ಡಾ.ರಾಜ್‌ ನಟನೆಗೆ ಅವರು ಮಾತ್ರವೇ ಸಾಟಿ

KannadaprabhaNewsNetwork | Published : Apr 24, 2025 11:48 PM

ಸಾರಾಂಶ

ವರನಟ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರು ತಮ್ಮ ಅಮೋಘ ನಟನೆ, ಗಾಯನದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದರೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ವರನಟ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರು ತಮ್ಮ ಅಮೋಘ ನಟನೆ, ಗಾಯನದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದರೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಬಣ್ಣಿಸಿದರು. ನಗರದ ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಡಾ.ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಡಾ. ರಾಜ್ ಕುಮಾರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜರಸ ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಡಾ.ರಾಜ್ ಅವರು ಅಭಿನಯಿಸದ ಪಾತ್ರಗಳಿಲ್ಲ. ಕರ್ನಾಟಕದಲ್ಲಿ ಅಣ್ಣಾವ್ರು ಎಂದೇ ಪ್ರಸಿದ್ಧಿ. ಅವರ ಚಿತ್ರಗಳು ಇಡೀ ಕುಟುಂಬ ಒಟ್ಟಿಗೇ ಕುಳಿತು ವೀಕ್ಷಿಸುವಂತಹದಾಗಿದ್ದವು. ಅವರು ನಟಿಸಿರುವ ಚಿತ್ರದ ಗೀತೆಗಳ ಸಾಹಿತ್ಯ ಅರ್ಥಪೂರ್ಣವಾಗಿರುತ್ತಿದ್ದವು. ಅಣ್ಣಾವ್ರ ನಟನೆ ಹಾಗೂ ಗಾಯನಕ್ಕೆ ಅವರೇ ಸಾಟಿಯಾಗಿದ್ದರು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಡಾ. ರಾಜ್‌ಕುಮಾರ್ ಅವರು ಸರಳ ಹಾಗೂ ಮೇರು ವ್ಯಕ್ತಿತ್ವ ಹೊಂದಿದ್ದರು. ಹೆಚ್ಚೇನು ವ್ಯಾಸಂಗ ಮಾಡದಿದ್ದರೂ ತಮ್ಮ ನಿರರ್ಗಳ ಕನ್ನಡದ ಮಾತುಗಳಿಂದ ವಾಗ್ದೇವಿ ಪುತ್ರರೆನಿಸಿಕೊಂಡಿದ್ದರಲ್ಲದೆ ಕನ್ನಡಾಭಿಮಾನದಿಂದ ರಾಷ್ಟ್ರದ ಗಮನ ಸೆಳೆದಿದ್ದರು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ ಡಾ. ರಾಜ್ ಅವರು ಸ್ವಯಂ ಸಾಧಕ. ಯಾವುದೇ ಬೆಂಬಲವಿಲ್ಲದೆ ತಮ್ಮ ಕಠಿಣ ಶ್ರಮದಿಂದ ಉನ್ನತ ಸ್ಥಾನಕ್ಕೇರಿ ಕನ್ನಡಿಗರ ಜನಮಾನಸದಲ್ಲಿ ಉಳಿದಿದ್ದಾರೆ. ಸಂಗೀತ ಹಾಗೂ ನಟನೆಯನ್ನು ಜೊತೆ ಜೊತೆಗೆ ತೊಡಗಿಸಿಕೊಂಡ ಬಹುಮುಖ ಪ್ರತಿಭೆ ಹೊಂದಿರುವ ಕನ್ನಡಿಗರಲ್ಲಿ ಇವರು ಅಗ್ರಗಣ್ಯರು ಎಂದು ತಿಳಿಸಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣ್ ದಾಸ್ ಮಾತನಾಡಿ ಡಾ. ರಾಜ್‌ಕುಮಾರ್ ಅವರು ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ದೀರ್ಘ ಕಾಲ ನಾಟಕಗಳಲ್ಲಿ ಅಭಿನಯಿಸಿದ ನಂತರ ಚಿತ್ರರಂಗಕ್ಕೆ ಪ್ರವೇಶಿಸಿದರು. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಮೊದಲ ಅವಕಾಶ ಪಡೆದರು. ರಾಜ್‌ಕುಮಾರ್ ಅವರು 220 ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಡಾ. ರಾಜ್‌ಕುಮಾರ್ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ ಮೊದಲಾದ ಬಿರುದುಗಳನ್ನು ಪಡೆದುಕೊಂಡು ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರೆನಿಸಿಕೊಂಡಿದ್ದರು ಎಂದು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ. ಹಿಮಂತರಾಜು ಕಾರ್ಯಕ್ರಮವನ್ನು ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ರಾಜ್ ಕುಮಾರ್ ಅವರ ಸರಳ-ಸಜ್ಜನಿಕೆ ಹಾಗೂ ಮೇರು ವ್ಯಕ್ತಿತ್ವ, ನಟನೆ, ಗಾಯನ, ಭಾಷಾಭಿಮಾನ, ಸಮಯ ಪಾಲನೆ, ಸೌಜನ್ಯತೆ, ಸಿನಿಪಯಣ, ಸಹ ನಟರೊಂದಿಗೆ ಸ್ನೇಹಭಾವಗಳ ಬಗ್ಗೆ ಪರಿಚಯಿಸಿದರು. ಡಾ: ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಕೆ. ರಾಜಶೇಖರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗಪ್ಪ, ಸರಿಗಮಪ ಖ್ಯಾತಿ ಡಾ: ಶ್ರಾವ್ಯ, ವಾರ್ತಾ ಇಲಾಖೆಯ ಆರ್. ರೂಪಕಲಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ಸೂರಜ್ ಅವರ ಹೃದಯ ಸಮುದ್ರ ಕಲಕಿ-ಹೊತ್ತಿದೆ ದೇಶದ ಬೆಂಕಿ , ಮಲ್ಲಸಂದ್ರ ಪಂಚಾಯತಿ ಅಧ್ಯಕ್ಷೆ ರತ್ನಮ್ಮ ಅವರ ಬಾಳ ಬಂಗಾರ ನೀನು-ಹಣೆಯ ಸಿಂಗಾರ ನೀನು , ಎಸ್. ಸಿದ್ದೇಶ್ ಅವರ ನಾವಾಡುವ ನುಡಿಯೇ ಕನ್ನಡ ನುಡಿ , ಸೂರಜ್ ಹಾಗೂ ಚಂದನ ಅವರ ಜೀವ ಹೂವಾಗಿದೆ-ಭಾವ ಜೇನಾಗಿದೆ ಗೀತೆಗಳು ಕೇಳುಗರ ಮನ ತಣಿಸಿದರು. ಚಿಣ್ಣರು ಹೆಜ್ಜೆ ಹಾಕಿದ ರಾಜ್ ಗೀತೆಗಳ ರೀಮಿಕ್ಸ್ ಹಾಡುಗಳು ನೋಡುಗರ ಕಣ್ಮನ ಸೆಳೆದವು.

Share this article