ಕನ್ನಡಪ್ರಭ ವಾರ್ತೆ ಶಹಾಪುರ
ವೃದ್ಧೆಯು ವಾಸವಿರುವ ಗುಡಿಸಲು ಮುಳ್ಳು ಕಂಟಿಯ ಮಧ್ಯೆ ಇದ್ದು, ಅಲ್ಲಿ ವಿಷ ಜಂತುಗಳ ತಾಣವೇ ಇದೆ. ಅದರಲ್ಲಿಯೆ ಆಕೆ ನಿತ್ಯ ವಾಸ, ಆಕೆಯ ಸುತ್ತಮುತ್ತಲ ಮನೆಗಳ ಜನರು ಊಟ ನೀಡುತ್ತಾರೆ. ಆಕೆಯ ಗಂಡ ತೀರಿ ಹೋಗಿದ್ದು, ಸಮಾಧಿ ಪಕ್ಕದಲ್ಲೆ ಸುಮಾರು ವರ್ಷಗಳಿಂದ ವಾಸಿಸುತ್ತಿದ್ದಾಳೆ. 4 ಗಂಡು ಮಕ್ಕಳು ಇದ್ದು ದುಶ್ಚಟಗಳಿಗೆ ದಾಸರಾದ ಅವರು ಎಲ್ಲೆಂದರಲ್ಲಿ ಇರುತ್ತಾರೆ. ವೃದ್ಧೆಯ ಬಳಿ ಯಾವುದೆ ಗುರುತಿನ ಚೀಟಿ ಇಲ್ಲದೆ ಸರ್ಕಾರದ ಯಾವುದೆ ಸೌಲಭ್ಯ ಪಡೆಯದೆ ವಂಚಿತೆಯಾಗಿದ್ದಾಳೆ. ಆಕೆಯದ್ದೆ ಖಾಲಿ ನಿವೇಶನವಿದ್ದು ಅಲ್ಲಿಯೇ ಮನೆ ನಿರ್ಮಿಸಲು ನ್ಯಾ.ರವೀಂದ್ರ ಹೊನೋಲೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ನ್ಯಾ. ರವೀಂದ್ರ ಹೊನೋಲೆ ವೃದ್ಧೆಯ ಸಮಸ್ಯೆ ಆಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂರಿನ ಜತೆಗೆ ಮೂಲಸೌಕರ್ಯಗಳು ತಕ್ಷಣ ಒದಗಿಸಲು ಸೂಚಿಸಿದರು.ಮನವಿಗೆ ಸ್ಪಂದಿಸಿದ ಶಹಾಪುರ ತಾಪಂ ಇಒ ಸೋಮಶೇಖರ್ ಬಿರಾದಾರ್, ಶನಿವಾರ ಗ್ರಾಮದ ನಾಗಮ್ಮಳ ಮನೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಮನಗಂಡು ತಕ್ಷಣ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ವೃದ್ಧೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಾದರಿ ಮನೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದರು.
ಜಿಲ್ಲಾ ನ್ಯಾಯಾಧೀಶರ ಭೇಟಿ ವೇಳೆ ಉಪತಹಸೀಲ್ದಾರ್ ಸಂಗಮೇಶ ನಾಯಕ್, ಆರ್.ಐ. ಮಹೇಂದ್ರಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ದೇವೆಂದ್ರ ಬಿರಾದಾರ್ ಸೇರಿದಂತೆ ಅಂಬೇಡ್ಕರ್ ನಗರದ ನಿವಾಸಿಗಳು ಇದ್ದರು. ತಾಪಂ ಇಒ ಬೇಟಿ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ, ಸದಸ್ಯೆ ತಾಯಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್, ಗ್ರಾಮ ಆಡಳಿತ ಅಧಿಕಾರಿ, ಹಾಗೂ ಆರೋಗ್ಯ ಅಧಿಕಾರಿಗಳು, ಗ್ರಾಮದ ನಿವಾಸಿಗಳು ಹಾಜರಿದ್ದರು.ನೋಂದವರ, ಸರ್ಕಾರಿ ಸೌಲಭ್ಯ ವಂಚಿತ ವ್ಯಕ್ತಿಗಳು, ಮಾನಸಿಕ ಅಸ್ವಸ್ಥರು, ವಿಕಲಚೇತನರು, ಕೋಮು ಘರ್ಷಣೆಗೆ ಬಲಿಯಾದವರು, ಎಸ್ಸಿ, ಎಸ್ಟಿ, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕೆಲಸಗಾರರು ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಕಾನೂನು ಸೇವಾ ಪ್ರಾಧಿಕಾರ ನೆರವು ನೀಡಲು ಸದಾ ಸಿದ್ಧವಿದೆ.
ಉಮಾಕಾಂತ ಹಳ್ಳೆ, ತಹಸೀಲ್ದಾರ್, ಶಹಾಪುರ.