ- ಸಂಸದೆ ಡಾ.ಪ್ರಭಾ

KannadaprabhaNewsNetwork | Published : Aug 22, 2024 12:49 AM

ಅಭಿನಂದನಾ ಕಾರ್ಯಕ್ರಮಗಳ‍ು ಮುಗಿದ ನಂತರ ಸೆಪ್ಟಂಬರ್‌ ಅಂತ್ಯದಿಂದ ಜನಸ್ಪಂದನಾ ಕಾರ್ಯಕ್ರಮ ನಡೆಸುತ್ತೇನೆ.

ಹರಪನಹಳ್ಳಿ: ಜನರ ಅಹವಾಲುಗಳನ್ನು ಆಲಿಸಿ ಬಗೆಹರಿಸಲು ಶೀಘ್ರ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿ ತಾಲೂಕುಗಳಲ್ಲೂ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಅವರು ಪಟ್ಟಣದ ಕಾಶಿ ಬಡಾವಣೆಯ ಶಾಸಕರ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿನಂದನಾ ಕಾರ್ಯಕ್ರಮಗಳ‍ು ಮುಗಿದ ನಂತರ ಸೆಪ್ಟಂಬರ್‌ ಅಂತ್ಯದಿಂದ ಜನಸ್ಪಂದನಾ ಕಾರ್ಯಕ್ರಮ ನಡೆಸುತ್ತೇನೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಗೆ ಪ್ರಯತ್ನ:

ಹೊಸಪೇಟೆ -ಹರಿಹರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಈಗಾಗಲೇ ಕೇಂದ್ರ ಸಚಿವ ನಿತನ್‌ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಆ ಕಡೆ ನಿಗಾ ವಹಿಸುತ್ತೇನೆ ಎಂದರು.

ಸಣ್ಣ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಉದ್ಯೋಗ ಅವಕಾಶಗಳ ಹೆಚ್ಚಳಕ್ಕೆ ಪ್ರಯತ್ನ, ಲೋಕಸಭಾ ಕ್ಷೇತ್ರಗಳ ಪ್ರತಿ ತಾಲೂಕುಗಳ ಬೇಡಿಕೆಗಳ ಕುರಿತು ವರದಿ ಸಂಗ್ರಹಿಸಿಕೊಂಡು ಆಯಾ ಶಾಸಕರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಗ್ರಾಪಂ ಸದಸ್ಯರು ಮುಖಂಡರ ಸಭೆ ನಡೆಸಿ ಅಭಿವೃದ್ಧಿಯತ್ತ ಗಮನಹರಿಸುತ್ತೇನೆ ಎಂದು ಹೇಳಿದರು.

ಶಾಲಾ ಕಟ್ಟಡ, ರಸ್ತೆ ಅಭಿವೃದ್ಧಿ, ಆಸ್ಪತ್ರೆಗಳ ಅಬಿವೃದ್ಧಿ ಬಗ್ಗೆ ಸಂಸದರ ನಿಧಿಯಲ್ಲಿ ಅನುದಾನ ಒದಗಿಸುತ್ತೇನೆ ಎಂದು ಹೇಳಿದರು.

ಶಾಸಕಿ ಎಂ.ಪಿ. ಲತಾ ಹಾಗೂ ನಾನು ಜೋಡೆತ್ತಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉತ್ತರಿಸಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ , ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಕುಬೇರಪ್ಪ, ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಲಕ್ಷ್ಮಿ, ದೇವೇಂದ್ರಗೌಡ, ಮಂಜನಾಯ್ಕ, ಕೆ.ಕಲ್ಲಹಳ್ಳಿ ಅರವಿಂದ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ ಇತರರು ಇದ್ದರು.

ಹರಪನಹಳ್ಳಿಯ ಶಾಸಕರ ನಿವಾಸದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾರ್ಯಕರ್ತರನ್ನು ಭೇಟಿ ಮಾಡಿದರು. ಶಾಸಕಿ ಎಂ.ಪಿ.ಲತಾ ಇದ್ದರು.