ಡಾ.ರಾಜ್‍ಕುಮಾರ್ ಸರಳತೆ, ಆದರ್ಶ ವ್ಯಕ್ತಿತ್ವ ಯುವಜನತೆಗೆ ಪ್ರೇರಕ

KannadaprabhaNewsNetwork |  
Published : May 01, 2026, 02:30 AM IST
ಡಾ.ರಾಜ್‌ಕುಮಾರ್ ಅವರ 97ನೇ ಜನ್ಮದಿನಾಚರಣೆ ಆಚರಿಸಲಾಯಿತು | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಡಾ.ರಾಜ್‍ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಮಂಗಳೂರು: ವರನಟ, ನಟಸಾರ್ವಭೌಮ ಎಂದೇ ಬಿರುದು ಪಡೆದ ಡಾ.ರಾಜ್‍ಕುಮಾರ್ ಅವರ ಸರಳ ವ್ಯಕ್ತಿತ್ವ ಯುವಜನತೆಗೆ ಮಾದರಿ. ಇಂದಿನ ಯುವಜನತೆ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಅವರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಡಾ.ರಾಜ್‍ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್‍ಕುಮಾರ್ ಅವರು ಸರಳತೆ ಮತ್ತು ಉತ್ತಮ ಮೌಲ್ಯಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು. ಕನ್ನಡ ಚಲನಚಿತ್ರ ರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಡಾ.ರಾಜ್‍ಕುಮಾರ್ ಅವರ ಜನ್ಮ ದಿನವನ್ನು ಸರ್ಕಾರಆಚರಿಸುತ್ತಿರುವುದು ಶ್ಲಾಘನೀಯ. ಯುವಜನತೆ ಸನ್ಮಾರ್ಗದಲ್ಲಿ ನಡೆದರೆ ಉತ್ತಮ ಪ್ರಜೆಗಳಾಗಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಉಪನ್ಯಾಸ ನೀಡಿ, ಡಾ.ರಾಜ್‍ಕುಮಾರ್ ಅವರು ಕನ್ನಡ ನಾಡು ಸಮೃದ್ಧಗೊಳಿಸಿದ ಮಹಾನ್ ನಾಯಕ. ಅಭಿಮಾನಿಗಳು ತಮ್ಮ ಆದರ್ಶಗಳನ್ನು ಹಿಂಬಾಲಿಸುವ ಕಾರಣದಿಂದ ತಾವು ನಟಿಸಿದ ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನದ ದೃಶ್ಯವನ್ನು ಅಭಿನಯಿಸಲಿಲ್ಲ. ಚಲನಚಿತ್ರದಲ್ಲಿ ಮಾತ್ರವಲ್ಲದೆ ಅವರು ನಿಜ ಜೀವನದಲ್ಲಿಯೂ ನಾಯಕರಾಗಿದ್ದು, ಅಭಿನಯವನ್ನು ನಿಜ ಜೀವನದಲ್ಲಿಯೂ ತೋರಿಸಿದವರು ಎಂದು ಹೇಳಿದರು.ಕನ್ನಡ ಚಲನಚಿತ್ರ ರಂಗದ ಬಹುಬೇಡಿಕೆಯ ನಟರಾಗಿದ್ದ ಅವರು ಪರಭಾಷಾ ಚಲನಚಿತ್ರದಲ್ಲಿ ನಟಿಸುತ್ತಿರಲಿಲ್ಲ. ಐತಿಹಾಸಿಕ, ಭಕ್ತಿ ಪ್ರಧಾನ, ಪೌರಾಣಿಕ ಹೀಗೆ 212 ಚಲನಚಿತ್ರಗಳಲ್ಲಿ ನಟಿಸಿದ ಅವರು ಜೀವನದ ಎಲ್ಲ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಿನಯದ ಜೊತೆಗೆ ಅವರ ಗಾಯನಗಳು ಚಲನಚಿತ್ರ ರಂಗದಲ್ಲಿ ಛಾಪು ಮೂಡಿಸಿದ್ದವು. ಅವರ ಚಲನಚಿತ್ರಗಳು ಮನರಂಜನೆ ಮಾತ್ರವಲ್ಲದೆ ಜೀವನದ ಉತ್ತಮ ಮೌಲ್ಯಗಳನ್ನು ತಿಳಿಸುತ್ತಿದ್ದವು. ಅವರಿಗೆ ರಾಜಕೀಯ ಅವಕಾಶಗಳು ಒದಗಿ ಬಂದರೂ ಅದನ್ನು ತೊರೆದು, ಕನ್ನಡ ಚಲನಚಿತ್ರರಂಗದಲ್ಲಿಯೇ ವಿಶೇಷವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಗೋಕಾಕ್ ಚಳುವಳಿಯಂತಹ ಕನ್ನಡ ಭಾಷಾ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ, ಕನ್ನಡದ ಅಸ್ಮಿತೆ ಎತ್ತಿ ಹಿಡಿದವರಲ್ಲಿ ಡಾ.ರಾಜ್‍ಕುಮಾರ್ ಅವರು ಒಬ್ಬರಾಗಿದ್ದರು. ಕನ್ನಡ ನಾಡು ನುಡಿಗೆ ವಿಶೇಷವಾದ ಕೊಡುಗೆ ನೀಡಿದ್ದಾರೆ ಎಂದು ಹರೀಶ್ ರೈ ಹೇಳಿದರು.ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಎಸ್. ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್ ಇದ್ದರು.

ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಲಹೆಗಾರ ಡಾ.ಅಬೂಬಕ್ಕರ್ ಸಿದ್ದಿಕ್ ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ಉಪನ್ಯಾಸಕ ಡಾ.ವೆಂಕಟೇಶ್ ನಾಯಕ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ: ಶಾಸಕ ವೈದ್ಯ
ರಣಬಿಸಿಲಿಗೆ ಗಣತಿದಾರರು ತೀವ್ರ ಹೈರಾಣು